ರಿಷಬ್ ಅವರ ಕಾಂತಾರ ಸಿನಿಮಾವನ್ನು ಥಿಯೇಟರ್ನಲ್ಲಿ ನೋಡಿದ್ದೆ. ಅದ್ಭುತವಾಗಿತ್ತು ನಿಮ್ಮ ನಟನೆ. ಅದರಲ್ಲೂ ಹೆಣ್ಣು ದೆವ್ವ ನಿಮ್ಮ ಮೈಸೇರುವ ದೃಶ್ಯವಂತೂ ಅತ್ಯದ್ಭುತವಾಗಿತ್ತು. ಆ ದೃಶ್ಯದಲ್ಲಿ ನಿಮ್ಮ ನಟನೆ ಹಾಗೂ ನಿಮ್ಮ ನೋಟ ಮಜವಾಗಿತ್ತು ಅಂತ ರಣವೀರ್ ಸಿಂಗ್ ಅನುಕರಣೆ ಮಾಡಿ, ದೈವಾರಾಧಕರ ಆಕ್ರೋಶಕ್ಕೆ ತುತ್ತಾದ ಬೆನ್ನಲ್ಲೇ ರಣವೀರ್ ಸಿಂಗ್ ಕ್ಷಮೆ ಯಾಚಿಸಿದ್ದಾರೆ.
ತುಳುನಾಡಿನ ದೈವದ ಬಗ್ಗೆ ನಟ ರಿಷಬ್ ಶೆಟ್ಟಿಯ ಅದ್ಭುತ ಅಭಿನಯ ತೋರಿಸೋದು ನನ್ನ ಉದ್ದೇಶವಾಗಿತ್ತು. ಆ ಭರದಲ್ಲಿ ತಪ್ಪಾಗಿದೆ. ನನ್ನಿಂದ ನೋವಾಗಿದ್ದರೆ ಕ್ಷಮಿಸಿ ಎಂದು ಬಾಲಿವುಡ್ ನಟ ರಣವೀರ್ ಸಿಂಗ್ ಕ್ಷಮೆಯಾಚಿಸಿದ್ದಾರೆ.

ಈ ಕುರಿತು ರಣವೀರ್ ಇನ್ಸ್ಟಾಗ್ರಾಂನಲ್ಲಿ ಸ್ಟೋರಿ ಹಂಚಿಕೊಂಡು, `ಕಾಂತಾರ ಚಾಪ್ಟರ್ 1′ ಚಿತ್ರದಲ್ಲಿ ರಿಷಬ್ ಅವರ ಅದ್ಭುತ ಅಭಿನಯವನ್ನು ಎತ್ತಿ ತೋರಿಸುವುದು ನನ್ನ ಉದ್ದೇಶವಾಗಿತ್ತು. ನಾನೊಬ್ಬ ನಟನಾಗಿ ಆ ನಿರ್ದಿಷ್ಟ ದೃಶ್ಯದಲ್ಲಿ ನಟಿಸುವುದು ಎಷ್ಟು ಸವಾಲಾಗಿರುತ್ತದೆ ಎನ್ನೋದು ನನಗೆ ಚೆನ್ನಾಗಿ ಗೊತ್ತು. ಅವರ ನಟನೆಗೆ ಅಪಾರ ಮೆಚ್ಚುಗೆಯಿದೆ. ನಮ್ಮ ದೇಶದ ಪ್ರತಿಯೊಂದು ಸಂಸ್ಕೃತಿ, ಸಂಪ್ರದಾಯ ಹಾಗೂ ನಂಬಿಕೆಯನ್ನು ನಾನು ಗೌರವಿಸುತ್ತೇನೆ. ನನ್ನಿಂದ ನಿಮ್ಮ ಭಾವನೆಗಳಿಗೆ ನೋವಾಗಿದ್ದರೆ ಕ್ಷಮೆಯಿರಲಿ. ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆʼ ಎಂದು ಬರೆದುಕೊಂಡಿದ್ದಾರೆ.

ಈ ಸಂಬಂಧ ಹಿಂದೂ ಜನಜಾಗೃತಿ ಸಮಿತಿ ರಣವೀರ್ ಸಿಂಗ್ ವಿರುದ್ಧ ದೂರು ದಾಖಲಿಸಿದೆ. ಸಮುದಾಯ ಆರಾಧಿಸುವ ಚಾಮುಂಡಿದೇವಿಯನ್ನು ಹೆಣ್ಣು ದೆವ್ವ ಎಂದು ಅವಮಾನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ನಡೆದಿದ್ದೇನು?
ಗೋವಾದಲ್ಲಿ ನಡೆದ 56ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಿಷಬ್ ಶೆಟ್ಟಿ ನಟನೆಯನ್ನು ಹೊಗಳುವ ಭರದಲ್ಲಿ ರಣವೀರ್ ಸಿಂಗ್ ಅಪಹಾಸ್ಯ ಮಾಡಿದ್ದರು. ಇದರ ಬೆನ್ನಲ್ಲೇ ತುಳುನಾಡಿನ ದೈವಕ್ಕೆ ರಣವೀರ್ ಸಿಂಗ್ ಅಪಮಾನ ಮಾಡಿದ್ದಾರೆಂದು ಸೋಷಿಯಲ್ ಮೀಡಿಯಾ ವ್ಯಾಪಕ ಟೀಕೆ ವ್ಯಕ್ತವಾಗಿತ್ತು.
ರಿಷಬ್ ಅವರ ಕಾಂತಾರ ಸಿನಿಮಾವನ್ನು ಥಿಯೇಟರ್ನಲ್ಲಿ ನೋಡಿದ್ದೆ. ಅದ್ಭುತವಾಗಿತ್ತು ನಿಮ್ಮ ನಟನೆ. ಅದರಲ್ಲೂ ಹೆಣ್ಣು ದೆವ್ವ ನಿಮ್ಮ ಮೈಸೇರುವ ದೃಶ್ಯವಂತೂ ಅತ್ಯದ್ಭುತವಾಗಿತ್ತು. ಆ ದೃಶ್ಯದಲ್ಲಿ ನಿಮ್ಮ ನಟನೆ ಹಾಗೂ ನಿಮ್ಮ ನೋಟ ಮಜವಾಗಿತ್ತು ಅಂತ ರಣವೀರ್ ಸಿಂಗ್ ಅನುಕರಣೆ ಮಾಡಿದ್ದರು. ಅನುಕರಣೆ ಮಾಡಿದ್ದಕ್ಕೆ ದೈವಾರಾಧಕರು ಆಕ್ರೋಶ ಹೊರಹಾಕಿದ್ದರು.
ಕಾರ್ಯಕ್ರಮ ನಡೆಯುವಾಗ ರಿಷಬ್ ಶೆಟ್ಟಿ ಮುಂದಿನ ಸಾಲಿನಲ್ಲೇ ಕುಳಿತಿದ್ದರು. ರಣವೀರ್ ಅನುಕರಣೆಗೆ ಸ್ವತಃ ರಿಷಬ್ ಅವರೇ ನಕ್ಕಿದ್ದಾರೆ ಎನ್ನಲಾಗಿತ್ತು. ಆದರೆ ರಿಷಬ್ ಬೇರೆ ಸಂದರ್ಭದಲ್ಲಿ ನಕ್ಕಿದ್ದನ್ನು ಈ ಸಂದರ್ಭಕ್ಕೆ ಸೇರಿಸಿ, ಎಡಿಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ.
