ಗದಗ : ರಸ್ತೆಯಲ್ಲಿ ಸತ್ತು ಬಿದ್ದಿದ್ದ ಕತ್ತೆಕಿರುಬವನ್ನು ತಪ್ಪಿಸಲು ಹೋಗಿ ರಸ್ತೆ ಬದಿ ಕಂದಕಕ್ಕೆ ಬಿದ್ದು ಪೊಲೀಸ್ ಜೀಪ್ ಪಲ್ಟಿಯಾಗಿದ್ದು, ಅಪಘಾತದಲ್ಲಿ ಗಾಯಗೊಂಡಿದ್ದ ಬೆಟಗೇರಿ ಠಾಣೆ ಎಎಸ್ಐ ಮೃತಪಟ್ಟ ಘಟನೆ ಗದಗ ತಾಲೂಕಿನ ಸೊರಟೂರ ಗ್ರಾಮದ ಬಳಿ ನಡೆದಿದೆ.
ಬೇಟಗೇರಿ ಠಾಣೆ ಎಎಸ್ಐ ಕಾಸಿಂ ಸಾಬ್ ಹರಿವಾಣ ಮೃತ ಪೊಲೀಸ್ ಅಧಿಕಾರಿ.
ಲಕ್ಷ್ಮೇಶ್ವರ ದಿಂದ ಕರ್ತವ್ಯ ಮುಗಿಸಿ ಗದಗ ಕಡೆ ಪೊಲೀಸ್ ಜೀಪ್ ಬರುತ್ತಿದ್ದಾಗ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಕಾಸಿಂ ಸಾಬ್ ಹರಿವಾಣ ಅವರಿಗೆ ಗಂಭೀರ ಗಾಯವಾಗಿದ್ದು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ಬೆಳಗಿನ ಜಾವ ಆಸ್ಪತ್ರೆಯಲ್ಲೇ ನಿಧನರಾಗಿದ್ದಾರೆ. ಇನ್ನಿಬ್ಬರು ಗಾಯಾಳುಗಳಾದ ವೈರ್ಲೆಸ್ ವಿಭಾಗದ ಪೋಲೀಸ್ ಇನ್ಸ್ಪೆಕ್ಟರ್ ಉಮೇಶಗೌಡ ಪಾಟೀಲ್, ಚಾಲಕ ಓಂ ನಾಥ್ ಗೆ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗದಗ ತಾಲೂಕಿನ ಹುಲಕೋಟಿ ಗ್ರಾಮದಲ್ಲಿ ಮೃತ ಪೊಲೀಸ್ ಅಧಿಕಾರಿ ಕಾಸಿಂ ಸಾಬ್ ಹರಿವಾಣ ಅವರ ಅಂತ್ಯಕ್ರಿಯೆಗೆ ಕುಟುಂಬದವರಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ.