ಬೆಂಗಳೂರು: ಕನ್ನಡ ಚಲನಚಿತ್ರರಂಗದ ಹಿರಿಯ ನಿರ್ದೇಶಕ ಎಸ್.ನಾರಾಯಣ್ ಹಾಗೂ ಇವರ ಧರ್ಮಪತ್ನಿ ವಿರುದ್ಧ ಮಗನ ಹೆಂಡತಿ (ಸೊಸೆ) ಪವಿತ್ರಾ ವರದಕ್ಷಿಣೆ ಕಿರುಕುಳದ ಆರೋಪ ಮಾಡಿದ್ದಲ್ಲದೆ, ನಮ್ಮನ್ನು ಮನೆಯಿಂದ ಹೊರಹಾಕಿದ್ದಾರೆ ಎಂದು ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಎಫ್ಐಆರ್ ದಾಖಲಾಗಿದೆ.

ಪವಿತ್ರಾ ದೂರಿನಲ್ಲಿ ಏನಿದೆ?
ಎಸ್. ನಾರಾಯಣ್ ಹಾಗೂ ಭಾಗ್ಯಲಕ್ಷ್ಮೀ ಅವರ ಪುತ್ರ ಪವನನ್ನು 2021ರಲ್ಲಿ ನಾನು ವರಿಸಿದ್ದೆ. 2022ರಲ್ಲಿ ನಾನು ಹಾಗೂ ಪವನ್ ಬೇರೆ ಸಂಸಾರ ಹೂಡಿದ್ದು, ನಮಗೆ ಒಬ್ಬ ಗಂಡು ಮಗುವೂ ಆಯಿತು. ಪವನ್ ಪದವೀಧರ ಆಗದಿರುವುದರಿಂದ ಸರಿಯಾದ ಉದ್ಯೋಗ ಸಿಗದ ಕಾರಣ ನಾನೇ ದುಡಿದು ಸಂಸಾರ ನಡೆಸುತ್ತಿದ್ದೆ. ಮಗು ಹುಟ್ಟಿದಾಗಿನಿಂದಲೂ ನಾನೇ ಅದರ ಖರ್ಚು ವೆಚ್ಚಗಳನ್ನು ಭರಿಸಿದ್ದೇನೆ. ಮಗುವಾಗಿ 3 ತಿಂಗಳಾದ ನಂತರ ನಮ್ಮ ಮಾವ (ಎಸ್. ನಾರಾಯಣ್) ತಮ್ಮ ಸ್ವಂತ ಮನೆಗೆ ತಮ್ಮನ್ನು ಆಹ್ವಾನಿಸಿದ್ದರು. ನಾವು ಅವರು ಹೇಳಿದಂತೆ ಪುನಃ ಅತ್ತೆ, ಮಾವನ ಮನೆಗೆ ಹೋಗಿದ್ದೆವು” ಎಂದು ಪವಿತ್ರಾ ವಿವರಿಸಿದ್ದಾರೆ.
“ಮನೆಗೆ ವಾಪಸ್ಸು ಹೋದ ನಂತರ ಕೆಲವೇ ದಿನಗಳಲ್ಲಿ ಎಸ್. ನಾರಾಯಣ್ ಹಾಗೂ ನನ್ನ ಪತಿ ಪವನ್ ಅವರು ʻಕಲಾ ಸಾಮ್ರಾಟ್ʼ ಟೀಂ ಅಕಾಡೆಮಿ ಎಂಬ ಫಿಲ್ಮ್ ಇನ್ಸ್ಟಿಟ್ಯೂಟ್ ಆರಂಭಿಸಿದರು. ಅದಕ್ಕೆ ಬೇಕಾದ ಬಂಡವಾಳಕ್ಕಾಗಿ ಹಣ ಕೊಡುವಂತೆ ನನ್ನ ಪತಿ ಪವನ್ ನನ್ನ ಬಳಿ ಬೇಡಿಕೆಯಿಟ್ಟಿದ್ದರು. ನಾನು ನನ್ನ ತಾಯಿಯ ಒಡವೆಗಳನ್ನು ಒತ್ತೆಯಿಟ್ಟು ಹಣ ತಂದುಕೊಟ್ಟಿದ್ದೆ. ಆದರೆ, ಆ ಸಂಸ್ಥೆ ಲಾಸ್ ಆಗಿ ಮುಚ್ಚಿಹೋಯಿತು. ಕಡೆಗೆ ಅಲ್ಲಿ ಆದ ನಷ್ಟವನ್ನು ತುಂಬಿಕೊಡಲು ನಾನು 10 ಲಕ್ಷ ರೂ.ಗಳ ಸಾಲ ತಂದು ಕೊಟ್ಟಿದ್ದೆ. ಅದರ ಇಎಂಐ ನಾನೇ ಕಟ್ಟುತ್ತಿದ್ದೇನೆ. ಇನ್ನು ಪವನ್, ನನ್ನ ತಾಯಿಯಿಂದ 75,000 ರೂ. ಹಣ ಪಡೆದಿದ್ದಾರೆʼ ಎಂದು ಆರೋಪಿಸಿದ್ದಾರೆ.
“ಇಷ್ಟೆಲ್ಲಾ ಸಹಾಯ ಮಾಡಿದರೂ ಕೆಲವು ದಿನಗಳಿಂದ ನನಗೆ ಮತ್ತೆ ಮತ್ತೆ ಹಣ ತಂದು ಕೊಡುವಂತೆ ನನ್ನ ಅತ್ತೆ (ಭಾಗ್ಯಲಕ್ಷ್ಮಿ) ಹಾಗೂ ನನ್ನ ಪತಿ ಪವನ್ ಪೀಡಿಸುತ್ತಿದ್ದರು. ಅದಕ್ಕೆ ನಾನು ಒಪ್ಪಿರಲಿಲ್ಲ. ಅದರಿಂದ ಸಿಟ್ಟಿಗೆದ್ದ ಅವರು ನನ್ನನ್ನು ಮನೆಯಿಂದ ಹೊರಗೆ ಹಾಕಿದ್ದಾರೆ. ಮದುವೆ ಅವಧಿಯಲ್ಲೇ ಒಂದು ಲಕ್ಷ ರೂ. ಮೌಲ್ಯದ ಉಂಗುರ ಮತ್ತು ಮದುವೆಯ ಖರ್ಚು ವೆಚ್ಚಕ್ಕಾಗಿ ಸ್ವಲ್ಪ ಹಣವನ್ನೂ ಪಡೆದಿದ್ದಾರೆ” ಎಂದು ಪವಿತ್ರಾ ಅವರು ಆಪಾದಿಸಿದ್ದಾರೆ.