ರಾಕೇಶ್ ರೈ ಅಡ್ಕ ಮುಡಿಗೆ ʻಕಂಬಳ ಗುತ್ತು ಬಾಲಕೃಷ್ಣ ಶೆಟ್ಟಿ ಸ್ಮೃತಿ ಪ್ರಶಸ್ತಿʼಯ ಗರಿ

ಮಂಗಳೂರು:‌ ತೆಂಕು ತಿಟ್ಟು ಯಕ್ಷಗಾನದ ಬಹುಮುಖ ಪ್ರತಿಭೆ, ಪ್ರಸಿದ್ಧ ಯುವ ವೇಷಧಾರಿ, ಯಕ್ಷಗುರು, ಸಂಘಟಕ ಹಾಗೂ ಪ್ರಯೋಗಶೀಲ ನಿರ್ದೇಶಕ ರಾಕೇಶ್ ರೈ ಅಡ್ಕ ಅವರಿಗೆ ಈ ವರ್ಷದ ಕದ್ರಿ ಕಂಬಳ ಗುತ್ತು ಬಾಲಕೃಷ್ಣ ಶೆಟ್ಟಿ ಸ್ಮೃತಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

  

ಪ್ರಶಸ್ತಿ ಪ್ರದಾನ ಸಮಾರಂಭವು ಜನವರಿ 11ರಂದು (ಆದಿತ್ಯವಾರ) ಕದ್ರಿ ಕಂಬಳ ಗುತ್ತಿನ ಪಾವಂಜೆ ಮೇಳದ ಯಕ್ಷಗಾನ ಸೇವೆ ಆಟದ ವೇದಿಕೆಯಲ್ಲಿ ನಡೆಯಲಿದೆ.

ರಾಕೇಶ್ ರೈ ಅಡ್ಕ ಅವರು ಪ್ರಖರ ರಾಷ್ಟ್ರವಾದಿ ಸಂಘಟಕ ಹಾಗೂ ಶಿಕ್ಷಕರಾಗಿದ್ದ ದಿ. ಜಲಂಧರ ರೈ ಅವರ ಶಿಷ್ಯರಾಗಿದ್ದು, ಹವ್ಯಾಸಿ ಯಕ್ಷಗಾನ ವಲಯದಲ್ಲಿ ಸಿದ್ಧಿ–ಪ್ರಸಿದ್ಧಿ ಗಳಿಸಿದ್ದಾರೆ. ಪುಂಡು, ಸ್ತ್ರೀ ಹಾಗೂ ರಾಜವೇಷಗಳ ನಿರ್ವಹಣೆಯಲ್ಲಿ ಅನುಪಮ ಸಾಧನೆ ಮಾಡಿರುವ ಅವರು ಕಟೀಲು ಮತ್ತು ಬಪ್ಪನಾಡು ಮೇಳಗಳಲ್ಲಿ ಮಿಂಚಿದ್ದಾರೆ. ಪಟ್ಲ ಭಾಗವತರ ಪಾವಂಜೆ ಮೇಳದಲ್ಲಿ ಕಲಾ ವ್ಯವಸಾಯ ಮಾಡುತ್ತಿರುವ ಅವರು, ಬಪ್ಪನಾಡು ಮೇಳದಲ್ಲಿ ಅತಿಥಿ ಕಲಾವಿದರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಮೇಳಗಳ ನಿರಂತರ ತಿರುಗಾಟದ ಜೊತೆಗೆ, ಮೂರು ಜಿಲ್ಲೆಗಳಲ್ಲಿ ಒಟ್ಟು 19 ಕೇಂದ್ರಗಳಲ್ಲಿ ಯಕ್ಷಗಾನ ತರಬೇತಿ ನೀಡುವ ಮೂಲಕ ರಾಕೇಶ್ ರೈ ಅಡ್ಕ ಅವರು ಸಮರ್ಪಿತ ಯಕ್ಷಗುರುವೂ ಆಗಿದ್ದಾರೆ.

ಈ ಪ್ರಶಸ್ತಿಯನ್ನು ಕದ್ರಿ ಕಂಬಳ ಗುತ್ತಿನ ಯಜಮಾನರಾಗಿದ್ದು, ಹವ್ಯಾಸಿ ಯಕ್ಷಗಾನ ಅರ್ಥಧಾರಿಗಳಾಗಿದ್ದ ದಿವಂಗತ ಕದ್ರಿ ಕಂಬಳ ಗುತ್ತು ಬಾಲಕೃಷ್ಣ ಶೆಟ್ಟಿ ಅವರ ಸ್ಮರಣಾರ್ಥವಾಗಿ ನೀಡಲಾಗುತ್ತಿದೆ. ಖ್ಯಾತ ವೈದ್ಯರಾದ ಡಾ. ಜಯಶಂಕರ ಮಾರ್ಲ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದು, ಈ ವಿಷಯವನ್ನು ಸೇವಾರ್ಥಿ ಉಷಾ ನವನೀತ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭ ಕದ್ರಿ ಕಂಬಳ ಗದ್ದೆಯಲ್ಲಿ ಪಾವಂಜೆ ಮೇಳದ “ಶ್ರೀ ದೇವೀ ಮಹಾತ್ಮೆ” ಯಕ್ಷಗಾನ ಸೇವೆ ಬಯಲಾಟವೂ ನಡೆಯಲಿದೆ.

error: Content is protected !!