ಪರ್ತ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಮಳೆ ಅಡ್ಟಿಯಾದ ಹಿನ್ನೆಲೆಯಲ್ಲಿ ಬಳಸಲಾದ ಡಕ್ವರ್ತ್-ಲೂಯಿಸ್-ಸ್ಟರ್ನ್ (DLS) ವಿಧಾನ ತೀವ್ರ ಟೀಕೆಗೆ ಗುರಿಯಾಗಿದೆ. ಮಳೆಯಿಂದಾಗಿ ನಾಲ್ಕು ಬಾರಿ ನಿಂತು ಪುನರಾರಂಭವಾದ ಭಾರತದ ಇನ್ನಿಂಗ್ಸ್ 26 ಓವರ್ಗಳಿಗೆ ಕಡಿತಗೊಂಡಿತು. ಭಾರತವು 136/9 ರನ್ ಗಳಿಸಿದ ಬಳಿಕ, DLS ಗಣನೆ ಪ್ರಕಾರ ಆಸ್ಟ್ರೇಲಿಯಾಕ್ಕೆ ಕೇವಲ 131 ರನ್ಗಳ ಪರಿಷ್ಕೃತ ಗುರಿ ನೀಡಲಾಯಿತು.
ಈ ತೀರ್ಮಾನದ ಮೇಲೆ ಭಾರತದ ಮಾಜಿ ಆರಂಭಿಕ ಮತ್ತು ಕ್ರಿಕೆಟ್ ವಿಶ್ಲೇಷಕ ಆಕಾಶ್ ಚೋಪ್ರಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಅವರು, “ಭಾರತ 136 ರನ್ ಗಳಿಸಿದೆ, ಆದರೆ ಗುರಿ 130 ಕ್ಕೆ ಇಳಿಸಿರುವುದು ತಪ್ಪು ಮತ್ತು ಅನ್ಯಾಯ,” ಎಂದು ಹೇಳಿದರು.
ಅವರು ಮುಂದುವರಿಸಿ, “ಪಂದ್ಯ ಪ್ರಾರಂಭವಾದಾಗ ಇದು 50 ಓವರ್ಗಳ ಪಂದ್ಯವಾಗಿತ್ತು, ಆದರೆ ಮಳೆ ಬಂದು ಓವರ್ಗಳು ಕ್ರಮೇಣ ಕಡಿಮೆಯಾದವು. ಇದರಿಂದ ಮೊದಲು ಬ್ಯಾಟಿಂಗ್ ಮಾಡಿದ ತಂಡಕ್ಕೆ ತೊಂದರೆ ಉಂಟಾಗಿದೆ. DLS ವಿಧಾನವು ವಿಕೆಟ್ಗಳ ಆಧಾರದ ಮೇಲೆ ಮೊದಲು ಬ್ಯಾಟಿಂಗ್ ಮಾಡಿದ ತಂಡದ ರನ್ಗಳಿಗೆ ತಕ್ಕಮಟ್ಟಿನ ಪ್ರತಿಫಲ ನೀಡುವುದಿಲ್ಲ,” ಎಂದು ಟೀಕಿಸಿದರು.
ಆಸ್ಟ್ರೇಲಿಯಾ ಚೇಸ್ ಮಾಡುವ ವೇಳೆಗೆ ಓವರ್ಗಳ ಸಂಖ್ಯೆ ಹಾಗೂ ಬೌಲರ್ಗಳ ಮಿತಿಯ ಕುರಿತು ಸಂಪೂರ್ಣ ಮಾಹಿತಿ ಹೊಂದಿದ್ದರೆ, ಭಾರತಕ್ಕೆ ಅದು ಪಂದ್ಯ ಮಧ್ಯದಲ್ಲಿ ಮಾತ್ರ ತಿಳಿಯಿತು ಎಂದು ಅವರು ಗಮನಿಸಿದರು. “ಚೇಸ್ ಮಾಡುವ ತಂಡಕ್ಕೆ ಸವಾಲು ಕಡಿಮೆ ಆಗುತ್ತದೆ. ಇದು ತಂತ್ರಜ್ಞಾನದ ಅಸಮಾನತೆ,” ಎಂದು ಚೋಪ್ರಾ ಹೇಳಿದರು.
ಅವರು DLS ವಿಧಾನದಲ್ಲಿ ಬದಲಾವಣೆ ಅಗತ್ಯವಿದೆ ಎಂದು ಸಲಹೆ ನೀಡಿದರು. “ಭಾರತ 136 ರನ್ ಗಳಿಸಿದ್ದರೆ ಗುರಿ ಕನಿಷ್ಠ 145 ಅಥವಾ 147 ಇರಬೇಕಾಗಿತ್ತು. ಈಗಿನ DLS ವಿಧಾನ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳ ವಿರುದ್ಧ ಕೆಲಸ ಮಾಡುತ್ತಿದೆ,” ಎಂದು ಅವರು ಅಭಿಪ್ರಾಯಪಟ್ಟರು.
ಪಂದ್ಯದಲ್ಲಿ ಆಸ್ಟ್ರೇಲಿಯಾ 4.5 ಓವರ್ಗಳು ಬಾಕಿ ಇರುವಾಗಲೇ ಗುರಿ ತಲುಪಿತು ಮತ್ತು ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.