ಕಂಟೈನರ್‌ ಹಡಗಿನಲ್ಲಿದ್ದ ನಾಲ್ವರಿಗಾಗಿ ಶೋಧ: ನಾಲ್ವರ ಸ್ಥಿತಿ ಗಂಭೀರ

ಮಂಗಳೂರು: ಕಣ್ಣೂರು ಕರಾವಳಿಯಲ್ಲಿ ಬೆಂಕಿ ಹೊತ್ತಿಕೊಂಡ ಸಿಂಗಾಪುರ ಧ್ವಜವನ್ನು ಹೊಂದಿದ್ದ WANHAI 503 ಹಡಗನ್ನು ಆವರಿಸಿದ ಬೆಂಕಿಯು ಹಡಗಿನಾದ್ಯಂತ ಇನ್ನೂ ಉರಿಯುತ್ತಲೇ ಇದೆ. ಅಗ್ನಿಶಾಮಕ ವಲಯದ ಪಕ್ಕದಲ್ಲಿರುವ ಟ್ಯಾಂಕ್‌ಗಳಲ್ಲಿ ಸುಮಾರು 2000 ಟನ್ ಇಂಧನ ತೈಲ ಮತ್ತು 240 ಟನ್ ಡೀಸೆಲ್ ತೈಲ ಇರುವುದು ಆತಂಕಕ್ಕೆ ಕಾರಣವಾಗಿದ್ದು, ಎಲ್ಲೆಡೆ ಹೈ ಅಲರ್ಟ್‌ ಘೋಷಿಸಲಾಗಿದೆ.

ಈ ಮಧ್ಯೆ ಮಂಗಳೂರಿನಲ್ಲಿ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು ಚೇತರಿಸಿಕೊಳ್ಳುತ್ತಿದ್ದು, ಈ ಪೈಕಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಹಡಗಿನಲ್ಲಿ ಸುಮಾರು 22 ಸಿಬ್ಬಂದಿ ಇದ್ದು, ಪೈಕಿ ನಾಲ್ವರು ಸಿಬ್ಬಂದಿ ಇನ್ನೂ ಪತ್ತೆಯಾಗಿಲ್ಲ. ಹೀಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.

ತೈವಾನ್​ನ ಸೆಕೆಂಡ್ ಇಂಜಿನಿಯರ್ ಯು ಬೊ ಫಾಂಗ್, ಮ್ಯಾನ್ಮರ್​ನ ಕಾರ್ಪೆಂಟರ್ ಸಾನ್ ವಿನ್, ಇಂಡೋನೇಷ್ಯಾದ ಎಬಿ ಜಾನಲ್ ಅಹಿದಿನ್‌ ಮತ್ತು ತೈವಾನ್​ನ ಮೋಟರ್ ಮ್ಯಾನ್ ಸಿಹ್ ಚಾಯ್ ವೆನ್ ನಾಪತ್ತೆಯಾದವರು ಎಂದು ಹಡಗು ನಿರ್ದೇಶನಾಲಯದ ಮೂಲಗಳು ಮಾಹಿತಿ ನೀಡಿದೆ.
ಗಂಭೀರ ಗಾಯಗೊಂಡಿದ್ದು, ಚೀನಾ ಮೂಲದ ನಂ 1 ಆಯ್ಲಿರ್ ಲೂಯನ್ಲಿ ಮತ್ತು ಇಂಡೋನೇಷ್ಯಾದ ಫಿಟ್ಟರ್ ಸೋನಿಟೂರ್ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಯಾವುದೇ ಅಪಾಯವಿಲ್ಲದೆ ಪಾರಾದ ಸಿಬ್ಬಂದಿ ಮಂಗಳೂರಿನ ಹೊಟೇಲ್​ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಗಾಯಗೊಂಡವರಿಗೆ ಮಂಗಳೂರಿನಲ್ಲಿ ಚಿಕಿತ್ಸೆ 22 ಜನ ಸಿಬ್ಬಂದಿ ಇದ್ದ ಎಮ್.ವಿ ವಾನ್ ಹೈ 503 ಹಡಗು ಜೂನ್ 7 ರಂದು ಶ್ರೀಲಂಕಾದ ಕೊಲಂಬೊದಿಂದ ಮಹಾರಾಷ್ಟ್ರದ ನವಾ ಶೇವಾಕ್ಕೆ ಹೊರಟಿತ್ತು. ಜೂನ್ 10 ರ ಮುಂಜಾನೆ ತಲುಪಬೇಕಿದ್ದ ಹಡಗು ಜೂನ್ 8 ರ ಮಧ್ಯಾಹ್ನದ ವೇಳೆಗೆ ಕೇರಳದ ಬೇಪೂರ್ ಕಡಲ ಕಿನಾರೆಯಿಂದ 78 ನಾಟಿಕಲ್ ಮೈಲಿ ದೂರದಲ್ಲಿ ಅಗ್ನಿ ಅವಘಡಕ್ಕೆ ಸಿಲುಕಿತ್ತು.

ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA) ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ಬೆಳಿಗ್ಗೆಯಿಂದ ವಸತಿ ಪ್ರದೇಶದ ಕಡೆಗೂ ಜ್ವಾಲೆಗಳು ಹರಡಿವೆ. ಕಂಟೇನರ್‌ನ ಅವಶೇಷಗಳು ಕೋಯಿಕ್ಕೋಡ್ ಮತ್ತು ಕೊಚ್ಚಿ ನಡುವಿನ ಕರಾವಳಿಯ ಕಡೆಗೆ ಚಲಿಸಬಹುದು; ಸಂಭಾವ್ಯ ತೈಲ ಸೋರಿಕೆಯ ಬಗ್ಗೆ INCOIS ಎಚ್ಚರಿಸಿದೆ. ಉರಿಯುತ್ತಲೇ ಇರುವ ಕಂಟೈನರ್‌ ಹಡಗಿನಲ್ಲಿರುವ ಇಂಧನ ತೈಲಗಳ ಮೇಲೆ ಬೆಂಕಿ ತಗುಲಿದರೆ ಅದರಲ್ಲಿರುವ ರಾಸಾಯನಿಕಗಳೂ ಸುಟ್ಟು ಭಾರೀ ಅನಾಹುತ ಸಂಭವಿಸುವ ಭೀತಿ ಉಂಟಾಗಿದೆ.

error: Content is protected !!