ಸಿದ್ದಾಪುರ: ಕುಂದಾಪುರ ಸಿದ್ದಾಪುರದಲ್ಲಿ ಕಾಡಾನೆಯೊಂದು ಶಾಲಾ ಮಕ್ಕಳಿಗೆ ರಜೆ ಕೊಡಿಸಿದ್ದಲ್ಲದೆ ವಾರದ ಸಂತೆಯನ್ನೇ ರದ್ದು ಮಾಡಿದೆ. ಹೌದು ಇಂದು ಮುಂಜಾನೆ ಸಿದ್ದಾಪುರದ ಹೊಸಂಗಡಿ ಭಾಗದಲ್ಲಿ ಗ್ರಾಂಡ್ ಆಗಿ ಎಂಟ್ರಿ ಕೊಟ್ಟ ಒಂಟಿ ಸಲಗವನ್ನು ನೋಡಿ ಬೆಚ್ಚಿಬಿದ್ದ ಗ್ರಾಮಸ್ಥರು ವಾರದ ಸಂತೆಯನ್ನು ರದ್ದು ಮಾಡಿದಲ್ಲದೆ, ಶಾಲಾ ಆಡಳಿತ ಮಂಡಳಿ ಮಕ್ಕಳಿಗೆ ರಜೆ ಕೊಟ್ಟಿದೆ.
ಆಗುಂಬೆಯಿಂದ 30 ಕಿ.ಮೀ. ದೂರದಲ್ಲಿರುವ ಪ್ರದೇಶ ಇದಾಗಿದ್ದು ಸತತ 2 ದಿನಗಳಿಂದ ಇಲ್ಲಿ ಆನೆ ಸಂಚರಿಸುತ್ತಿದೆ. ಆನೆಯನ್ನು ಓಡಿಸಲು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಬೀಡು ಬಿಟ್ಟಿದ್ದು, ಆದರೆ ಕಾಡಾನೆ ಇವರ ಯಾವುದೇ ಪುಕಾರುಗಳಿಗೆ ಸೊಪ್ಪು ಹಾಕದೆ ಎಂದಿನಂತೆ ಸಿದ್ದಾಪುರ ಎಲ್ಲ ನನ್ನದೇ ಎನ್ನುವಂತೆ ಸುತ್ತು ಹೊಡೆಯುತ್ತಿದೆ. ಕಾಡಾನೆಯನ್ನು ಹಿಡಿಯಲುಇ ಲೋಕಲ್ ಕುಮ್ಕಿ ಆನೆಗಳನ್ನಿ ಕರೆಸಲು ಸಿದ್ಧತೆ ನಡೆಸಲಾಗಿದೆ.
ಗ್ರಾಮಸ್ಥರು ಕಾಡಾನೆಯ ಬಗ್ಗೆ ಎಚ್ಚರವಹಿಸಬೇಕು, ಅದಕ್ಕೆ ಕೀಟಲೆ ಕೊಡದೆ ಅದರ ಪಾಡಿಗೆ ಬಿಟ್ಟು ಬಿಡಿ, ಒಂಟಿಯಾಗಿ ಓಡಾಡಬೇಡಿ ಎಂದು ಕಂದಾಯ ಇಲಾಖೆ, ಕುಂದಾಪುರ ತಾಲೂಕು ಆಡಳಿತ ಎಚ್ಚರಿಕೆ ನೀಡಿದೆ.
ಉಡುಪಿ- ಶಿವಮೊಗ್ಗ ಜಿಲ್ಲೆಯ ಗಡಿ ಭಾಗವಾದ ಬಾಳೆಬರೆಘಾಟಿ ರಸ್ತೆಯಲ್ಲಿ ಗಂಡು ಕಾಡಾನೆ ದಾರಿತಪ್ಪಿ ರಾಜ್ಯ ಹೆದ್ದಾರಿಯಲ್ಲಿ ಸಾಗಿ ಮಂಗಳವಾರ ಸಂಜೆ ಕುಂದಾಪುರ ತಾಲೂಕಿನ ಹೊಸಂಗಡಿ ಕಡೆಗೆ ಬಂದಿದೆ. ಆನೆಯ ಸಂಚಾರವನ್ನು ಮಾಸ್ತಿಕಟ್ಟೆಯ ಅರಣ್ಯ ಚೆಕ್ ಪೋಸ್ಟ್ನ ಸಿಬ್ಬಂದಿ ಹಾಗೂ ವಾಹನ ಸವಾರರು ತಮ್ಮ ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾರೆ. ಹಾಸನ ಕಾಡಿನ ಆನೆ ಕಾರಿಡಾರ್ನಲ್ಲಿ ಒಂಟಿಯಾಗಿ ಸಂಚರಿಸುತ್ತಿದ್ದ ಸುಮಾರು 12 ವರ್ಷ ಪ್ರಾಯದ ಗಂಡು ಕಾಡಾನೆಯು ದಾರಿ ತಪ್ಪಿ, ವಾರದ ಹಿಂದೆ ಕೊಪ್ಪದ ಮೂಲಕ ಶಿವಮೊಗ್ಗ ಜಿಲ್ಲೆಗೆ ಬಂದಿದೆ ಎಂದು ಹೇಳಲಾಗಿದೆ.