ಸುರತ್ಕಲ್: ಶಾಲಾ ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಇಲ್ಲಿ ಕಸ ಹಾಕಬೇಡಿ ಎಂದು ವಿನಮ್ರವಾಗಿ ವಿನಂತಿಸಿ ಸೂಚನಾ ಫಲಕ ಹಾಕಿದರೂ ಕೆಲವು ಅವಿವೇಕಿ ಮನುಷ್ಯರು ಅಲ್ಲೇ ಕಸ ಹಾಕಿ ಮಕ್ಕಳ ಆರೋಗ್ಯವನ್ನು ಕೆಡಿಸುತ್ತಿದ್ದಾರೆ. ಇಂತಹಾ ಅವಿವೇಕಿಗಳಿಗೆ ಯಾವ ಶಿಕ್ಷೆ ಕೊಟ್ಟರೂ ಕಡಿಮೆಯೇ ಎಂದು ಪ್ರಜ್ಞಾವಂತ ನಾಗರಿಕರು ಸಿಟ್ಟಾಗುತ್ತಿದ್ದಾರೆ.
ಇದು ಸುರತ್ಕಲ್ ಕುಳಾಯಿಯ ಮೀನುಗಾರಿಕಾ ಶಾಲೆಯ ವಠಾರದಲ್ಲಿ ಕಂಡು ಬಂದ ದೃಶ್ಯ. ಇಲ್ಲಿ ನೂರಾರು ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳಿದ್ದು ಇಲ್ಲಿ ಕಸ ಹಾಕದಂತೆ ಬೋರ್ಡ್ ಹಾಕಲಾಗಿದೆ.
ಆದರೆ ಇದಕ್ಕೆ ಕ್ಯಾರೇ ಅನ್ನದ ಕೆಲವು ಅವಿವೇಕಿಗಳು ಇಲ್ಲೇ ಕಸ ತಂದು ಹಾಕುತ್ತಿದ್ದಾರೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಾರಂಭಿಸಿದೆ. ಈ ಕಸಗಳು ಇದೀಗ ಮಳೆ ನೀರಿನಿಂದ ಕೊಳೆಯಲಾರಂಭಿಸಿದ್ದು, ಡೆಂಗ್ಯೂ, ಮಲೇರಿಯಾದಂತಹಾ ಸಾಂಕ್ರಾಮಿಕ ರೋಗಗಳ ಭೀತಿ ಉಂಟಾಗಿದೆ.
ಸ್ಥಳೀಯ ಪಂಚಾಯತ್ನವರು ಕಸ ಎಸೆದವರಿಗೆ ಭಾರೀ ಪ್ರಮಾಣದ ದಂಡ ವಿಧಿಸುವುದಲ್ಲದೆ ಕಸವನ್ನು ಅವರಿಂದಲೇ ಹೆಕ್ಕಿಸಬೇಕು ಎಂದು ಪ್ರಜ್ಞಾವಂರು ಆಗ್ರಹಿಸಿದ್ದಾರೆ.