ಅನ್ನ ಭಾಗ್ಯದ ಅಕ್ಕಿಯನ್ನು ಖರೀದಿಸಿ ದಾಸ್ತಾನು ಮಾಡಿಟ್ಟಿದ್ದ ವ್ಯಕ್ತಿಗೆ ಬಂಧನ ಭಾಗ್ಯ!

ಉಡುಪಿ: ಅನ್ನಭಾಗ್ಯದ ಅಕ್ಕಿಯನ್ನು ಸಾರ್ವಜನಿಕರಿಂದ ಖರೀದಿಸಿ ಜನರಲ್‌ ಸ್ಟೋರ್‌ನಲ್ಲಿ ದಾಸ್ತಾನು ಮಾಡಿಟ್ಟಿದ್ದ ಬೊಮ್ಮರಬೆಟ್ಟುವಿನ ವಾಸುದೇವ ಪ್ರಭು (56) ಎಂಬವರನ್ನು ಪೊಲೀಸರು ಬಂಧಿಸಿದ್ದು, 1,27,880 ರೂ. ಮೌಲ್ಯದ 55 ಕ್ವಿಂಟಾಲ್‌ 60 ಕೆ.ಜಿ. ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.

ಜೂ. 10ರಂದು ಹಿರಿಯಡಕ ಠಾಣಾ ವ್ಯಾಪ್ತಿಯ ಬೊಮ್ಮರಬೆಟ್ಟು ಗ್ರಾಮದ ಮಾಂಬೆಟ್ಟು ಎಂಬಲ್ಲಿರುವ ಜನರಲ್‌ ಸ್ಟೋರ್‌ನಲ್ಲಿ ಸರಕಾರದ ಉಚಿತ ಅನ್ನ ಬಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಸಾರ್ವಜನಿಕರಿಂದ ಖರೀದಿಸಿ ದಾಸ್ತಾನು ಇಟ್ಟಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಉಡುಪಿಯ ಆಹಾರ ನಿರೀಕ್ಷಕರು ಮತ್ತು ಹಿರಿಯಡಕ ಠಾಣಾ ಪಿಎಸ್‌ಐ ಪುನಿತ್‌ ಕುಮಾರ್‌ ಬಿ.ಇ. ಹಾಗೂ ಸಿಬಂದಿ ಆದರ್ಶ, ಕಾರ್ತಿಕ್‌ ಅವರೊಂದಿಗೆ ಸ್ಥಳಕ್ಕೆ ದಾಳಿ ಮಾಡಲಾಯಿತು.

ಈ ವೇಳೆ ಅಂಗಡಿಯ ಸಿಟೌಟ್‌ನಲ್ಲಿ ಒಟ್ಟು 131 ಪ್ಲಾಸ್ಟಿಕ್‌ ಚೀಲಗಳಲ್ಲಿ 1,27,880 ರೂ. ಮೌಲ್ಯದ ಒಟ್ಟು 55 ಕ್ವಿಂಟಾಲ್‌ 60 ಕೆ.ಜಿ. ಅಕ್ಕಿ ದಾಸ್ತಾನು ಮಾಡಲಾಗಿತ್ತು. ಇದನ್ನು ಪರಿಶೀಲಿಸಿದಾಗ ಅನ್ನಭಾಗ್ಯ ಯೋಜನೆಯಡಿಯಲ್ಲಿ ವಿತರಿಸಲಾಗಿರುವ ಅಕ್ಕಿ ಎಂದು ದೃಢಪಟ್ಟಿದೆ. ಅಕ್ಕಿಯನ್ನು ಆಹಾರ ನಿರೀಕ್ಷಕರ ಸಮಕ್ಷಮ ಸ್ವಾಧೀನಪಡಿಸಿಕೊಳ್ಳಲಾಯಿತು. ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ದಕ್ಷಿಣ ಕನ್ನಡ ಹಾಗೂ ಉಡುಪಿಯ ಜನರು ಹೆಚ್ಚಾಗಿ ಕುಚಲಕ್ಕಿಯ ಊಟ ಮಾಡುತ್ತಾರೆ. ಆದರೆ ರೇಷನ್‌ನಲ್ಲಿ ಸಿಗುವ ಬೆಳ್ತಿಗೆ ಅಕ್ಕಿಯನ್ನು ದೋಸೆ, ರೊಟ್ಟಿ ಮಾಡಿಕೊಂಡು, ಉಳಿದ ಹೆಚ್ಚುವರಿ ಬೆಳ್ತಿಗೆ ಅಕ್ಕಿಯನ್ನು ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಇದೀಗ ಈ ಘಟನೆಯ ಬಳಿಕ ಕಾಳಸಂತೆಯಲ್ಲಿ ಅಕ್ಕಿ ವ್ಯಾಪಾರ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ತುಳುನಾಡು ಭಾಗದ ಜನರಿಗೆ ಕುಚಲಕ್ಕಿಯನ್ನು ಪೂರೈಸಲಾಗುವುದು ಎಂದು ಕಳೆದ ವರ್ಷ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದರು. ಆದರೆ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಆದರೆ ಬಿಜೆಪಿ ಸರ್ಕಾರ ಇದೀಗ ವಿರೋಧ ಪಕ್ಷದಲ್ಲಿರುವುದರಿಂದ ಕುಚಲಕ್ಕಿ ಪ್ರಸ್ತಾಪ ನೆನೆಗುದಿಗೆ ಬಿದ್ದಿದೆ. ಅಲ್ಲದೆ ಪ್ರಸ್ತುತ ಆಡಳಿತದಲ್ಲಿರುವ ಕಾಂಗ್ರೆಸ್‌ ಸರ್ಕಾರ ಕುಚಲಕ್ಕಿ ವಿತರಣೆಯ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ.

error: Content is protected !!