ಮಂಗಳೂರು: ಪುತ್ತೂರಿನ ಹದಿಹರೆಯದ ಹುಡುಗಿಗೆ ಆ ಹುಡುಗನಿಂದ ಅನ್ಯಾಯ ಆಗಿದ್ದು, ಹುಟ್ಟಿದ ಮಗುವಿಗಾಗಿ ಆತ ಬಾಳು ಕೊಡಬೇಕು. ಕಾಂಗ್ರೆಸ್ ಆ ಹುಡುಗಿಯ ಪರವಾಗಿ ನಿಂತಿದ್ದು, ಆಕೆಗೆ ನ್ಯಾಯ ಕೊಡಿಸುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಪದ್ಮರಾಜ್ ಆರ್. ಆಗ್ರಹಿಸಿದ್ದಾರೆ.
ಅವರು ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತಾಡಿ, ಪುತ್ತೂರಿನ ಹದಿಹರೆಯದ ಹುಡುಗಿಗೆ ಬಾಳುಕೊಡುವುದು ಆ ಯುವಕನ ಸಾಮಾಜಿಕ ಜವಾಬ್ದಾರಿ. ಈ ವಿಚಾರದಲ್ಲಿ ಕಾಂಗ್ರೆಸ್ಗೆ ರಾಜಕೀಯ ಮಾಡುವ ಎಷ್ಟೋ ಅವಕಾಶಗಳಿದ್ದವು. ಆದರೆ ಕಾಂಗ್ರೆಸ್ ಯಾವತ್ತೂ ಈ ರೀತಿಯ ಹೀನ ಕೆಲಸಕ್ಕೆ ಕೈ ಹಾಕಲು ಹೋಗದೆ, ಆಕೆಗೆ ನ್ಯಾಯ ಸಿಗುವವರೆಗೆ ಆಕೆಯ ಜೊತೆ ನಿಲ್ಲಲಿದೆ ಎಂದರು.
ಕಾಂಗ್ರೆಸ್ ಪುತ್ತೂರು ಶಾಸಕ ಅಶೋಕ್ ರೈ ಕೇಸ್ ದಾಖಲಿಸದಂತೆ ಹುಡುಗಿಯ ಮನೆಯವರಿಗೆ ಹೇಳಿದ್ದರು ಎನ್ನುವ ಆರೋಪದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪದ್ಮರಾಜ್, ಅಶೋಕ್ ರೈ ಹೇಳಿಕೆಯನ್ನು ಸಮರ್ಥಿಸಿಕೊಂಡ ಪದ್ಮರಾಜ್, ಅಶೋಕ್ ರೈ ಹೇಳಿದ್ದು ಸರಿ ಇದೆ. ಆರಂಭದಲ್ಲಿ ಅವರು ಹುಡುಗನ ತಂದೆ ಕರೆ ಮಾಡಿ ಮಾತಾಡಿ ಎಲ್ಲವನ್ನೂ ಸರಿಪಡಿಸಿ ಎಂದು ಸಲಹೆ ನೀಡಿ ಅವರಿಬ್ಬರಿಗೆ ಮದುವೆ ಮಾಡುವ ಪ್ರಯತ್ನ ಮಾಡಿದ್ದಾರೆ. ಯಾಕೆಂದರೆ ಕೇಸ್ ಕೊಟ್ಟರೆ ಅವನು ಜೈಲಿಗೆ ಹೋಗುತ್ತಾನೆ, ಮತ್ತೆ ಕೇಸ್ ನಡೆಯುತ್ತದೆ. ಆದರೆ ಹುಟ್ಟಿದ ಮಗು ಸಮಾಜಹದಲ್ಲಿ ಬದುಕಬೇಕೆಂಬ ಆಕೆಗೆ ನ್ಯಾಯ ಒದಗಿಸಲು ಅಶೋಕ್ ರೈ ಪ್ರಯತ್ನಿಸಿದ್ದರು ಎಂದರು.
ಬ್ರಹ್ಮಾವರ ಗೋ ಹತ್ಯೆ ಪ್ರಕರಣವನ್ನು ಉಡುಪಿಯ ದಕ್ಷ ಪೊಲೀಸರು ಭೇದಿಸಿ ಒಳ್ಳೆಯ ಕೆಲಸ ಮಾಡಿದ್ದಾರೆ. ಈ ಪ್ರಕರಣದ ಅಸಲಿಯತ್ ಅನ್ನು ಸರಿಯಾದ ತನಿಖೆಯಿಂದ ಪತ್ತೆಹಚ್ಚಿ ಜಿಲ್ಲೆಯಲ್ಲಿ ಸಂಭವಿಸಬಹುದಾಗಿದ್ದ ಕೋಮುವಾದವನ್ನು ತಪ್ಪಿಸಿದ್ದಾರೆ. ಇದನ್ನು ಮುಂದಿಟ್ಟು , ಒಂದು ಸಮುದಾಯವನ್ನು ಮುಂದಿಟ್ಟು ರಾಜಕೀಯ ಮಾಡಲು ಹೊರಟವರ ಬಾಯಿ ಮುಚ್ಚಿಸಿದ್ದಾರೆ ಎಂದರು.
ಕೆಂಪು ಕಲ್ಲು, ಮರಳು ಸಮಸ್ಯೆಗಳ ಬಗ್ಗೆ ಮಾತಾಡಿದ ಪದ್ಮರಾಜ್, ನಾವು ಎಸ್ಪಿ, ಕಮಿಷನರ್ನಂತಹಾ ಒಳ್ಳೆಯ ಆಫೀಸರ್ಗಳನ್ನು ತಂದ ಕಾರಣ ಜಿಲ್ಲೆಯಲ್ಲಿ ಶಾಂತಿ ನೆಲೆಸಿದೆ. ಕಾನೂನು ಬದ್ಧವಾಗಿ ಮರಳುಗಾರಿಕೆ, ಕೆಂಪು ಕಲ್ಲು ಗಣಿಗಾರಿಕೆ ಮಾಡುವವರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಇಲ್ಲಿರುವ ಭ್ರಷ್ಟತೆ ನಿಂತಿದ್ದು, ಸಮಾಜದ್ರೋಹಿಗಳ ಕೈಗೆ ಹಣ ಹೋಗವುದನ್ನು ನಿಲ್ಲಿಸಲಾಗುತ್ತಿದೆ. ಇನ್ನು ಕೆಲವು ದಿನಗಳಲ್ಲಿ ಈ ಎಲ್ಲಾ ಸಮಸ್ಯೆ ತಿಳಿಯಾಗುತ್ತದೆ ಎಂದು ಪದ್ಮರಾಜ್ ಹೇಳಿದರು.
ಸಿ.ಟಿ. ರವಿ ಅವರು ಕಾಂಗ್ರೆಸ್ ಉಸ್ತುವಾರಿ ಕಪ್ಪಾ ಸಂಗ್ರಹಿಸಲು ಬಂದಿದ್ದಾ ಎಂದು ಕೇಳಿರುವುದು ಅಕ್ಷಮ್ಯ. ಬಿಜೆಪಿ ಅಧಿಕಾರದಲ್ಲಿದ್ದಾಗ ಅವರ ಉಸ್ತುವಾರಿಯೂ ರಾಜ್ಯಕ್ಕೆ ಬರುತ್ತಿದ್ದರು. ಹಾಗಾದರೆ ಅವರೂ ಕೂಡಾ ಕಪ್ಪ ಸಂಗ್ರಹಿಸಿದ್ದರಾ? ಪ್ರಶ್ನಿಸಿದ ಅವರು, ಅವರಿಗೆ ಕಪ್ಪ ಸಂಗ್ರಹಿಸಿ ಅಭ್ಯಾಸ ಇರುವುದರಿಂದಲೇ ಈ ರೀತಿ ಹೇಳಿಕೆ ನೀಡಿದ್ದಾರೆ, ಬಿಜೆಪಿಗರು ಕಾಂಗ್ರೆಸ್ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡುವುದನ್ನು ನಿಲ್ಲಿಸಲಿ ಎಂದರು.
ದಿಢೀರ್ ಹೃದಯಾಘಾತ ಸಂಭವಿಸಿ ಅನೇಕರು ಸಾಯುತ್ತಿದ್ದಾರೆ. ಈ ಬಗ್ಗೆ ಸರ್ಕಾರ ತಜ್ಞರನ್ನು ನೇಮಿಸಿ ತನಿಖೆ ನಡೆಸಬೇಕು ಎಂದು ಪದ್ಮರಾಜ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಬ್ಲಾಕ್ ಅಧ್ಯಕ್ಷರಾದ ಪ್ರಕಾಶ್ ಸಾಲಿಯಾನ್, ಜೆ. ಅಬ್ದುಲ್ ಸಲೀಂ, ಅಪ್ಪಿ, ನವೀನ್ ಡಿಸೋಜಾ, ಸಬೀರ್ ಎಸ್., ಗಿರೀಶ್ ಶೆಟ್ಟಿ, ಚೇತನ್ ಕುಮಾರ್ ಹಾಗೂ ಅಪ್ಪಿ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.