ವಿದ್ಯಾರ್ಥಿಗಳು ಕೃತಕ ಬುದ್ಧಮತ್ತೆಯಂತಹಾ ಕ್ಷೇತ್ರಗಳಲ್ಲಿ ಆವಿಷ್ಕಾರಗಳಿಗೆ ಒತ್ತು ನೀಡಲು ಐಐಎಸ್ಇಆರ್ ನಿರ್ದೇಶಕರ ಕರೆ

ಬೆಂಗಳೂರು: ವಿದ್ಯಾರ್ಥಿಗಳನ್ನು ಹಸಿರು ಶಕ್ತಿ, ಆರೋಗ್ಯ, ತ್ಯಾಜ್ಯ ನಿರ್ವಹಣೆ, ಕೃತಕ ಬುದ್ಧಿಮತ್ತೆ ಮುಂತಾದ ಕ್ಷೇತ್ರಗಳಲ್ಲಿ ಆವಿಷ್ಕಾರಗಳಿಗೆ ಒತ್ತು ನೀಡಲು ಐಐಎಸ್ಇಆರ್ ತಿರುವನಂತಪುರಂನ ನಿರ್ದೇಶಕ ಡಾ. ಜೆ.ಎನ್. ಮೂರ್ತಿ ಕರೆ ನೀಡಿದ್ದಾರೆ.

ಅವರು ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ ದ್ವಿತೀಯ ಪದವಿ ಪ್ರದಾನ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಮಾತನಾಡಿ, “ವೃತ್ತಿಜೀವನದ ಯಶಸ್ಸಿನ ಜೊತೆಗೆ ಸಮಾಜಕ್ಕೆ ಕೊಡುಗೆ ನೀಡುವುದು ಅಗತ್ಯ. ಪೋಷಕರು ಮತ್ತು ಶಿಕ್ಷಕರಿಗೆ ಸದಾ ಕೃತಜ್ಞರಾಗಿರಿ” ಎಂದು ಸಲಹೆ ನೀಡಿದರು.

ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮಾತನಾಡಿ, “ವಿದ್ಯಾರ್ಥಿಗಳ ಯಶಸ್ಸಿಗೆ ಪೋಷಕರು ಮತ್ತು ಶಿಕ್ಷಕರ ಬೆಂಬಲ ಮುಖ್ಯ. ಅವಕಾಶಗಳು ನಮ್ಮ ಬಾಗಿಲಿಗೆ ಬರುವುದಿಲ್ಲ; ಅವನ್ನು ಹುಡುಕಿ ಶ್ರಮದಿಂದ ಮುನ್ನಡೆಯಬೇಕು” ಎಂದು ವಿದ್ಯಾರ್ಥಿಗಳಿಗೆ ಹುರಿದುಂಬಿಸಿದರು.

 

ಕಾರ್ಯಕ್ರಮವು ರ‍್ಯಾಂಕ್ ವಿಜೇತರು ಹಾಗೂ ವಿಶೇಷ ಪ್ರಶಸ್ತಿ ವಿಜೇತರ ಮೆರವಣಿಗೆಯಿಂದ ಆರಂಭಗೊಂಡಿತು. ಒಟ್ಟು 2,747 ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು.

ಇವರಲ್ಲಿ 2,009 ಮಂದಿ ಪದವಿ ಹಾಗೂ 738 ಮಂದಿ ಸ್ನಾತಕೋತ್ತರ ಪದವಿ ಪಡೆದರು. 143 ಮಂದಿ ರ‍್ಯಾಂಕ್ ವಿಜೇತರು ಹಾಗೂ 40 ಮಂದಿ ವಿಶೇಷ ಪ್ರಶಸ್ತಿ ವಿಜೇತರು ಗೌರವಿಸಲ್ಪಟ್ಟರು.

ಚಾನ್ಸಲರ್ ವಂದನೀಯ ಡೈನೋಸಿಯಸ್ ವಾಸ್ ಹಾಗೂ ಉಪಕುಲಪತಿ ವಂದನೀಯ ವಿಕ್ಟರ್ ಲೋಬೋ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಇತರ ಅಧಿಕಾರಿಗಳು ಹಾಗೂ ಗಣ್ಯರು ಪಾಲ್ಗೊಂಡಿದ್ದರು.


1882ರಲ್ಲಿ ಸ್ಥಾಪನೆಯಾದ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯವು ಈ ವರ್ಷ ತನ್ನ 143 ವರ್ಷಗಳ ಸೇವೆಯನ್ನು ಪೂರೈಸಿದೆ.

error: Content is protected !!