ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜಯಂತಿ ಆಚರಣೆ

ಮಂಗಳೂರು: ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 171 ನೇ ಜಯಂತಿ ಆಚರಣೆ ಅಂಗವಾಗಿ ನಗರದ ನಾರಾಯಣಗುರು ವೃತ್ತದಲ್ಲಿರುವ ಪೂಜ್ಯರ ಪ್ರತಿಮೆಗೆ ಶಾಸಕ ವೇದವ್ಯಾಸ ಕಾಮತ್ ರವರು ಪುಷ್ಪ ನಮನಗಳನ್ನು ಸಲ್ಲಿಸಿದರು.

ನಂತರ ಮಾತನಾಡಿದ ಅವರು, ಪೂಜ್ಯರು ಸಾಮಾಜಿಕ ಪರಿವರ್ತನೆಯ ಹರಿಕಾರರಾಗಿ ಹಿಂದುಳಿದವರ ಸಹಿತ ಸರ್ವರ ಶ್ರೇಯೋಭಿವೃದ್ಧಿಗೆ ಶ್ರಮಿಸಿದ ಮಹಾನ್ ಸಂತ. ಕೇರಳದಲ್ಲಿ ಹುಟ್ಟಿದ ಅವರು ಅಲ್ಲಿನ ಅವ್ಯವಸ್ಥೆಯ ವಿರುದ್ಧ ಹಿಂದೂ ಸಮಾಜವನ್ನು ಎಚ್ಚರಿಸುವ ಕಾರ್ಯ ಮಾಡಿದ್ದರು. ಹಿಂದಿನ ಬಿಜೆಪಿ ಸರ್ಕಾರ ಅವಧಿಯಲ್ಲಿ ಪೂಜ್ಯರ ಗೌರವಾರ್ಥ ಮಂಗಳೂರಿನ ಹೃದಯ ಭಾಗದಲ್ಲಿ ನಾರಾಯಣಗುರು ವೃತ್ತವನ್ನು ನಿರ್ಮಿಸಲಾಗಿತ್ತಲ್ಲದೇ ಕುದ್ರೋಳಿಗೆ ಸಾಗುವ ರಸ್ತೆಗೆ ಗೋಕರ್ಣನಾಥ ರಸ್ತೆ ಎಂದು ನಾಮಕರಣ ಮಾಡಲಾಗಿತ್ತು. ನಂತರ ಉರ್ವದಲ್ಲಿ ಗುರುಗಳ ಸುಂದರವಾದ ಮಂದಿರ ಕಟ್ಟಲಾಗಿತ್ತು. ಅಲ್ಲದೇ ನಾರಾಯಣ ಗುರು ಅಭಿವೃದ್ಧಿ ನಿಗಮವನ್ನೂ ಸಹ ಅಸ್ತಿತ್ವಕ್ಕೆ ತರಲಾಗಿತ್ತು ಎಂದರು.

ಆದರೆ ಕಳೆದ ಎರಡೂವರೆ ವರ್ಷಗಳಿಂದ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ಒಂದು ಪೈಸೆಯನ್ನೂ ನೀಡದೇ, ಅಧ್ಯಕ್ಷರನ್ನೂ ಘೋಷಿಸದಿರುವುದು ಬೇಸರದ ಸಂಗತಿ. ತಕ್ಷಣ ಸರ್ಕಾರ ಆ ಬಗ್ಗೆ ಎಚ್ಚೆತ್ತುಕೊಂಡು ನಿಗಮಕ್ಕೆ ವಾರ್ಷಿಕವಾಗಿ ಕನಿಷ್ಠ 500 ಕೋಟಿ ರೂ ನಿಗದಿಗೊಳಿಸಿ ಆ ಸಮುದಾಯಕ್ಕೆ ಆರ್ಥಿಕ ಶಕ್ತಿ ನೀಡಬೇಕು ಎಂದು ಶಾಸಕರು ಆಗ್ರಹಿಸಿದರು. ಈ ಸಂದರ್ಭದಲ್ಲಿ ರಮೇಶ್ ಕಂಡೆಟ್ಟು, ಲಲ್ಲೇಶ್ ಕುಮಾರ್, ರಮೇಶ್ ಹೆಗ್ಡೆ, ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಬೊಟ್ಯಾಡಿ, ಪ್ರೇಮಾನಂದ ಶೆಟ್ಟಿ, ಪೂರ್ಣಿಮಾ, ದಿವಾಕರ್ ಪಾಂಡೇಶ್ವರ, ರವಿಶಂಕರ್ ಮಿಜಾರ್, ಅಶ್ವಿತ್ ಕೊಟ್ಟಾರಿ, ಮಹೇಶ್ ಜೋಗಿ, ನಂದನ್ ಮಲ್ಯ, ಮೋಹನ್ ಪೂಜಾರಿ, ನಿತಿನ್ ಕುಮಾರ್, ಜಯಾನಂದ ಅಂಚನ್, ರಾಘವೇಂದ್ರ ರಾವ್, ಅಮಿತ್ ರಾಜ್ ಕೋಡಿಕಲ್, ನಿಕಟ ಪೂರ್ವ ಪಾಲಿಕೆ ಸದಸ್ಯರುಗಳು ಸೇರಿದಂತೆ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.

error: Content is protected !!