ಜೈಪುರ್: ಸ್ಥಳೀಯ ಉದ್ಯಮಿ ಅಭಿಷೇಕ್ ಗುಪ್ತಾನನ್ನು ಗುಂಡಿಕ್ಕಿ ಹತ್ಯೆಗೈದ ಪ್ರಕರಣದಲ್ಲಿ ಆಲ್ ಇಂಡಿಯಾ ಹಿಂದೂ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ವಿಚಾರಣೆ ನಡೆಸಿ ಜೈಲಿಗೆ ಹಾಕಲಾಗಿದೆ.
ರಾಜಸ್ತಾನದ ಭರತ್ಪುರ ಜಿಲ್ಲೆಯ ಆಗ್ರಾ-ಜೈಪುರ ಹೆದ್ದಾರಿಯಲ್ಲಿರುವ ಲೋಧಾ ಬೈಪಾಸ್ನಲ್ಲಿ ಪೂಜಾಳನ್ನು ಅರೆಸ್ಟ್ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಇದು ಒಟ್ಟು 4ನೇ ಬಂಧನವಾಗಿದೆ. ಇದಕ್ಕೂ ಮೊದಲು ಪೂಜಾ ಗಂಡ ಅಶೋಕ್ ಪಾಂಡೆ ಹಾಗೂ ಶಾರ್ಪ್ ಶೂಟರ್ಸ್ ಮೊಹಮ್ಮದ್ ಫಾಜಿಲ್, ಆಸಿಫ್ನನ್ನು ಅರೆಸ್ಟ್ ಮಾಡಲಾಗಿತ್ತು. ಇದೀಗ ಆಲ್ ಇಂಡಿಯಾ ಹಿಂದೂ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪೂಜಾ ಜೈಲಿಗೆ ಹೋಗಿದ್ದಾರೆ.
ಗುಂಡಿಕ್ಕಿ ಹತ್ಯೆ:
ಉದ್ಯಮಿ ಅಭಿಷೇಕ್ ಗುಪ್ತಾಗೆ ಹಣಕಾಸಿನ ಸಂಬಂಧ ಪೂಜಾ ಕಡೆಯಿಂದ ಬೆದರಿಕೆ ನೀಡಲಾಗುತ್ತಿತ್ತು. ಸೆಪ್ಟೆಂಬರ್ 26 ರಂದು ಅಲಿಗಢ ನಗರದ ಹೊರವಲಯದ ಮುಖ್ಯ ಖೇರೇಶ್ವರ ಮಂದಿರ ಕ್ರಾಸಿಂಗ್ನಲ್ಲಿ ತನ್ನ ತಂದೆ ಜೊತೆ ಬಸ್ ಹತ್ತುವಾಗ ಗುಪ್ತಾರಿಗೆ ಗುಂಡಿಕ್ಕಲಾಯಿತು. ತಕ್ಷಣ ಅವರನ್ನು ಜವಾಹರಲಾಲ್ ನೆಹರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದರು. ಆದರೆ ವೈದ್ಯರು ಬರುವಾಗಲೇ ಮೃತಪಟ್ಟಿದ್ದಾರೆ ಎಂದು ಹೇಳಿದ್ದರು.
ಈ ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಸುಪಾರಿ ಕೊಟ್ಟು ಗುಪ್ತಾರನ್ನು ಮುಗಿಸಲಾಗಿದೆ ಎಂಬುದು ಕಂಡುಕೊಂಡಿದ್ದರು. ಹಣಕಾಸಿಗಾಗಿ ಈ ರೀತಿ ಪೂಜಾ, ಅಶೋಕ್ ಸೇರಿ ಪ್ಲಾನ್ ಮಾಡಿ ಮಾಡಿಸಿದ್ದಾರೆ ಎಂಬುದು ತನಿಖೆಯಿಂದ ಗೊತ್ತಾಗಿತ್ತು. ಅಲ್ಲದೇ ಗುಪ್ತಾಗೆ ನಿರಂತರ ಕಿರುಕುಳ ಕೂಡ ಕೊಟ್ಟಿದ್ದರು. ಈ ಯಾವುದಕ್ಕೂ ಮಣಿಯದ ಗುಪ್ತಾರನ್ನು ಮುಗಿಸಲು ತಮ್ಮ ಮನೆಗೆ ಯಾವಾಗಲೂ ಬರುತ್ತಿದ್ದ ಶಾರ್ಪ್ ಶೂಟರ್ಸ್ ಮೊಹಮ್ಮದ್ ಫಾಜಿಲ್, ಆಸಿಫ್ಗೆ ಡೀಲ್ ಒಪ್ಪಿಸಿ ಜೀವ ತೆಗೆದಿದ್ದರು ಎಂದು ಹೇಳಲಾಗಿದೆ.