ಯಾದಗಿರಿ: ನಿನ್ನ ಮೇಲೆ ಜಾತಿ ನಿಂದನೆ ಕೇಸ್ ಹಾಕುವುದಾಗಿ ಎಂದು ವ್ಯಕ್ತಿಯೋರ್ವ ಹಾಕಿದ ಬೆದರಿಕೆಗೆ ಹೆದರಿ ಮಗ ಆತ್ಮಹತ್ಯೆ ಮಾಡಿಕೊಂಡರೆ, ಮಗನ ಸಾವಿನ ಸುದ್ದಿ ತಿಳಿದು ತಂದೆ ಹೃದಯಾಘಾತದಿಂದ ಸಾವನ್ನಪ್ಪಿರುವಂತಹ ಅತ್ಯಂತ ಕರುಣಾಜಕ ಘಟನೆ ಯಾದಗಿರಿ ಜಿಲ್ಲೆಯ ವಡಗೇರ ಪಟ್ಟಣದಲ್ಲಿ ನಡೆದಿದೆ.

ಮರಕ್ಕೆ ನೇಣುಬಿಗಿದುಕೊಂಡು ಮೆಹಬೂಬ್(22) ಆತ್ಮಹತ್ಯೆಗೆ ಶರಣಾಗಿದ್ದು, ಹೃದಯಾಘಾತದಿಂದ ತಂದೆ ಸೈಯದ್ ಅಲಿ(50) ಸಾವನ್ನಪ್ಪಿದ್ದಾರೆ. ವಡಗೇರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಅಸಲಿಗೆ ನಡೆಸಿದ್ದೇನು?
ಬೇರೆಯವರ ಜಮೀನಿನ ಮೂಲಕ ತನ್ನ ಜಮೀನಿಗೆ ನಡೆದುಕೊಂಡು ಹೋಗುವ ವಿಚಾರವಾಗಿ ಕಳೆದ ಒಂದು ವಾರದ ಹಿಂದೆ ವಡಗೇರ ಪಟ್ಟಣದ ಪರಿಶಿಷ್ಠ ಕುಟುಂಬದ ಸದಸ್ಯರ ಜೊತೆ ಜಗಳ ಉಂಟಾಗಿತ್ತು. ಜಗಳದ ಬಳಿಕ ಹಿರಿಯರು ಕುಳಿತು ನ್ಯಾಯ ಪಂಚಾಯತಿ ಮಾಡಿ ಬಗೆ ಹರಿಸಿದ್ದರು. ಆದರೆ ಬೇರೆ ಊರಿಂದ ಬಂದ ದಲಿತ ಮುಖಂಡನೋರ್ವ ಬಂದು ನಿನ್ನ ಮೇಲೆ ಜಾತಿ ನಿಂದನೆ ಕೇಸ್ ದಾಖಲು ಮಾಡಿ, ಜೈಲಿಗೆ ಕಳುಹಿಸುತ್ತೇನೆ ಅಂತ ಮೆಹಬೂಬ್ಗೆ ಬೆದರಿಕೆ ಹಾಕಿದ್ದರು.
ಕೇಸ್ ದಾಖಲಾದರೆ ಮರ್ಯಾದೆ ಹೋಗುತ್ತದೆ, ಜೈಲಿಗೆ ಹೋಗಬೇಕಾಗುತ್ತದೆ ಎಂದು ಕೊರಗಿ ಹೆದರಿದ ಮೆಹಬೂಬ್ ಬುಧವಾರದಂದು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಇತ್ತ ಮಗನ ಆತ್ಮಹತ್ಯೆ ಸುದ್ದಿ ತಿಳಿದು ಶಾಕ್ಗೆ ಒಳಗಾದ ತಂದೆಗೆ ಹೃದಯಾಘಾತವಾಗಿದೆ. ಕೂಡಲೇ ಅವರನ್ನು ಕಲಬುರಗಿಯ ಜಯದೇವ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಂದೆ ಸೈಯದ್ ಸಲಿ ಕೂಡ ಕೊನೆಯುಸಿರೆಳೆದಿದ್ದಾರೆ.