ಕೊಣಾಜೆ : ದೇರಳಕಟ್ಟೆಯ ಕಣಚೂರು ಆಸ್ಪತ್ರೆಗೆ ಬಾಂಬ್ ಬೆದರಿಕೆ ಕರೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ವೈದ್ಯಕೀಯ ವಿದ್ಯಾರ್ಥಿನಿಯನ್ನು ವಶಕ್ಕೆ ಪಡೆದಿದ್ದಾರೆ. ಸೆಮಿನಾರ್ನಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ವಿದ್ಯಾರ್ಥಿನಿ ತಾನೇ ಬೆದರಿಕೆ ಹಾಕಿ, ಕೊನೆಗೆ ತಾನೇ ಪೊಲೀಸರಿಗೆ ದೂರು ನೀಡಿ, ಇದೀಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ.
ಜೂನ್ 4 ರಂದು ಬೆಳಿಗ್ಗೆ 8. 45ರ ವೇಳೆಗೆ ಕಣಚೂರು ಆಸ್ಪತ್ರೆಗೆ ಬಂದ ಕರೆಯಲ್ಲಿ, 11 ಗಂಟೆಯೊಳಗಾಗಿ ಆಸ್ಪತ್ರೆಯನ್ನು ಖಾಲಿ ಮಾಡಬೇಕೆಂದು 5 ಬಾರಿ ಕರೆ ಬೆದರಿಕೆ ಕರೆ ಬಂದಿತ್ತು. ಈ ಹಿನ್ನೆಲೆಯಲ್ಲಿ 25 ರಿಂದ 30 ಮಂದಿ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ, ಬಾಂಬ್ ನಿಷ್ಕ್ರಿಯ ತಂಡ ಹಾಗೂ ಶ್ವಾನ ದಳ ತಂಡದೊಂದಿಗೆ ಆಸ್ಪತ್ರೆಯ ಸಂಪೂರ್ಣ ಕಟ್ಟಡ, ಆಸ್ಪತ್ರೆಯ ವಾಹನ ಪಾರ್ಕಿಂಗ್ ಸ್ಥಳ ಹಾಗೂ ಆಸ್ಪತ್ರೆಯ ಸುತ್ತಮುತ್ತಲಿನ ಪರಿಸರವನ್ನು ನಿರಂತರವಾಗಿ 10 ಗಂಟೆಗಳ ಕಾಲ ಜಾಲಾಡಿದರೂ ಯಾವುದೇ ಸ್ಫೋಟಕ ಪತ್ತೆಯಾಗಿರಲಿಲ್ಲ. ಹಾಗಾಗಿ ಇದೊಂದು ಹುಸಿ ಬೆದರಿಕೆ ಆಗಿರಬಹುದೆಂದು ಪೊಲೀಸರು ಅನುಮಾನಿಸಿದ್ದಾರೆ.
ಬಾಂಬ್ ಬೆದರಿಕೆ ಬಂದಿದೆ ಎಂದು ಔಹಾರಿ, ಕೊನೆಗೆ ತಾನೇ ದೂರು ನೀಡಿದ್ದ ವಿದ್ಯಾರ್ಥಿನಿಯ ನಡವಳಿಕೆ ಗಮನಿಸಿ ಉಳ್ಳಾಲ ಪೊಲೀಸರು ವಿಚಾರಣೆ ನಡೆಸಿದಾಗ ಈಕೆಯೇ ಬೆದರಿಕೆ ಹಾಕಿರುವುದು ಬಯಲಾಗಿದೆ. ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ ಮೋನಿಕಾ ಅಂದು ಸೆಮಿನಾರ್ ನೀಡಬೇಕಾಗಿತ್ತು. ಅದರದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ತಾನೇ ಕರೆ ಮಾಡಿ ಬಾಂಬ್ ಬೆದರಿಕೆ ಕರೆ ಬಂದಿದೆ ಎಂದು ದೂರು ನೀಡಿದ್ದಳು. ಆಕೆಯ ಮೊಬೈಲ್ ವಶಕ್ಕೆ ಪಡೆದು ದಾಖಲೆಗಳನ್ನು ಪರಿಶೀಲಿಸಿ, ತನಿಖೆ ನಡೆಸಲಾಗುತ್ತಿದೆ ಎಂದು ಉಳ್ಳಾಲ ಪೊಲೀಸರು ತಿಳಿಸಿದ್ದಾರೆ. ಈಕೆಯನ್ನು ಕೌನ್ಸಿಲಿಂಗ್ ನಡೆಸಲು ಪೊಲೀಸರು ಮುಂದಾಗಿದ್ದಾರೆ.