ಮಂಗಳೂರು: ಈ ಬಾರಿ ಪ್ರಪ್ರಥಮ ಬಾರಿಗೆ ಇಸ್ಕಾನ್ ವತಿಯಿಂದ ಮಂಗಳೂರಿನ ಪಿವಿಎಸ್ ಕಲಾಕುಂಜ ಕೊಡಿಯಾಲ್ಬೈಲ್ನಲ್ಲಿರುವ ಶ್ರೀಕೃಷ್ಣ-ಬಲರಾಮ ಮಂದಿರ ಆ.15ರಿಂದ 16ರವರೆಗೆ ಅದ್ಧೂರಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಂದು ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಗುಣಕರ ರಾಮದಾಸ್ ಹೇಳಿದರು.
ಅವರು ಮಂಗಳೂರಿನ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಭಗವಾನ್ ಶ್ರೀಕೃಷ್ಣನ ದೈವಸ್ವರೂಪವು ಅವತಾರಕ್ಕೆ ಸಮರ್ಪಿತವಾಗಿದೆ. ಅವನಿಗಾಗಿ ಎರಡು ದಿನಗಳ ಕಾಲ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಭಕ್ತಿ, ಸಂಸ್ಕೃತಿ ಮತ್ತು ಕ್ರಿಯಾತ್ಮತೆಯ ಮೂಲಕ ಮಂಗಳೂರಿನ ಜನತೆಯನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಈ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಗರದಲ್ಲಿ ಶ್ರೀಕೃಷ್ಣ ಪ್ರಜ್ಞೆಯನ್ನು ಪಸರಿಸುವ ನಿಟ್ಟಿನಲ್ಲಿ ವಿವಿಧ ಧಾರ್ಮಿಕ ವಿನೋದಾವಳಿಗಳು, ಸ್ಪರ್ಧೆಗಳು, ಡಿಜಿಟಲ್ ಪ್ರಚಾರ, ಪವಿತ್ರ ಆಚರಣೆಗಳು ಹಾಗೂ ಇನ್ನಿತರ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಆ.15ರಂದು ಬೆಳಿಗ್ಗೆ 9.00 ರಿಂದ ರಾತ್ರಿ 9.00 ರವರೆಗೆ ಮಂಗಳೂರಿನ ಇಸ್ಕಾನ್ ಶ್ರೀಕೃಷ್ಣ ಬಲರಾಮ ಮಂದಿರದಲ್ಲಿ ಶ್ರೀಕೃಷ್ಣನಿಗೆ ಮಹಾಭಿಷೇಕ, ಭಜನೆ, ಆಧ್ಯಾತ್ಮಿಕ ಪ್ರವಚನ ನಡೆಯಲಿದೆ. ಮರುದಿನ ಆ.16ರಂದು ಬೆಳಿಗ್ಗೆ 9.00 ರಿಂದ 1.00 ಗಂಟೆಯವರೆಗೆ ಕೊಡಿಯಾಲ್ಬೈಲ್ನ ಶಾರದಾ ವಿದ್ಯಾಲಯ ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಹಬ್ಬದ ಫುಡ್ ಸ್ಟಾಲ್, ಭಕ್ತಿಗೀತೆ ರಸಮಂಜರಿ, ಹಾಗೂ ಆತ್ಮಸ್ಪೂರ್ತಿದಾಯಕವಾದ ಮಧ್ಯರಾತ್ರಿ ಆರತಿ ನಡೆಯಲಿದೆ ಎಂದರು.
ಆಳ್ವಾಸ್ ಶಿಕ್ಷಣ ಸಂಸ್ಥೆ ವತಿಯಿಂದ ಶ್ರೀಕೃಷ್ಣನ ಬಾಲಲೀಲೆ ಒಳಗೊಂಡ ನೃತ್ಯ ಸಂಗೀತ ಮತ್ತು ನಾಟಕ ರೂಪಾಂತರ ʻಶ್ರೀಕೃಷ್ಣ ವೈಭವಮ್ʼ ನಡೆಯಲಿದೆ. ʻಬ್ಲಾಗ್ ಫಾರ್ ಕೃಷ್ಣʼ ಎಂಬ ಉಪಕ್ರಮದಲ್ಲಿ ಶ್ರೀಕೃಷ್ಣಾ ಜನ್ಮಾಷ್ಟಮಿ ಆಚರಣೆಯ ಬ್ಲಾಗ್, ರೀಲ್ಸ್ ಮತ್ತು ಸೃಜನಾತ್ಮಕ ರೂಪಣೆಯನ್ನು ಪ್ರಸ್ತುತಗೊಳ್ಳಲಿದೆ. ಅಲ್ಲದೆ ಸಾಂಸ್ಕೃತಿಕ ಸ್ಪರ್ಧೆಗಳು, ಎಲ್ಲಾ ವಯಸ್ಸಿನವರಿಗಾಗಿ ವಿವಿಧ ಫ್ಯಾನ್ಸಿ ಡ್ರೆಸ್, ಕೃಷ್ಣನ ವಿಷಯಾಧಾರಿತ ಚಿತ್ರಕಲೆ, ಕ್ವಿಜ್ ಇವುಗಳನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು. ತಮ್ಮ ಹೆಸರು ನೋಂದಾವಣೆಗಾಗಿ ಸಂ . 7259862303 / 9741932183 ಸಂಪರ್ಕಿಸುವಂತೆ ತಿಳಿಸಿದರು.
ಹಬ್ಬದ ಆಚರಣೆಯನ್ನು ಪಾಕಶಾಲೆಯ ರುಚಿಯೊಂದಿಗೆ ಉಣಬಡಿಸಲು ಮಂಗಳೂರಿನ ಸುಪ್ರಸಿದ್ಧ ಫುಡ್ ಬ್ರಾಂಡ್ಗಳು ಅಧಿಕೃತವಾದ ಪ್ರಸಾದಮ್ ಮತ್ತು ರುಚಿಕರ ತಿಂಡಿ ತಿನಿಸುಗಳೊಂದಿಗೆ ತಯಾರಾಗಿದ್ದಾರೆ. ಆಧ್ಯಾತ್ಮದ ಅನುಭೂತಿ ನೀಡುವ ಶ್ರೀಕೃಷ್ಣನ ಜನ್ಮವನ್ನು ಪುನರ್ಬಿಂಬಿಸುವ ದೈವಿಕ ಜನ್ಮ ಆರತಿಯು ನಿಖರವಾಗಿ ಮಧ್ಯರಾತ್ರಿ ವೇಳೆ ಜರಗಲಿದೆ. ವೈದಿಕ ಮಂತ್ರೋಚ್ಛಾರಣೆ, ಶ್ರೀಕೃಷ್ಣನ ಮಹಾಭಿಷೇಕ ಸಂಪನ್ನಗೊಳ್ಳಲಿದೆ. ಮಂಗಳೂರಿನ ಜನತೆ ಇದರಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಇಸ್ಕಾಂನ್ ಮಂಗಳೂರು ಉಪಾಧ್ಯಕ್ಷ ಸನಂದನ ದಾಸ, ಸಂಚಾಲಕ ಸುಂದರ ಗೌರ ದಾಸ ಹಾಗೂ ಮನು ಉಪಸ್ಥಿತರಿದ್ದರು.