ಚಿಕ್ಕಮಗಳೂರು: ಫಿಲಿಪಿನ್ಸ್ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಸುನಾಮಿ ಆತಂಕವೂ ಎದುರಾಗಿದೆ. ಇದರ ನಡುವೆ ಮೆಡಿಕಲ್ ಕೋರ್ಸ್ ಓದಲು ತೆರಳಿದ್ದ ಚಿಕ್ಕಮಗಳೂರಿನ ವೈದ್ಯ ವಿದ್ಯಾರ್ಥಿನಿಯೊಬ್ಬರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಚಿಕ್ಕಮಗಳೂರು ನಗರದ ಸತ್ಯಪಾಲ್ ಅವರ ಮಗಳು ಐಶ್ವರ್ಯ ಮೆಡಿಕಲ್ ಕೋರ್ಸ್ ಓದಲು ಫಿಲಿಪಿನ್ಸ್ಗೆ ತೆರಳಿದ್ದರು. ಇದೀಗ ಸಿಬುನಗರದಲ್ಲಿ ಅವರು ಸಿಲುಕಿದ್ದಾರೆ. ಭಾರತಕ್ಕೆ ವಾಪಸ್ ಆಗಲು ಸಾಧ್ಯವಾಗದೇ ಪರದಾಡುತ್ತಿದ್ದಾರೆ. ಅವರು ಐದು ವರ್ಷದ ಕೋರ್ಸ್ ಮುಗಿಸಿದ್ದರು. ಇನ್ನೇನೂ ಕೆಲವೇ ದಿನಗಳಲ್ಲಿ ಊರಿಗೆ ವಾಪಸ್ ಆಗುವವರಿದ್ದರು ಎಂದು ತಿಳಿದುಬಂದಿದೆ.
ಮಗಳನ್ನ ವಾಪಸ್ ಕರೆಸಿಕೊಳ್ಳಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪೋಷಕರು ಮನವಿ ಮಾಡಿದ್ದಾರೆ. ಇನ್ನೂ ಹಲವು ಭಾರತೀಯ ವಿದ್ಯಾರ್ಥಿಗಳು ಭೂಕಂಪದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಊಟ, ತಿಂಡಿ, ನೀರು ಯಾವುದೂ ಸಿಗದೇ ಪರದಾಡುತ್ತಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ.
ಐಶ್ಚರ್ಯ ಮೆಡಿಕಲ್ ಓದುತ್ತಿರುವ ಕಾಲೇಜಿನಲ್ಲಿ ಕರ್ನಾಟಕ, ಕೇರಳ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಬೇರೆ ರಾಜ್ಯದ ಸುಮಾರು 50-60 ವಿದ್ಯಾರ್ಥಿಗಳು ಓದುತ್ತಿದ್ದಾರೆ ಎಂದು ತಿಳಿದುಬಂದಿದೆ.