ಡಿವೈಡರ್‌ಗೆ ಗುದ್ದಿ ಹೊತ್ತಿ ಉರಿದ ಐ20 ಕಾರ್:‌ ಲೋಕಾ ಇನ್ಸ್‌ಪೆಕ್ಟರ್‌ ಸಜೀವ ದಹನ

ಧಾರವಾಡ: ಕಾರೊಂದು ಡಿವೈಡರ್​ಗೆ ಢಿಕ್ಕಿಯಾಗಿ ನಡುರಸ್ತೆಯಲ್ಲೇ ಹೊತ್ತಿ ಉರಿದ ಪರಿಣಾಮ ಲೋಕಾಯುಕ್ತ ಇನ್ಸ್​​ಪೆಕ್ಟರ್ ಸಜೀವ ದಹನಗೊಂಡ ದುರ್ಘಟನೆ ಧಾರವಾಡ ಜಿಲ್ಲೆ ಅಣ್ಣಿಗೇರಿ ಪಟ್ಟಣದ ಹೊರವಲಯದಲ್ಲಿ ಸಂಭವಿಸಿದೆ. ಹಾವೇರಿ ಲೋಕಾಯುಕ್ತ ಇನ್ಸ್​​ಪೆಕ್ಟರ್​​​ ಆಗಿದ್ದ ಪಂಚಾಕ್ಷರಿ ಸಾಲಿಮಠ ಭೀಕರವಾಗಿ ಮೃತಪಟ್ಟವರು. ಇವರು ನಿನ್ನೆ ಐ20 ಕಾರಿನಲ್ಲಿ ಗದಗ ಕಡೆ ಹೊರಟಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಡಿವೈಡರ್​​ಗೆ ಢಿಕ್ಕಿಯಾಗಿ ಬಳಿಕ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನೋಡ ನೋಡುತ್ತಿದ್ದಂತೆಯೇ ಧಗಧಗ ಹೊತ್ತಿ ಉರಿದಿದೆ. ಇದರಿಂದ ಇನ್ಸ್​ಪೆಕ್ಟರ್ PS ಸಾಲಿಮಠ ಅವರಿಗೆ ​​ ಲಾಕ್ ತೆಗೆದು ಹೊರಬರಲಾಗದೇ ಕಾರಿನೊಳಗೆ ಬೆಂಕಿಯಲ್ಲಿ ಬೆಂದು ಹೋಗಿದ್ದಾರೆ. ಬೆಂಕಿ ಹೊತ್ತಿಕೊಂಡ ಮಾಹಿತಿ ಸಿಗುತ್ತಿದ್ದಂತೆಯೇ ಸ್ಥಳಕ್ಕೆ ಅಣ್ಣಿಗೇರಿ ಪೊಲೀಸರು ಹಾಗೂ ಅಗ್ನಿಶಾಮಕ ದಳ ದೌಡಾಯಿಸಿದ್ದು, ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಆದ್ರೆ, ಅಷ್ಟರೊಳಗೆ ಇನ್ಸ್​ಪೆಕ್ಟರ್​ ಕಾರಿನೊಳಗೆ ಸುಟ್ಟು ಕರಕಲಾಗಿದ್ದರು.

PS ಸಾಲಿಮಠ ಅವರು ಹಾವೇರಿ ಲೋಕಾಯುಕ್ತ ಇನ್ಸ್ಪೆಕ್ಟರ್ ಆಗಿ ಕೆಲಸ ಮಾಡಿದ್ದರು. ಗದಗದಲ್ಲಿ ಇರುವ ಕುಟುಂಬವನ್ನು ಭೇಟಿ ಮಾಡುಲು ಹೋಗುತ್ತಿದ್ದರು. ಆದ್ರೆ, ವಿಧಿ ಅವರನ್ನು ಅರ್ಧ ಹಾದಿಯಲ್ಲೇ ಈ ರೀತಿ ಬಲಿಪಡೆದುಕೊಂಡಿದೆ. ಮೊನ್ನೆ ಅಷ್ಟೇ ಕರ್ನಾಟಕ ಹಿರಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು.

error: Content is protected !!