ಅಕ್ರಮ ಸಂಬಂಧ; ಇಸ್ಲಾಂಗೆ ಮತಾಂತರಗೊಳ್ಳುವಂತೆ ಕಿರುಕುಳ ತಾಳಲಾರದೆ ಗೃಹಿಣಿ ಆತ್ಮಹತ್ಯೆ

ಬೆಳಗಾವಿ: ತನ್ನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ವ್ಯಕ್ತಿ ಇಸ್ಲಾಂಗೆ ಮತಾಂತರವಾಗುವಂತೆ ಹಿಂಸಿಸುತ್ತಿದ್ದದ್ದನ್ನು ತಡೆಯಲಾರದೇ ವಿವಾಹಿತ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿಯ ರಾಮದುರ್ಗದಲ್ಲಿ ವರದಿಯಾಗಿದೆ.

ಮಕ್ತುಮಸಾಬ್ ಪಾಟೀಲ್​ ಪ್ರಕರಣದ ಆರೋಪಿ. ಈತನ ಕಿರುಕುಳಕ್ಕೆ ಬೇಸತ್ತು ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಗೃಹಿಣಿಯನ್ನು ನಾಗವ್ವ ವಂಟಮೂರಿ(28) ಎಂದು ಗುರುತಿಸಲಾಗಿದೆ. ಮುಸ್ಲಿಂ ಧರ್ಮಕ್ಕೆ ಮತಾಂತರವಾಗದೇ ಇದ್ದಲ್ಲಿ ಕೊಲೆ ಮಾಡುವುದಾಗಿ ಮಕ್ತುಮಸಾಬ್ ಪಾಟೀಲ್ ಜೀವ ಬೆದರಿಕೆ ಹಾಕುತ್ತಿದ್ದ ಎಂದು ಆರೋಪಿಸಲಾಗಿದೆ.

9 ವರ್ಷಗಳ ಹಿಂದೆ ದೇಮಪ್ಪ-ನಾಗವ್ವ ಮದುವೆಯಾಗಿದ್ದರು. ಮದುವೆಯಾದ 1 ವರ್ಷಕ್ಕೆ ನಾಗವ್ವಗೆ ಮಕ್ತುಮ್​ಸಾಬ್ ಪರಿಚಯವಾಗಿದ್ದ. ಪರಿಚಯ ಅನೈತಿಕ ಸಂಬಂಧವಾಗಿ ಬೆಳೆದಿತ್ತು. ಈ ವಿಚಾರ ನಾಗವ್ವನ ಮನೆಯಲ್ಲಿ ಗೊತ್ತಾಗಿ ಮಕ್ತುಮ್​ಸಾಬ್ ಪಾಟೀಲ್ ಸಂಪರ್ಕ ತ್ಯಜಿಸುವಂತೆ ಬುದ್ಧಿವಾದ ಹೇಳಿದ್ದರು. ​

ಮನೆಯವರ ಸೂಚನೆ ಮೇರೆಗೆ ನಾಗವ್ವ ಆತನ ಸಂಪರ್ಕ ಕಡಿತಗೊಳಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಮಕ್ತುಮಸಾಬ್ ಪಾಟೀಲ್ ಧಮ್ಕಿ ಹಾಕುತ್ತಿದ್ದ. ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವಂತೆ ಕಿರುಕುಳ ನೀಡುತ್ತಿದ್ದ. ಮತಾಂತರ ಆಗದಿದ್ದರೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ನಾಗವ್ವ ಕುಟುಂಬದವರು ಆರೋಪಿಸಿದ್ದಾರೆ.

error: Content is protected !!