ಮಂಗಳೂರು: ಕಳೆದ ಸುಮಾರು 3 ತಿಂಗಳಿನಿಂದ ಸತತವಾಗಿ ಯಾವುದೇ ಘನರೀತಿಯ ಕಟ್ಟಡ ನಿರ್ಮಾಣ ಕಾರ್ಯವಾಗಲೀ, ಇತರ ಕಾಮಗಾರಿಯಾಗಲೀ ನಡೆಯದೇ ಇದೇ ಉದ್ಯೋಗವನ್ನು ಅವಲಂಬಿಸಿರುವ ನಾವು ಹಾಗೂ ನಮ್ಮ ಕೈಕೆಳಗೆ ದುಡಿಯುವ ಕೂಲಿ ಕಾರ್ಮಿಕರು ಮತ್ತು ಅವರ ಪತ್ನಿ-ಮಕ್ಕಳು ಸಂಪಾದನೆ ಇಲ್ಲದೆ ದಾರಿಗೆ ಬಿದ್ದಂತಾಗಿ, ಇಡೀ ಕುಟುಂಬವೇ ಪರದಾಡುವ ಸ್ಥಿತಿಗೆ ತಲುಪಿದ್ದಾರೆ. ಹಾಗಾಗಿ ತಮಗೆ ಸಹಾಯಧನ ಬಿಡುಗಡೆ ಮಾಡುವಂತೆ ಪರವಾನಿಗೆ ಹೊಂದಿದ ಸಿವಿಲ್ ಇಂಜಿನಿಯರ್ಸ್ ಹಾಗೂ ಕಾಂಟ್ರಾಕ್ಟ್ದಾರರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ನಮ್ಮ ಈ ಪರಿಸ್ಥಿತಿಗೆ ಅನಪೇಕ್ಷಿತ ಅನಧಿಕೃತ ಕೆಂಪುಕಲ್ಲು, ಹೊಯಿಗೆ ಇತ್ಯಾದಿಗಳ ಸರಬರಾಜಿನ ಕೊರತೆ ಎಂದರೆ ತಪ್ಪಾಗಲಾರದು. ರಾಜಕೀಯವಾಗಲೀ, ಬಂಡವಾಳ ಶಾಹಿಗಳೇ ಆಗಲಿ ಇದುವರೆಗೆ ಇಲ್ಲದಿರುವ ಈ ಕ್ಷುಲ್ಲಕ ನೆಪವನ್ನೊಡ್ಡಿ ನಮಗೆಲ್ಲರಿಗೂ ಉದ್ಯೋಗ, ಸಂಪಾದನೆ, ಕೂಲಿ ಇಲ್ಲದಂತೆ ಮಾಡಿರುವುದು ಗಮನಾರ್ಹ. ದೈನಂದಿನ ದುಡಿದು ತಿನ್ನುವ ಕೂಲಿಕಾರ್ಮಿಕರ ಕುಟುಂಬವೇ ಉಪವಾಸ ಬೀಳುವ ಘಟ್ಟವನ್ನು ತಲುಪಿರುತ್ತದೆ.
ಆದುದರಿಂದ ಈ ನಮ್ಮೆಲ್ಲರ ಸಮಸ್ಯೆಯನ್ನು ಸಾಧ್ಯವಾದಷ್ಟು ಬಗೆಹರಿಸುವರೇ ಹಾಗೂ ಈ ತುರ್ತು ಸಂದರ್ಭದಲ್ಲಿ ನಮ್ಮನ್ನು ಪೋಷಿಸುವರೇ ಸರಕಾರ/ಸಂಬಂಧಿತ ಇಲಾಖೆ ನಮ್ಮ ಹಿತದೃಷ್ಟಿಯಿಂದ ಹುಟ್ಟುಹಾಕಿರುವ ʻಕಾರ್ಮಿಕರ ನಿಧಿʼಯಿಂದ ಕನಿಷ್ಟತಮ ವೇತನ/ಕೂಲಿ ಹಂಚುವಲ್ಲಿ ಸಹಾಯಧನ ಬಿಡುಗಡೆ ಮಾಡಿ ಕಾರ್ಮಿಕ ವರ್ಗದ ಹಿತಾಸಕ್ತಿಯನ್ನು ಕಾಪಾಡಬೇಕಾಗಿ ಈ ಮೂಲಕ ಒತ್ತಾಯಿಸುವುದಾಗಿದೆ. ಈಗಾಗಲೇ ಮಳೆಗಾಲದ ಕಷ್ಟಜೀವನದಿಂದ ಸಂಪಾದನಾ ರಹಿತವಾಗಿ ತತ್ತರಿಸಿ ಹೋಗಿರುವ ನಮ್ಮೆಲ್ಲರ ಸಂಸಾರವನ್ನು ಕಾರ್ಮಿಕರ ನಿಧಿಯ ವಿತರಣೆಯಿಂದ ಸರಿದೂಗಿಸಬೇಕಾಗಿ ಈ ಮೂಲಕ ಪ್ರಾರ್ಥಿಸುತ್ತೇವೆ ಎಂದು ಮನವಿಯಲ್ಲಿ ಸಂಘಟನೆಯ ಪರವಾಗಿ ಹಕೀಂ ಒತ್ತಾಯಿಸಿದ್ದಾರೆ.