ಬೆಳ್ತಂಗಡಿ: ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಒಡಿಲ್ನಾಳ ಗ್ರಾಮದ ಸಂಬೋಳ್ಯದಲ್ಲಿ ಬುಧವಾರ(ಜ.14) 15 ವರ್ಷದ ಸುಮಂತ್ ಎಂಬ ಬಾಲಕನ ಸಾವಿನ ಪ್ರಕರಣದಲ್ಲಿ ಹೊಸ ಮಾಹಿತಿ ಹೊರಬಿದ್ದಿದೆ.

ಶವಪರೀಕ್ಷೆಯ ನಂತರ ಲಭಿಸಿರುವ ಪ್ರಾಥಮಿಕ ವರದಿಯ ಪ್ರಕಾರ, ಸುಮಂತ್ ಕೆರೆಯಲ್ಲಿ ಮುಳುಗುವ ಸಮಯದಲ್ಲಿ ಜೀವಂತನಾಗಿದ್ದನು ಮತ್ತು ಅವನ ತಕ್ಷಣದ ಸಾವಿನ ಕಾರಣ ಮುಳುಗು ಸಾವು ಎಂದು ತಿಳಿಸಲಾಗಿದೆ. ಶವಪರೀಕ್ಷೆಯಲ್ಲಿ ಮೃತನ ತಲೆಯ ಮೇಲೆ ಮಂದ ಬಲದ ಗಾಯಗಳು (ಬ್ಲಂಟ್ ಇಂಜುರಿ) ಕಂಡುಬಂದಿದ್ದು, ಯಾವುದೇ ಚೂಪಾದ ಆಯುಧಗಳಿಂದ ಆಗಿರುವ ಗಾಯಗಳು ಅಲ್ಲ ಎಂಬುದು ದೃಢಪಟ್ಟಿದೆ.

ಆದರೆ ತಲೆಯ ಮೇಲಿನ ಗಾಯಗಳು ಹೇಗೆ ಉಂಟಾಗಿವೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಸಂಶಯಗಳು ಉಂಟಾಗಿರುವುದರಿಂದ, ಇದುವರೆಗೆ ಅಸಹಜ ಸಾವು ಪ್ರಕರಣವಾಗಿ ದಾಖಲಾಗಿದ್ದುದನ್ನು ಇದೀಗ ಕೊಲೆ ಪ್ರಕರಣವಾಗಿ ಪರಿವರ್ತಿಸಿ ತನಿಖೆ ನಡೆಸಲಾಗುತ್ತಿದೆ.
ಪ್ರಕರಣದ ಸಮಗ್ರ ತನಿಖೆಗಾಗಿ ಬೆಳ್ತಂಗಡಿ ಉಪ ಪೊಲೀಸ್ ಅಧೀಕ್ಷಕ (ಡಿಎಸ್ಪಿ) ಅವರ ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ದಕ ಎಸ್ಪಿ ಡಾ. ಅರುಣ್ ಕುಮಾರ್ ತಿಳಿಸಿದ್ದಾರೆ.
ನಿಗೂಢ ನಾಪತ್ತೆಯಾಗಿದ್ದ ಬಾಲಕನ ಶವ ಬಾವಿಯಲ್ಲಿ ಪತ್ತೆ- ಅನುಮಾನ ಮೂಡಿಸಿದ ರಕ್ತದ ಕಲೆಗಳು