ಮಂಗಳೂರು: ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದಿಂದ ಮಂಗಳೂರಿಗೆ ಮಾದಕವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮಂಗಳೂರಿನ ಪೊಲೀಸರು ಅಲ್ಲಿಗೆ ತೆರಳಿ ಬಂಧಿಸಿ ಕರೆತಂದಿದ್ದಾರೆ.
ಮಧ್ಯಪ್ರದೇಶ ಬರ್ವಾನಿ ಜಿಲ್ಲೆಯ ಮೋಹನ್ ಪಡವಾ ಗ್ರಾಮದ ನಿವಾಸಿ ಮಾಯಾರಾಮ್ (32), ಮಹಾರಾಷ್ಟದ ಜಲಗಾಂವ್ ಜಿಲ್ಲೆಯ ಚೋಪ್ಡಾ ನಿವಾಸಿಗಳಾದ
ಪ್ರೇಮಸಿಂಗ್ ರಾಮ ಪವಾರ (48) ಹಾಗೂ ಅನಿಲ್ ಪ್ರಕಾಶ್ ಕೋಲಿ(35) ಬಂಧಿತ ಆರೋಪಿಗಳು.
ಮಾದಕ ವಸ್ತು ಸೇವನೆ ಮಾಡಿ ಸಿಕ್ಕಿಬಿದ್ದವರ ತನಿಖೆ ಆರಂಭಿಸಿ ಇಲ್ಲಿಗೆ ಪೂರೈಕೆ ಮಾಡುವವರ ಹಿಂದೆ ಮಂಗಳೂರು ಪೊಲೀಸರು ಬಿದ್ದಿದ್ದರು. ಪೊಲೀಸರು ತನಿಖೆ ನಡೆಸಿ ಮಾದಕ ವಸ್ತಗಳನ್ನು ಮಂಗಳೂರು ನಗರಕ್ಕೆ ಪೂರೈಕೆ ಮಾಡುವ 6 ಜನರನ್ನು ಪತ್ತೆ ಮಾಡಿ ಈಗಾಗಲೇ ದಸ್ತಗಿರಿ ಕ್ರಮ ಕೈಗೊಂಡು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಅವರಿಗೆ ನ್ಯಾಯಲಯವು ನ್ಯಾಯಾಂಗ ಬಂಧನ ವಿಧಿಸಿತ್ತು.
ಪ್ರಕರಣ ತನಿಖೆಯ ವೇಳೆ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯದಿಂದಲೂ ಮಾದಕ ವಸ್ತು ಸರಬರಾಜು ಆಗುತ್ತಿರುವ ಮಾಹಿತಿ ತಿಳಿದುಬಂದಿತ್ತು. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯಕ್ಕೆ ಪೊಲೀಸರ ವಿಶೇಷ ತಂಡವನ್ನು ಕಳುಹಿಸಿ 3 ಮಂದಿ ಆರೋಪಿಗಳನ್ನು ಪತ್ತೆ ಮಾಡಿ ದಸ್ತಗಿರಿ ಮಾಡಿದ್ದಾರೆ. ಆರೋಪಿಗಳನ್ನು ಇಂದು (ಜು.9) ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ಆರೋಪಿಗಳು ಕೃತ್ಯಕ್ಕೆ ಬಳಸಿದ 3 ಮೊಬೈಲ್ ಫೋನ್ ಗಳು ಹಾಗೂ ನಗದು ಹಣ ರೂ.1,78,920/- ರೂಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ತನಿಖೆ ಮುಂದುವರೆದಿದ್ದು ಇನ್ನುಳಿದ ಆರೋಪಿತರನ್ನು ಶೀಘ್ರದಲ್ಲಿ ಪತ್ತೆ ಹಚ್ಚಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಆರೋಪಿತರ ಪತ್ತೆ ಕಾರ್ಯದಲ್ಲಿ ಸೆನ್ ಕ್ರೈಂ ಪೊಲೀಸ್ ಠಾಣಾ ಮತ್ತು ಮಂಗಳೂರು ನಗರದ ವಿಶೇಷ ತಂಡದ ಅಧಿಕಾರಿ ಮತ್ತು ಸಿಬ್ಬಂದಿ ಭಾಗವಹಿಸಿದ್ದರು. ಈ ಬಗ್ಗೆ ಜುಲೈ 2ರಂದು ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ: 31/2025 ಕಲಂ. 8(c),20(b)(ii)(B) ಎನ್.ಡಿ.ಪಿ.ಎಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿತ್ತು.