ಮಂಗಳೂರು: ಕರ್ನಾಟಕ ಮತ್ತು ಕೇರಳದಲ್ಲಿ ಅತ್ಯಂತ ಪ್ರಸಿದ್ಧ ಆಧ್ಯಾತ್ಮಿಕ ನಾಯಕರೂ ಧಾರ್ಮಿಕ ವಿದ್ವಾಂಸರೂ ಆಗಿದ್ದ ಖಾಝಿ ಅಸ್ಪಯ್ಯದ್ ಉಮರುಲ್ ಫಾರೂಕ್ ಅಲ್ ಬುಖಾರಿ ಪೊಸೋಟ್ ತಂಙಳ್ ಅವರ ಹತ್ತನೇ ಉರೂಸ್ ಹಾಗೂ ಅವರು ಸ್ಥಾಪಿಸಿದ ಮಂಜೇಶ್ವರ ಹೊಸಂಗಡಿಯ ಮಳ್ಹರ್ ವಿದ್ಯಾಸಂಸ್ಥೆಯ ರಜತ ಮಹೋತ್ಸವವು ಜೂನ್ 19ರಿಂದ 22ರ ತನಕ ನಡೆಯಲಿದೆ ಎಂದು ಮಳ್ ಹರ್ ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸಯ್ಯದ್ ಜಲಾಲುದ್ದೀನ್ ಬುಖಾರಿ ತಂಙಳ್ ಹೇಳಿದರು.
ಮಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಮಾಹಿತಿ ನೀಡಿದ ಅವರು, ಜೂ. 19 ಗುರುವಾರ ಸಂಜೆ 4.30ಕ್ಕೆ ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಅಧ್ಯಕ್ಷ ಸಯ್ಯದ್ ಆಟಕೋಯ ತಂಬಳ್ ಕುಂಬೋಲ್ ಉದ್ಘಾಟಿಸಲಿದ್ದು, ಕರ್ನಾಟಕ ಸುನ್ನೀ ಉಲಮಾ ಒಕ್ಕೂಟದ ರಾಜ್ಯಾಧ್ಯಕ್ಷ ಖಾಝಿ ಝನುಲ್ ಉಲಮಾ ಎಂ. ಅಬ್ದುಲ್ ಹಮೀದ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸುವರು. ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಮಂಜೇಶ್ವರ ಶಾಸಕ ಎಂ.ಕೆ.ಎಂ. ಅಪ್ರಫ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ರಾತ್ರಿ 8ಕ್ಕೆ ಸಂಸ್ಥೆಯ ಮುಖ್ಯಸ್ಥ ಸಯ್ಯದ್ ಶಹೀರ್ ಅಲ್ ಬುಖಾರಿ ನೇತೃತ್ವದಲ್ಲಿ ನಡೆಯುವ ಸ್ವಲಾತ್ ಮಜಿಸ್ನಲ್ಲಿ ಸಯ್ಯದ್ ಜಲಾಲುದ್ದೀನ್ ಸಅದಿ, ಸ್ವಾಲಿಹ್ ಸಅದಿ ತಳಿಪ್ಪರಂಬ, ಹಂಝ ಕೋಯ ಬಾಖವಿ ಭಾಗವಹಿಸುವರು ಎಂದರು.
ಜೂ. 20 ಶುಕ್ರವಾರ ಮಧ್ಯಾಹ್ನದಿಂದ ಆರಂಭಗೊಳ್ಳುವ ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ಸಯ್ಯದ್ ಬಾಯಾರ್ ತಂಙಳ್, ಸಯ್ಯದ್ ಕಲ್ಲಕಟ್ಟ ತಂಙಳ್, ಸಯ್ಯದ್ ಪಿ ಎಸ್ ಎ ತಂಙಳ್ ಬಾಹಸನ್ ನೇತೃತ್ವ ವಹಿಸುವರು.
ಜೂ 21 ಶನಿವಾರ 2 ಗಂಟೆಗೆ ಸಾಮಾಜಿಕ ಸಮಾವೇಶ ಮತ್ತು 7 ಗಂಟೆಗೆ ಸನದುದಾನ ಸಮಾರಂಭ ನಡೆಯಲಿದೆ. ಸಮಸ್ತ ಉಲಮಾ ಒಕ್ಕೂಟದ ಅಧ್ಯಕ್ಷ ರಈಸುಲ್ ಉಲಮಾ ಸುಲೈಮಾನ್ ಮುಸ್ಲಿಯಾರ್ ಪದವಿ ಪ್ರದಾನ ಮಾಡಲಿದ್ದು, ಭಾರತದ ಗ್ರಾಂಡ್ ಮುಫ್ರಿ ಸುಲ್ತಾನುಲ್ ಉಲಮಾ ಎ.ಪಿ.ಅಬೂಬಕರ್ ಮುಸ್ಲಿಯಾರ್ ಘಟಿಕೋತ್ಸವ ಭಾಷಣ ಮಾಡುವರು. ಇದೇ ವೇಳೆ ಸಯ್ಯದ್ ಪೊಸೋಟ್ ತಂಬಳ್ ಅವರು ಕರ್ನಾಟಕದ ಹಾವೇರಿಯಲ್ಲಿ ಸ್ಥಾಪಿಸಿದ ಮುಈನುಸ್ಸುನ್ನ ವಿದ್ಯಾಸಂಸ್ಥೆಯ ವತಿಯಿಂದ ನೀಡಲಾಗುವ ಸಾಧಕ ಪ್ರಶಸ್ತಿಯನ್ನು ಡಾ. ಫಾಝಿಲ್ ರು ಹುತ್ ಕಾವಲಕಟ್ಟೆ ಅವರಿಗೆ ಪ್ರದಾನ ಮಾಡಲಾಗುವುದು ಎಂದರು.
ಜೂ 22 ರವಿವಾರ ಪೂರ್ವಾಹ್ನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಅನ್ನದಾನದೊಂದಿಗೆ ಉರೂಸ್ ಕಾರ್ಯಕ್ರಮ ಸಮಾರೋಪಗೊಳ್ಳಲಿದೆ.
ಕೇರಳದ ಕಲ್ಲಿಕೋಟೆಯಿಂದ ಗಡಿನಾಡು ಹೊಸಂಗಡಿ ಬಳಿ ಪೊಸೋಟ್ ಎಂಬಲ್ಲಿಗೆ ಧರ್ಮಗುರುವಾಗಿ ಆಗಮಿಸಿದ್ದ ಪ್ರವಾದಿ ಕುಟುಂಬದ ಅನುಗ್ರಹೀತ ಪೌತ್ರ ಸಯ್ಯದ್ ಪೊಸೋಟ್ ತಂಙಳ್ ಅವರು ಕ್ರಿಶ. 2000ದಲ್ಲಿ ಮಳ್ ಹರ್ ವಿದ್ಯಾಸಂಸ್ಥೆಯನ್ನು ಆರಂಭಿಸಿದ್ದರು. ಕೇವಲ ಹತ್ತು ವಿದ್ಯಾರ್ಥಿಗಳಿಂದ ಆರಂಭಗೊಂಡ ಸಂಸ್ಥೆಯು ಇಂದು 25 ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿ ಕೇರಳ ಅಲ್ಲದೆ, ಕರ್ನಾಟಕದ ಬಳ್ಳಾರಿ, ಕೋಟೆಕಾರ್, ಕಿನ್ನಿಗೋಳಿ, ಮಹಾರಾಷ್ಟ್ರದ ರತ್ನಗಿರಿ ಸೇರಿದಂತೆ 15 ಪ್ರದೇಶಗಳಲ್ಲಿ 35ರಷ್ಟು ವಿವಿಧ ಧಾರ್ಮಿಕ-ಲೌಕಿಕ ಶಿಕ್ಷಣಾಲಯಗಳು, ಮಹಿಳಾ ಕಾಲೇಜು, ವೃತ್ತಿ ತರಬೇತಿ ಸೇರಿದಂತೆ ಬಹುಮುಖ ವಿದ್ಯಾ ಕೇಂದ್ರವಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದೆ. ಕನ್ನಡ ನಾಡಿಗೂ ತಮ್ಮ ಸೇವೆ ತಲುಪಬೇಕೆಂಬ ಉದ್ದೇಶದಿಂದ ಗಡಿನಾಡಿನಲ್ಲಿ ವಿದ್ಯಾಸಂಸ್ಥೆ ಆರಂಭಿಸಿದ ಸಯ್ಯದ್ ಪೊಸೋಟ್ ತಂಙಳ್ ಆಧ್ಯಾತ್ಮಿಕ ಚಿಕಿತ್ಸೆ, ಅಪಾರ ಪಾಂಡಿತ್ಯ, ವಿವಿಧ ಮೊಹಲ್ಲಾಗಳ ಖಾಝಿ ಪದವಿ, ವಿವಿಧ ಜನಸೇವಾ ಚಟುವಟಿಕೆಗಳ ಮೂಲಕ ನಾಡಿನ ಉದ್ದಗಲಕ್ಕೂ ಜನಾನುರಾಗಿಯಾಗಿದ್ದಾರೆ. ಮಹಾತ್ಮರು ಕೀರ್ತಿಶೇಷರಾಗಿ ದಶಕ ತುಂಬಿದ ಹಿನ್ನೆಲೆಯಲ್ಲಿ ಹತ್ತನೇ ಉರೂಸ್ ಕಾರ್ಯಕ್ರಮವನ್ನು ವಿವಿಧ ಜನಪರ ಕಾರ್ಯಕ್ರಮಗಳ ಮೂಲಕ ನಡೆಸಲಾಗುತ್ತಿದೆ ಎಂದು ಸಯ್ಯದ್ ಜಲಾಲುದ್ದೀನ್ ಬುಖಾರಿ ತಂಙಳ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಎಂ.ಅಬೂಬಕರ್ ಸಿದ್ದೀಕ್ (ಕಾರ್ಯಾಧ್ಯಕ್ಷರು, ಮಳ್ಹರ್ ಕರ್ನಾಟಕ ಪ್ರಚಾರ ಸಮಿತಿ), ಹಾಜಿ ಮುಹಮ್ಮದ್ ಸಾಗರ (ಅಧ್ಯಕ್ಷರು, ಮಳ್ಹರ್ ಕರ್ನಾಟಕ ಪ್ರಚಾರ ಸಮಿತಿ), ಅಡ್ವಕೇಟ್ ಹಸನ್ ಕುಂಟೆ (ಮ್ಯಾನೇಜರ್, ಮಳ್ಹರ್ ವಿದ್ಯಾಸಂಸ್ಥೆ) , ಅಬೂಸ್ವಾಲಿಹ್ ಗೇರುಕಟ್ಟೆ (ಕಾರ್ಯದರ್ಶಿ, ಮಳ್ಹರ್ ಕರ್ನಾಟಕ ಪ್ರಚಾರ ಸಮಿತಿ), ರಹೀಂ ಸಅದಿ ಕತಾರ್ (ಜಿಲ್ಲಾ ಕಾರ್ಯದರ್ಶಿ, ಕರ್ನಾಟಕ ಮುಸ್ಲಿಂ ಜಮಾಅತ್) ಹಾಗೂ ಅಬ್ದುಲ್ ರಶೀದ್ ಮಡಂತ್ಯಾರು (ರಾಜ್ಯ ಕಾರ್ಯದರ್ಶಿ, ಎಸ್.ಎಸ್.ಎಫ್) ಉಪಸ್ಥಿತರಿದ್ದರು.