ಕಾರಿನ ಮೇಲೆ ಟಿಪ್ಪರ್‌ ಮಗುಚಿ ಬಿದ್ದು 9 ಮಂದಿ ಅಪ್ಪಚ್ಚಿ

ಭೋಪಾಲ್: ಕಾರಿನ ಮೇಲೆ ಸಿಮೆಂಟ್ ಸಾಗಿಸುತ್ತಿದ್ದ ಟಿಪ್ಪರ್ ಮಗುಚಿ ಬಿದ್ದ ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬದ 9 ಮಂದಿ ಅಪ್ಪಚ್ಚಿಯಾಗಿ ಮೃತಪಟ್ಟಿರುವ ದಾರುಣ ಘಟನೆ ಮಧ್ಯಪ್ರದೇಶದ ಝಬುವಾ ಜಿಲ್ಲೆಯಲ್ಲಿ ನಡೆದಿದೆ.

ಮೇಘನಗರದ ಶಿವಗಢ ಮಹುದಾ ಗ್ರಾಮದ ನಿವಾಸಿಗಳಾದ ಮುಖೇಶ್ (40), ಸಾವ್ಲಿ (35), ವಿನೋದ್ (16), ಪಾಯಲ್ (12), ಮಾಧಿ (38), ವಿಜಯ್ ಭರು ಬಮಾನಿಯಾ (14), ಕಾಂತಾ (14), ರಾಗಿಣಿ (9), ಮತ್ತು ಅಕಾಲಿ (35) ಮೃತರೆಂದು ಗುರುತಿಸಲಾಗಿದೆ. ಪಾಯಲ್ ಸೋಮ್ಲಾ (19) ಮತ್ತು ಆಶು (5) ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಗಿದೆ.

ಮೇಘನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸಂಜೆಲಿ ರೈಲ್ವೇ ನಿಲ್ದಾಣದ ಬಳಿ ನಸುಕಿನ ಜಾವ 2:30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಮುಹುದಾ ಗ್ರಾಮದ ಕುಟುಂಬವು ಮದುವೆ ಕಾರ್ಯಕ್ರಮದಿಂದ ಹಿಂದಿರುಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಂಜೆಲಿ ರೈಲ್ವೆ ಕ್ರಾಸಿಂಗ್ ಬಳಿ ತಾತ್ಕಾಲಿಕ ರಸ್ತೆಯ ಮೂಲಕ ನಿರ್ಮಾಣ ಹಂತದಲ್ಲಿರುವ ರೈಲು ಮೇಲ್ಸೇತುವೆಗೆ ಕಡೆ ತಿರುಗುತ್ತಿದ್ದಾಗ ಟಿಪ್ಪರ್ ನಿಯಂತ್ರಣ ತಪ್ಪಿ ಕಾರಿನ ಮೇಲೆ ಬಿದ್ದಿದೆ. ಪರಿಣಾಮ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ 9 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರು ಗಂಭೀರ ಗಾಯಗೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಟಿಪ್ಪರ್ ಚಾಲಕ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ. ಮೇಘನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!