ಮಂಗಳೂರು: ಪಣಂಬೂರು ಪೊಲೀಸರ ಸಮಯಪ್ರಜ್ಞೆಯಿಂದ ಅತ್ಮಹತ್ಯೆ ಮಾಡಲು ಮುಂದಾಗಿದ್ದ ತಂದೆ- ಮಗಳ ಜೀವ ರಕ್ಷಣೆಯಾಗಿದೆ. ಪೊಲೀಸರ ಸಮಯೋಚಿತ ಕಾರ್ಯಾಚರಣೆಗೆ ಎಲ್ಲೆಡೆ ಮೆಚ್ಚುಗೆಯ ಸುರಿಮಳೆ ಹರಿದುಬಂದಿದೆ.
ಒಬ್ಬ ವ್ಯಕ್ತಿ ಮಗುವಿನೊಂದಿಗೆ ಪಣಂಬೂರು ಕಡಲ ಕಿನಾರೆಗೆ ಆತ್ಮಹತ್ಯೆ ಮಾಡಲು ಬಂದಿರುವ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಪಣಂಬೂರು ತಂಡವು ಕಡಲತೀರ ಮತ್ತು ಅದರ ಸುತ್ತಮುತ್ತ ಪ್ರದೇಶಗಳಲ್ಲಿ ತೀವ್ರ ಹುಡುಕಾಟ ನಡೆಸಿ ಆ ವ್ಯಕ್ತಿಯನ್ನು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿಕೊಂಡಿತ್ತು.
ಈ ವೇಳೆ ಆತ ಪತ್ತೆಯಾಗಿದ್ದು, ಆತ್ಮಹತ್ಯೆ ಯತ್ನಿಸಿದವ ಇದೇ ವ್ಯಕ್ತಿ ಎಂದು ಪೊಲೀಸರಿಗೆ ದೃಢಪಟ್ಟಿತು.
ಮಾಹಿತಿಯ ಪ್ರಕಾರ, ಆತನು ಕಡಲ ತೀರದಲ್ಲೇ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರೂ, ಆ ಸಮಯದಲ್ಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ರಕ್ಷಣೆ ನೀಡಿದರು. ನಂತರ ಆತ ಅಲ್ಲಿಂದ ತನ್ನ ಮನೆಗೆ ತೆರಳಿದ್ದನು.
ಪೊಲೀಸರು ಮತ್ತು ಪಣಂಬೂರು ಸಿಬ್ಬಂದಿ ತಕ್ಷಣವೇ ಆತನ ಮನೆಯತ್ತ ತೆರಳಿ, ಅಲ್ಲಿ ಆತ ನೇಣು ಬಿಗಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾಗ ತಡೆದಿದ್ದಾರೆ.
ಪಣಂಬೂರು ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯಿಂದ ಒಬ್ಬರ ಪ್ರಾಣ ಉಳಿದಿದ್ದು, ಇವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.