ನೆಲಮಂಗಲ: ಕೌಟುಂಬಿಕ ಸಮಸ್ಯೆ ಪರಿಹರಿಸಿಕೊಳ್ಳಲು ಬಂದ ಮಹಿಳೆಯೊಬ್ಬರ ಮೇಲೆ ಮೌಲ್ವಿಯೊಬ್ಬ ಯಂತ್ರಶಾಸ್ತ್ರದ ನೆಪದಲ್ಲಿ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಬೆಂಗಳೂರಿನ ನೆಲಮಂಗಲ ತಾಲೂಕಿನ ಡಾಬಸ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೂನ್ 30ರಂದು ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.
ಸೋಂಪುರ ಹೋಬಳಿಯ ಕೂತಘಟ್ಟ ಗ್ರಾಮದ ಭದ್ರೆ ಅಲಂ ಲೈಂಗಿಕ ದೌರ್ಜನ್ಯ ಮಾಡಿದ ಆರೋಪಿ.
ಜೂನ್ 30ರಂದು ಸಂಜೆ 7 ಗಂಟೆ ಸುಮಾರಿಗೆ ತುಮಕೂರು ಮೂಲದ ಮಹಿಳೆ ತನ್ನ ಪತಿಯ ಜೊತೆ ಕೂತಗಟ್ಟದಲ್ಲಿರುವ ಭದ್ರೆ ಅಲಂ ಯಂತ್ರಶಾಸ್ತ್ರ ಮಾಡುತ್ತಾರೆಂದು ತಿಳಿದು ಅವರ ಬಳಿ ಬಂದು ಸಂಸಾರದ ತೊಂದರೆ ಹೇಳಿ ಕಟಲೇ ಮಾಡಿಕೊಡುವಂತೆ ಕೇಳಿದ್ದಾರೆ. ಆಗ ಭದ್ರೆ ಅಲಂ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.
ಮಹಿಳೆಯ ಖಾಸಗಿ ಅಂಗ ಮುಟ್ಟಿ ದೈಹಿಕವಾಗಿ ಹಿಂಸೆ ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ ಜುಲೈ 9ರಂದು ಮಹಿಳೆ ಡಾಬಸ್ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಹಿಳೆ ನೀಡಿದ ದೂರಿನ ಅನ್ವಯ ಡಾಬಸ್ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.