ಮಂಗಳೂರು: ಅಪಾರ ಪ್ರಮಾಣದಲ್ಲಿ ಮಳೆ ಸುರಿದ ಕಾರಣ ಗುಡ್ಡ ಸಡಿಲಗೊಂಡು ಬೃಹತ್ ಗಾತ್ರದ ಬಂಡೆಕಲ್ಲುಗಳು ಸಕಲೇಶಪುರದಿಂದ ಸುಬ್ರಹ್ಮಣ್ಯ ರೋಡ್ ರೈಲ್ವೆ ನಿಲ್ದಾಣದ ನಡುವೆ ಹಾಸನ ಜಿಲ್ಲೆಯ ಯಡಕುಮೇರಿ – ಸಿರಿಬಾಗಿಲು ನಡುವಿನ ರೈಲ್ವೆ ಹಳಿಯ ಮೇಲೆಯೇ ಬಿದ್ದ ಪರಿಣಾಮ ಮಂಗಳೂರಿಗೆ ಬರುವ ರೈಲು ಸುಮಾರು 2.48 ಗಂಟೆ ತಡವಾಗಿ ಆಗಮಿಸಿತು. ಅಲ್ಲದೆ ಹಲವು ರೈಲು ಸಂಚಾರದಲ್ಲಿ ಹಲವು ಗಂಟೆಗಳ ಕಾಲ ವ್ಯತ್ಯಯ ಉಂಟಾಯಿತು.
ರೈಲು ಸಂಖ್ಯೆ 16511 ಕೆಎಸ್ಆರ್ ಬೆಂಗಳೂರು-ಕಣ್ಣೂರು ಎಕ್ಸ್ ಪ್ರೆಸ್ ಕಡಗರವಳ್ಳಿಗೆ ಶನಿವಾರ ಮುಂಜಾನೆ 3:40ಕ್ಕೆ ಆಗಮಿಸಿದ್ದು, 4 ಗಂಟೆ 10 ನಿಮಿಷ ತಡವಾಗಿ ಸಂಚರಿಸಿತು. ರೈಲು ಸಂಖ್ಯೆ 16585 SMVT ಬೆಂಗಳೂರು – ಮುರುಡೇಶ್ವರ ಎಕ್ಸ್ಪ್ರೆಸ್ ಸಕಲೇಶಪುರಕ್ಕೆ ಮುಂಜಾವ 3:10ಕ್ಕೆ ಆಗಮಿಸಿದ್ದು 3 ಗಂಟೆ 50 ನಿಮಿಷ ತಡವಾಗಿ ಹೊರಟಿದೆ. ರೈಲು ಸಂಖ್ಯೆ 07377 ವಿಜಯಪುರ – ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ ವಿಶೇಷ ರೈಲು ಸಕಲೇಶಪುರಕ್ಕೆ ಬೆಳಗ್ಗೆ 6:26ಕ್ಕೆ ಆಗಮಿಸಿದ್ದು, ಸುಮಾರು 2 ಗಂಟೆ 48 ನಿಮಿಷ ತಡವಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಹಿಟಾಚಿ ಯಂತ್ರಗಳ ಮೂಲಕ ಬಂಡೆಕಲ್ಲುಗಳನ್ನು ತೆರವುಗೊಳಿಸಲಾಗಿದ್ದು, ಹಾನಿಗೊಳಗಾಗಿರುವ ರೈಲು ಹಳಿಗಳ ದುರಸ್ತಿ ಕಾರ್ಯ ಭರದಿಂದ ಸಾಗಿದೆ. ಈ ಮಧ್ಯೆ ಸಂಚಾರ ಅಡಚಣೆಯ ವೇಳೆ ರೈಲಿನಲ್ಲಿರುವ ಪ್ರಯಾಣಿಕರಿಗೆ ಕುಡಿಯುವ ನೀರು, ಬಿಸ್ಕತ್ತು, ಉಪಹಾರ ಮತ್ತು ಚಹಾ ವ್ಯವಸ್ಥೆ ಮಾಡಲಾಗಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.
ಪ್ರಯಾಣಿಕರು NTES ಅಥವಾ Where is My Train ಅಪ್ಲಿಕೇಶನ್ ಮೂಲಕ ತಮ್ಮ ರೈಲನ್ನು ಲೈವ್ ಆಗಿ ಟ್ರ್ಯಾಕ್ ಮಾಡಬಹುದು. ಮಾತ್ರವಲ್ಲದೆ ತುರ್ತು ಸಂದರ್ಭದಲ್ಲಿ, @RailwaySeva ಗೆ ಟ್ವೀಟ್ ಮಾಡುವುದು ಅಥವಾ 139 ನಂಬರಿಗೆ ಕರೆ ಮಾಡಬಹುದು ಎಂದು ರೈಲ್ವೆ ಇಲಾಖೆಯ ಪ್ರಕಟಣೆ ತಿಳಿಸಿದೆ.
ಕನಸಿನ ಮನೆಯನ್ನು ನಿಮ್ಮದಾಗಿಸಲು ಡ್ರೀಮ್ ಡೀಲ್ಗೆ ಸೇರಲು ಇಲ್ಲಿ ಕ್ಲಿಕ್ಕಿಸಿ