ಇಸ್ಲಾಮಾಬಾದ್: ಪಾಕಿಸ್ತಾನದ ವಾಯುಸೇನೆಗೆ ಹುಚ್ಚು ಹಿಡಿದಿದೆ ಎಂಬಂತೆ ವರ್ತಿಸಿದ ಘಟನೆ ಇಂದು ಬೆಳಿಗ್ಗೆ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಸಂಭವಿಸಿದೆ. ಸೋಮವಾರ ಬೆಳಗಿನ ಜಾವ 2 ಗಂಟೆಯ ಸುಮಾರಿಗೆ ತಿರಾ ಕಣಿವೆಯ ಮಾಟ್ರೆ ದಾರಾ ಗ್ರಾಮದ ಮೇಲೆ ಎಂಟು LS-6 ಬಾಂಬ್ಗಳನ್ನು ಬೀಳಿಸಲಾಗಿದ್ದು, ಮಹಿಳೆಯರು ಮತ್ತು ಮಕ್ಕಳನ್ನು ಒಳಗೊಂಡಂತೆ ಕನಿಷ್ಠ 30 ನಾಗರಿಕರು ಸಾವಿಗೀಡಾಗಿದ್ದಾರೆ.
ಸ್ಥಳೀಯ ಮೂಲಗಳ ಪ್ರಕಾರ, ಅನೇಕರು ಗಾಯಗೊಂಡಿದ್ದು, ಅವರ ಪರಿಸ್ಥಿತಿ ಇನ್ನೂ ಸ್ಪಷ್ಟವಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರ-ವೀಡಿಯೊಗಳಲ್ಲಿ ಮಕ್ಕಳ ಶವಗಳೂ ಸೇರಿದಂತೆ ಹೃದಯ ಕಲುಕುವ ದೃಶ್ಯಗಳು ಕಾಣಿಸುತ್ತಿವೆ. ರಕ್ಷಣಾ ಸಿಬ್ಬಂದಿ ಅವಶೇಷಗಳ ಅಡಿ ಸಿಲುಕಿದವರನ್ನು ಹೊರತೆಗೆಯುವ ಕಾರ್ಯದಲ್ಲಿ ತೊಡಗಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಭೀತಿ ವ್ಯಕ್ತವಾಗಿದೆ.
ಖೈಬರ್ ಪಖ್ತುಂಖ್ವಾ ಪ್ರದೇಶದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಳ ಹೆಸರಿನಲ್ಲಿ ಇಂತಹ ದಾಳಿಗಳು ಪದೇಪದೇ ನಡೆಯುತ್ತಿದ್ದು, ಅನೇಕ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ವರ್ಷದ ಜೂನ್ನಲ್ಲಿ ನಡೆದ ಡ್ರೋನ್ ದಾಳಿಗಳ ಬಗ್ಗೆ ಅಮ್ನೆಸ್ಟಿ ಇಂಟರ್ನ್ಯಾಷನಲ್ ತೀವ್ರ ಕಳವಳ ವ್ಯಕ್ತಪಡಿಸಿತ್ತು. “ನಾಗರಿಕರ ಜೀವ ರಕ್ಷಣೆ ಕುರಿತು ಪಾಕಿಸ್ತಾನಿ ಆಡಳಿತ ವಿಫಲವಾಗಿದೆ” ಎಂದು ಸಂಸ್ಥೆಯ ದಕ್ಷಿಣ ಏಷ್ಯಾ ಉಪ ಪ್ರಾದೇಶಿಕ ನಿರ್ದೇಶಕಿ ಇಸಾಬೆಲ್ಲೆ ಲಸ್ಸಿ ಹೇಳಿಕೊಂಡಿದ್ದರು.
ಪೊಲೀಸ್ ಅಂಕಿಅಂಶಗಳ ಪ್ರಕಾರ, ಈ ವರ್ಷದ ಜನವರಿಯಿಂದ ಆಗಸ್ಟ್ವರೆಗೆ ಪ್ರಾಂತ್ಯದಲ್ಲಿ 605 ಭಯೋತ್ಪಾದಕ ಘಟನೆಗಳು ನಡೆದಿದ್ದು, ಇದರಲ್ಲಿ 138 ನಾಗರಿಕರು, 79 ಪೊಲೀಸರು ಮತ್ತು ಹಲವು ಭದ್ರತಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ, ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದೊಳಗೆ ನಡೆದ ಆಪರೇಷನ್ ಸಿಂಧೂರ್ ನಂತರ, ಜೈಶ್-ಎ-ಮೊಹಮ್ಮದ್ ಹಾಗೂ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗಳು ಅಫ್ಘಾನ್ ಗಡಿಯ ಹತ್ತಿರ ಹೊಸ ಅಡಗುತಾಣಗಳನ್ನು ಸ್ಥಾಪಿಸುತ್ತಿರುವುದಾಗಿ ವರದಿಯಾಗಿದೆ. ಗಡಿಯ ಪರ್ವತ ಪ್ರದೇಶವು ಭಯೋತ್ಪಾದಕರಿಗೆ ನೈಸರ್ಗಿಕ ಮರೆಮಾಚುವಿಕೆಯನ್ನು ಒದಗಿಸುತ್ತಿದ್ದು, ಈ ಹಿಂದೆ 1980ರ ಸೋವಿಯತ್ ವಿರೋಧಿ ಅಫ್ಘಾನ್ ಯುದ್ಧದಿಂದ ಹಿಡಿದು 9/11 ನಂತರದ ಅಮೆರಿಕದ ಆಕ್ರಮಣದವರೆಗೆ ಈ ನೆಲೆಗಳು ಬಳಸಲ್ಪಟ್ಟಿದ್ದವು.
ಈ ಘಟನೆಯು ಪಾಕಿಸ್ತಾನದಲ್ಲಿ ಮತ್ತೆ ನಾಗರಿಕರ ಸುರಕ್ಷತೆ ಮತ್ತು ಭದ್ರತಾ ಕಾರ್ಯಾಚರಣೆಗಳ ನೈತಿಕತೆ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿಸಿದೆ.