ಮಂಗಳೂರು: ಧರ್ಮಸ್ಥಳ ಗ್ರಾಮದ ಕಾಡಿನಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಹೊಸ ಸಾಕ್ಷಿದಾರರು ಎಸ್ಐಟಿಗೆ ದೂರು ನೀಡಿ ಮುಸುಕುಧಾರಿ ವ್ಯಕ್ತಿಯೊಬ್ಬ ರಹಸ್ಯವಾಗಿ ಶವಗಳನ್ನು ಹೂತಿಟ್ಟಿರುವುದನ್ನು ನೋಡಿದ್ದಾಗಿ ಎಸ್ಐಟಿ ಮುಂದೆ ಹೇಳಿದ್ದಾರೆ ಎನ್ನಲಾಗಿದೆ.
ಅನಾಮಿಕ ಮುಸುಕುಧಾರಿ ವ್ಯಕ್ತಿಯೊಬ್ಬ ಶವ ಹೂತಿದ್ದನ್ನು ನಾವು ನೋಡಿದ್ದೇವೆ ಎಂದು ಆ ಇಬ್ಬರು ಸಾಕ್ಷಿದಾರರು ಎಸ್ಐಟಿಗೆ ದೂರು ನೀಡಿದ್ದಾರೆ. ಎಸ್ಐಟಿ, ದೂರು ಸ್ವೀಕರಿಸಿ, ಸ್ಥಳೀಯ ಧರ್ಮಸ್ಥಳ ಠಾಣೆಗೆ ಅಧಿಕೃತ ದೂರು ಸಲ್ಲಿಸಲು ಸೂಚನೆ ನೀಡಿದೆ. ಈ ಸೂಚನೆಯ ಹಿನ್ನೆಲೆಯಲ್ಲಿ ಇಬ್ಬರೂ ಧರ್ಮಸ್ಥಳ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ. ದೃಶ್ಯಮಾಧ್ಯಮದಲ್ಲಿ ತೋರಿಸಲಾಗುತ್ತಿರುವ ದೂರುದಾರನನ್ನು ನಾವು ಗ್ರಾಮಸ್ಥರು ಗುರುತಿಸಿದ್ದೇವೆ. ಆತ ರಹಸ್ಯವಾಗಿ, ಜನರಿಗೆ ಕಾಣದಂತೆ ಧರ್ಮಸ್ಥಳ ಗ್ರಾಮದ ವಿವಿಧೆಡೆ ಶವಗಳನ್ನು ಕೊಂಡೊಯ್ದು ಹೂತುಹಾಕಿರುವುದನ್ನು ನಾವು ಹಲವು ಸ್ಥಳಗಳಲ್ಲಿ ನೋಡಿದ್ದೇವೆ. ಇಂತಹ ಕೆಲಸಗಳು ರಹಸ್ಯವಾಗಿ ಇರಲಾರವು ಎಂಬುದನ್ನು ಆತ ತಿಳಿದಿರಬೇಕಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಜನರ ರಕ್ಷಣೆಗೆಂದು ಮಾನ್ಯ ಮುಖ್ಯಮಂತ್ರಿ ಸ್ಥಾಪಿಸಿರುವ ಈ ವಿಶೇಷ ತನಿಖಾ ದಳಕ್ಕೆ ನಾವು ಸಹಕಾರ ನೀಡಬೇಕೆಂದು ನಿರ್ಧರಿಸಿದ್ದೇವೆ. ದೂರುದಾರನು ತೋರಿಸುತ್ತಿರುವ ಸ್ಥಳಗಳಲ್ಲಿ ಮೃತದೇಹಗಳನ್ನು ಹೊರತೆಗೆಯುವ ಕಾರ್ಯಾಚರಣೆಯಲ್ಲಿ ನಮ್ಮನ್ನೂ ಸೇರಿಸಬೇಕು. ಜೊತೆಗೆ, ಆತ ರಹಸ್ಯವಾಗಿ ಶವ ಹೂತುಹಾಕಿದ್ದನ್ನು ನಾವು ನೋಡಿರುವ ಎಲ್ಲಾ ಸ್ಥಳಗಳನ್ನು ಸ್ವತಂತ್ರವಾಗಿ ತೋರಿಸಲು ಅವಕಾಶ ನೀಡಬೇಕು ಎಂದು ಅವರು ಬೇಡಿಕೆ ಇಟ್ಟಿದ್ದಾರೆ. ಈ ರೀತಿಯಾಗಿ, ಮತ್ತಿಬ್ಬರು ಸಾಕ್ಷಿದಾರರು ಎಸ್ಐಟಿಗೆ ತಮ್ಮ ಹೇಳಿಕೆಗಳನ್ನು ದಾಖಲಿಸಿರುವುದು ಈಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಕಳೆದ 10 ದಿನಗಳಿಂದ ಮುಸುಕುದಾರಿ ತೋರಿಸಿದ ಸ್ಥಳಗಳಲ್ಲಿ ಭೂಮಿ ಅಗೆದು ಪರಿಶೀಲನೆ ನಡೆಸಿರುವ ಎಸ್.ಐ.ಟಿ., ನಿನ್ನೆ ಒಂದೇ ದಿನ ನಾಲ್ಕು ಸ್ಥಳಗಳಲ್ಲಿ ಶೋಧ ಕಾರ್ಯ ಕೈಗೊಂಡಿತ್ತು. ಈವರೆಗೆ ಒಟ್ಟು 15 ಸ್ಥಳಗಳಲ್ಲಿ ಶೋಧ ಕಾರ್ಯ ನಡೆದಿದ್ದು, ಇನ್ನೂ 13 ನೇ ಪಾಯಿಂಟ್ ಅನ್ನು ಶೋಧ ನಡೆಸದೆ ಬಿಟ್ಟಿದೆ. ಈ ಸ್ಥಳವನ್ನು ಅಗೆಯಲು ಜಿಪಿಆರ್ (GPR) ಯಂತ್ರದ ಬಳಕೆ ಕುರಿತು ಅಧಿಕಾರಿಗಳು ಚರ್ಚೆ ನಡೆಸುತ್ತಿದ್ದಾರೆ. ಆದರೂ 13ನೇ ಪಾಯಿಂಟ್ ಅನ್ನು ಅಗೆಯಲು ಯಾಕಿಷ್ಟು ತಡ ಎಂಬ ಕುತೂಹಲ ಮತ್ತು ನಾನಾ ಪ್ರಶ್ನೆಗಳು ಹುಟ್ಟಿಕೊಂಡಿದೆ.