ದ.ಕ.ದಲ್ಲಿ 19 ವಿದ್ಯಾರ್ಥಿಗಳಲ್ಲಿ ಚಿಕನ್‌ ಪಾಕ್ಸ್‌ ಬಾಧೆ: ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಮುನ್ನೆಚ್ಚರಿಕೆಗೆ ಸೂಚನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ 19 ವಿದ್ಯಾರ್ಥಿಗಳಲ್ಲಿ ಚಿಕನ್‌ ಪಾಕ್ಸ್‌ ಪ್ರಕರಣ ಕಂಡುಬಂದಿದ್ದು, ಅದು ಹರಡದಂತೆ ಶಿಕ್ಷಣ ಸಂಸ್ಥೆಗಳಲ್ಲಿ ಮುನ್ನೆಚ್ಚ ರಿಕೆ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆಯಿಂದ ಸೂಚನೆ ಕಳುಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಅವರು , ಮಂಗಳೂರಿನ ಒಂದು ಶಿಕ್ಷಣ ಸಂಸ್ಥೆಯ 17 ವಿದ್ಯಾರ್ಥಿಗಳಲ್ಲಿ ಮತ್ತು ಇನ್ನೊಂದು ವಿದ್ಯಾಸಂಸ್ಥೆಯ ಇಬ್ಬರಲ್ಲಿ ಚಿಕನ್‌ ಪಾಕ್ಸ್‌ ಪತ್ತೆಯಾಗಿತ್ತು. ಅವರನ್ನು ಶಾಲೆಗೆ ಕಳುಹಿಸದೆ ಮನೆಯಲ್ಲೇ ಇರುವಂತೆ ಹೇಳಿದ್ದು, ಅವರೀಗ ಗುಣಮುಖರಾಗಿದ್ದಾರೆ. ಸದ್ಯ ಎಲ್ಲೂ ಪ್ರಕರಣಗಳಿಲ್ಲ. ಚಿಕನ್‌ ಪಾಕ್ಸ್‌ ಹರಡಲು ಚಳಿಗಾಲ ಪ್ರಶಸ್ತವಾಗಿದೆ. ಈ ಕಾಯಿಲೆ ಬಗ್ಗೆ ಭಯ ಪಡಬೇಕೆಂದಿಲ್ಲ, ಆದರೆ ಮುನ್ನೆಚ್ಚರಿಕೆ ಅಗತ್ಯ ಎಂದಿದ್ದಾರೆ.

ಸೋಂಕಿತ ರೋಗಿಯ ಬೊಕ್ಕೆಗಳನ್ನು ಮುಟ್ಟಿದಾಗ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಸ್ವತ್ಛ ಮಾಡಿಕೊಳ್ಳಬೇಕು. ಮನೆ, ಶಾಲೆ, ಕಿಂಡರ್‌ಗಾರ್ಟನ್‌ ಮುಂತಾದ ಸ್ಥಳಗಳಲ್ಲಿ ಸ್ವತ್ಛತೆಯನ್ನು ಕಾಪಾಡಬೇಕು. ಸೋಂಕಿತ ಮಕ್ಕಳ ಜತೆಗೆ ಹತ್ತಿರದ ಸಂಪರ್ಕವನ್ನು ಇಡಬಾರದು. ಸೋಂಕಿತ ಜಾಗವನ್ನು ಅಥವಾ ಮಕ್ಕಳ ಆಟಿಕೆಗಳನ್ನು ಸಾಬೂನು ಮತ್ತು ನೀರಿನಿಂದ ಸ್ವತ್ಛ ಮಾಡಿಕೊಳ್ಳಬೇಕು. ಅನಾರೋಗ್ಯವಿದ್ದರೆ ಹತ್ತಿರದ ಸರಕಾರಿ ಆಸ್ಪತ್ರೆಗಳಲ್ಲಿ ಪರೀಕ್ಷಿಸಿಕೊಳ್ಳಬೇಕು ಹಾಗೂ ವೈದ್ಯರನ್ನು ಸಂಪರ್ಕಿಸದೇ ಔಷಧವನ್ನು ತೆಗೆದುಕೊಳ್ಳಬಾರದು ಎಂದು ಮುನ್ನೆಚ್ಚರಿಕೆಯ ಕ್ರಮ ತೆಗೆದುಕೊಳ್ಳಬೇಕೆಂದು ಜಿಲ್ಲಾ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

error: Content is protected !!