ಬೈಂದೂರು: ಬೈಂದೂರು ತಾಲ್ಲೂಕಿನ ಯಡ್ತರೆ ಗ್ರಾಮದ ಕೊಸಳ್ಳಿ ಸಮೀಪದ ದೇವರಗದ್ದೆಯಲ್ಲಿ ನಡೆದ ಕೊಲೆಗೆ ಕೂಲಿ ಹಣದ ವಿಚಾರವಾಗಿ ಉಂಟಾದ ಜಗಳವೇ ಕಾರಣ ಎನ್ನುವುದನ್ನು ಕೊಲೆ ಆರೋಪಿ ಬಾಯ್ಬಿಟ್ಟಿದ್ದಾನೆ.
ಕೇರಳದ ಕೋಟಿಯಂ ಜಿಲ್ಲೆಯ ಕಾನೇರಪಳ್ಳಿ ನಿವಾಸಿ ಬಿನೋ ಪಿಲಿಪ್ (45) ಎಂಬಾತನನ್ನು ಕೇರಳದ ಕೊಲಂ ಜಿಲ್ಲೆಯ ಕೊಟ್ಟರಯೇಕರ್ ನಿವಾಸಿ ಉದಯ ಕುಮಾರ್ (42) ಕೊಲೆ ಮಾಡಿ ಪರಾರಿಯಾಗಿದ್ದ. ಈತನನ್ನು ಪೊಲೀಸರು ಇಂದು ಬಂಧಿಸಿದ್ದಾರೆ.
ಇಬ್ಬರೂ ತೂದಳ್ಳಿ ದೇವರಗದ್ದೆಯ ರಬ್ಬರ್ ತೋಟದಲ್ಲಿ ಕಳೆದ ಎರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದು, ಶೆಡ್ನಲ್ಲಿ ಒಟ್ಟಿಗೆ ವಾಸವಿದ್ದರು. ಕೂಲಿ ಹಣ ಹಂಚಿಕೆ ವಿಚಾರವಾಗಿ ಆಗಾಗ್ಗೆ ಮದ್ಯಪಾನ ಬಳಿಕ ಗಲಾಟೆ ನಡೆಸುತ್ತಿದ್ದ ಇಬ್ಬರು, ಶನಿವಾರವೂ ಇದೇ ಕಾರಣಕ್ಕೆ ಜಗಳಕ್ಕೆ ಇಳಿದರು. ಕೋಪಗೊಂಡ ಉದಯ ತನ್ನ ಕೈಯಲ್ಲಿದ್ದ ರಬ್ಬರ್ ಟ್ಯಾಪಿಂಗ್ ಕತ್ತಿಯಿಂದ ಬಿನೋ ಪಿಲಿಪ್ ಅವರ ಹೊಟ್ಟೆ ಇರಿದಿದ್ದು, ಅವರು ಸ್ಥಳದಲ್ಲೇ ಮೃತಪಟ್ಟರು.
ಉದಯನನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಕುಂದಾಪುರ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.