ಮುಂಬೈ: 400 ಕೆಜಿ ಆರ್ಡಿಎಕ್ಸ್ ಬಳಸಿ ಮುಂಬೈ ನಗರದಲ್ಲಿ ಭಾರೀ ಪ್ರಮಾಣದ ಸ್ಫೋಟ ನಡೆಸುವುದಾಗಿ ಬೆದರಿಕೆ ಹಾಕಿದ್ದ ಆರೋಪಿಯನ್ನು ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ನೋಯ್ಡಾದ ಅಶ್ವಿನ್ ಕುಮಾರ್ ಸುಪ್ರಾ ಎಂದು ಹೆಸರಿಸಲಾಗಿದೆ. ಈತ ಮೂಲತಃ ಬಿಹಾರದವನಾಗಿದ್ದಾನೆ. ಈತನಿಂದ ಬೆದರಿಕೆ ಸಂದೇಶ ಕಳುಹಿಸಲು ಬಳಸಿದ ಫೋನ್ ಮತ್ತು ಸಿಮ್ ಕಾರ್ಡ್ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಅಶ್ವಿನ್ ಕುಮಾರ್ ಸುಪ್ರಾನನ್ನು ಮುಂಬೈಗೆ ಕರೆತರಲಾಗುತ್ತಿದೆ.
ಮುಂಬೈ ಸಂಚಾರ ಪೊಲೀಸರ ವಾಟ್ಸಾಪ್ ಸಹಾಯವಾಣಿಗೆ ಗುರುವಾರ ಬೆದರಿಕೆ ಸಂದೇಶ ಕಳುಹಿಸಲಾಗಿತ್ತು. ನಗರದಾದ್ಯಂತ 34 ವಾಹನಗಳಲ್ಲಿ ಬಾಂಬ್ಗಳನ್ನು ಇರಿಸಲಾಗಿದೆ. 14 ಭಯೋತ್ಪಾದಕರು 400 ಕೆಜಿ ಆರ್ಡಿಎಕ್ಸ್ನೊಂದಿಗೆ ನಗರವನ್ನು ಪ್ರವೇಶಿಸಿದ್ದಾರೆ ಎಂದು ಸಂದೇಶದಲ್ಲಿ ಹೇಳಿದ್ದ.