ಮಂಗಳೂರು: ತುರ್ತು ಸಂಧರ್ಭಗಳಲ್ಲಿ ಸಾರ್ವಜನಿಕ ಸಂಕಷ್ಟಕ್ಕೆ ಸ್ಪಂದಿಸಲು ʻಒಂದೇ ಭಾರತ ಒಂದೇ ತುರ್ತು ಕರೆ-112′ ಸಹಾಯವಾಣಿ ಅಸ್ತಿತ್ವದಲ್ಲಿದೆ. ರಾಜ್ಯದಲ್ಲೂ ಅಗತ್ಯ ತುರ್ತು ಸ್ಪಂದನಕ್ಕೆ ಈ ಸಹಾಯವಾಣಿ ಬಳಕೆಯಲ್ಲಿದ್ದು, ನಗರದ ಜನರು ಕೂಡಾ ತುರ್ತು ಸಂದರ್ಭಗಳಲ್ಲಿ ಪೊಲೀಸ್, ಅಗ್ನಿಶಾಮಕ, ವಿಪತ್ತು ನಿರ್ವಹಣೆ ಎಂದು ಬೇರೆ ಬೇರೆ ಸಹಾಯವಾಣಿಗೆ ಕರೆ ಮಾಡುವ ಅಗತ್ಯವಿಲ್ಲ. ಕೇವಲ 112 ಸಂಖ್ಯೆಗೆ ಕರೆ ಮಾಡಿದರೆ ತುರ್ತು ಸೇವೆ ಸಾರ್ವಜನಿಕರಿಗೆ ಲಭಿಸಲಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಾರ್ವಜನಿಕರು ಅಪಘಾತ, ಕೊಲೆ, ದರೋಡೆ, ಕಳ್ಳತನ, ಸುಲಿಗೆ, ಸರಗಳ್ಳತನ, ಜಗಳ, ಮಹಿಳಾ, ಮಕ್ಕಳ, ಹಿರಿಯ ನಾಗರಿಕರ, ಸಂಶಯವಿರುವ ವಾಹನ ಅಥವಾ ವ್ಯಕ್ತಿಗಳು ಇದ್ದಲ್ಲಿ ಹಾಗೂ ಇನ್ನಿತರ ಎಲ್ಲಾ ರೀತಿಯ ತುರ್ತು ಸ್ಪಂದನ ಸಹಾಯ ವ್ಯವಸ್ಥೆಗೆ, ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ನೀಡುವ ಮೊದಲು ಡಯಲ್ 112 ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದಾಗಿದೆ. ಈ ವ್ಯವಸ್ಥೆಯಲ್ಲಿ ನಿಮ್ಮ ಕರೆಯನ್ನು ಮೊದಲ ಆದ್ಯತೆ ಪರಿಗಣಿಸಿ ಹತ್ತಿರವಿರುವ ಪೊಲೀಸ್ ವಾಹನವನ್ನು ನೀವು ಇರುವ ಸ್ಥಳಕ್ಕೆ ಕಳುಹಿಸಿ ನಿಮ್ಮ ಸಮಸ್ಯೆಯನ್ನು ಬಗೆಹರಿಸುವುದಾಗಿದೆ.
ಪೊಲೀಸ್ ನೆರವು / ಅಗ್ನಿ ಶಾಮಕ ದಳದ ನೆರವು / ವಿಪತ್ತು ನೆರವು ಸೇರಿದಂತೆ ಯಾವುದೇ ತುರ್ತು ಸಂಧರ್ಭದಲ್ಲಿ ನೂತನವಾದ 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ಎಮೆರ್ಜೆನ್ಸಿ ರೆಸ್ಪಾನ್ಸ್ ಸಪೋರ್ಟ್ ಸಿಸ್ಟಮ್ ವ್ಯವಸ್ಥೆಯಡಿ ನಗರದ ಎಲ್ಲಿಂದಲೇ ಕರೆ ಬಂದರು ತುರ್ತಾಗಿ ಅಲ್ಲಿಗೆ ತಲುಪಿ ರಕ್ಷಣೆ ಒದಗಿಸಲಾಗುತ್ತದೆ ಎಂದವರು ಮಾಹಿತಿ ನೀಡಿದ್ದಾರೆ.
ಸಾರ್ವಜನಿಕ ತುರ್ತು ಸ್ಪಂದನಾ ಸಹಾಯ ವ್ಯವಸ್ಥೆಗಾಗಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಒಟ್ಟು 28 ಪೆಟ್ರೋಲಿಂಗ್ ವಾಹನಗಳನ್ನು ಈ ಕರ್ತವ್ಯಕ್ಕೆ ಬಳಸಲಾಗುತ್ತಿದ್ದು, ದಿನದ 24X7 ಕಾರ್ಯ ನಿರ್ವಹಿಸುತ್ತಿದೆ . ಇದರಲ್ಲಿ 21 ಹೊಯ್ಸಳ ಮತ್ತು 7 ಹೈವೇ ಪೆಟ್ರೋಲ್ ವಾಹನಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಸಾರ್ವಜನಿಕರು ಈ ವ್ಯವಸ್ಥೆಯನ್ನು ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಪ್ರಕಟನೆ ತಿಳಿಸಿದೆ.