ಮಂಗಳೂರು: ಮಳೆಗಾಲದಲ್ಲಿ ಮನೆ ಮನೆಗೆ ಬರುವ ತೆಂಕುತಿಟ್ಟು ಚಿಕ್ಕ ಮೇಳಗಳು ʻತೆಂಕುತಿಟ್ಟು ಚಿಕ್ಕಮೇಳಗಳ ಒಕ್ಕೂಟ(ರಿ.)ನೊಂದಿಗೆ ಕಡ್ಡಾಯವಾಗಿ ನೋಂದಣಿ ಮಾಡಿಕೊಂಡಿರಬೇಕು. ನೋಂದಣಿ ಮಾಡಿಕೊಂಡ ಚಿಕ್ಕಮೇಳಗಳಿಗೆ ಗುರುತಿನ ಚೀಟಿ ಕೊಡಲಾಗುತ್ತದೆ. ಮನೆ ಮಂದಿ ಕೇಳಿದಾಗ ಚಿಕ್ಕಮೇಳದವರು ಗುರುತಿನ ಚೀಟಿಯನ್ನು ತೋರಿಸಬೇಕು. ಗುರುತಿನ ಚೀಟಿ ಇಲ್ಲದ ಚಿಕ್ಕಮೇಳಗಳು ಮನೆಮನೆಗೆ ಹೋಗುವಂತಿಲ್ಲ. ಒಂದು ಗ್ರಾಮಕ್ಕೆ ಒಂದೇ ಚಿಕ್ಕಮೇಳ ಹೋಗಬೇಕು ಒಮ್ಮೆ ಹೋದ ಮನೆಗೆ ಇನ್ನೊಂದು ಚಿಕ್ಕ ಮೇಳೆ ಹೋಗಬಾರದು ಎಂಬ ನಿಯಮಗಳನ್ನು ಮಾಡಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷರಾದ ಸರಪಾಡಿ ಅಶೋಕ್ ಶೆಟ್ಟಿ ಹೇಳಿದ್ದಾರೆ.
ಅವರು ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತಾಡುತ್ತಾ, ಈ ಹಿಂದಿನಿಂದಲೂ ಚಿಕ್ಕಮೇಳಗಳ ಮೇಲೆ ಅಪವಾದಗಳು ಕೇಳಿಬಂದಿತ್ತು. ವೃತ್ತಿಪರ ಯಕ್ಷಗಾನ ಕ್ಷೇತ್ರದಲ್ಲಿರುವವರೂ ಹಣ ಮಾಡುವ ಉದ್ದೇಶದಿಂದ ಮನೆಮನೆಗೆ ತೆರಳುತ್ತಿದ್ದರು. ಘಟ್ಟ ಭಾಗದವರೂ ವೇಷ ಹಾಕಿ ಸಂಚರಿಸುವ ಬಗ್ಗೆಯೂ ದೂರುಗಳು ಬಂದಿದ್ದವು. ಕಲಾವಿದರು ಮನೆಗಳಲ್ಲಿ ಅಶಿಸ್ತಿನಿಂದ ವರ್ತಿಸಿರುವುದು, ಓರ್ವ ಕಲಾವಿದ ಮನೆಯಿಂದ ಮೊಬೈಲ್ ಕದ್ದುಕೊಂಡ ಕಾರಣದಿಂದ ಚಿಕ್ಕಮೇಳಗಳ ಮೇಲೆ ಜನರು ಅನುಮಾನಪಡುವಂತಾಗಿತ್ತು. ಅದಕ್ಕಾಗಿಯೇ ಸನಾತನ ಧರ್ಮದ ತಿರುಳನ್ನು ಸಾರುವ ಮೂಲಕ ಕಲೆ ಹಾಗೂ ಕಲಾವಿದರನ್ನು ಪೋಷಿಸುವ ನಿಟ್ಟಿನಲ್ಲಿ ಕಾರ್ಯಾಚರಿಸುವ “ಚಿಕ್ಕ ಮೇಳಗಳ ಒಕ್ಕೂಟ” ಎಂಬ ಸಂಸ್ಥೆ ಕಳೆದೆರಡು ವರುಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದೆ. ಸುಮಾರು 50ಕ್ಕೂ ಮೇಲ್ಪಟ್ಟು ಚಿಕ್ಕಮೇಳಗಳ ತಂಡವನ್ನು ಒಂದೇ ವ್ಯವಸ್ಥೆಯಡಿ ತಂದು ಶಿಸ್ತು ಸಂಪ್ರದಾಯಕ್ಕೆ, ಸಭ್ಯತೆಗೆ ಆಡಚಣೆಯಾಗದಂತೆ ನೀತಿ ನಿಯಮಾವಳಿ ರೂಪಿಸಿಕೊಂಡಿದೆ ಎಂದರು.
ಚಿಕ್ಕಮೇಳಗಳು ಯಾವುದಾದರೂ ದೇವಸ್ಥಾನ ಅಥವಾ ದೇವಸ್ಥಾನದ ವತಿಯಿಂದಲೇ ಹೊರಡಬೇಕು. ಮನೆದೇವರ ಹೆಸರಲ್ಲಿ ಹೊರಟ ಚಿಕ್ಕಮೇಳಗಳಿಗೆ ಆಸ್ಪದವಿಲ್ಲ. ಚಿಕ್ಕಮೇಳಗಳು ಒಕ್ಕೂಟದೊಂದಿಗೆ ಹೆಸರು ನೋಂದಣಿ ಮಾಡಿಕೊಂಡರೆ ಅವರಿಗೆ ಗುರುತಿನ ಚೀಟಿ ಕೊಡಲಾಗುತ್ತದೆ. ಮೇಳ ಹೊರಟಾಗ ಅದನ್ನು ಕಡ್ಡಾಯವಾಗಿ ಕೈಯ್ಯಲ್ಲಿ ಇಟ್ಟುಕೊಳ್ಳಬೇಕು. ಒಂದೇ ಮನೆಗೆ ಎರಡೆರಡು ಚಿಕ್ಕಮೇಳಗಳು ಹೋಗಬಾರದು. ಕಲಾವಿದರು ಶಿಸ್ತಿನಿಂದ, ಭಕ್ತಿಪೂರ್ವಕವಾಗಿ ಯಕ್ಷಗಾನ ಆಡುವಂತೆ ಸೂಚನೆಗಳನ್ನು ನೀಡಲಾಗುತ್ತದೆ ಎಂದು ಸರಪಾಡಿ ಅಶೋಕ್ ಶೆಟ್ಟಿ ಹೇಳಿದರು.
250 ವರ್ಷಗಳ ಹಿಂದೆ ಕಾಸರಗೋಡಿನಲ್ಲಿ ಹುಟ್ಟಿಕೊಂಡ ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿ ಪ್ರಚಲಿತದಲ್ಲಿರುವ ವೃತ್ತಿಪರ ಯಕ್ಷಗಾನದ ಬಡ ಕಲಾವಿದರು ಜೀವನೋಪಾಯಕ್ಕಾಗಿ ಹಿಂದಿನ ಕಾಲದಿಂದಲೂ ಮಳೆಗಾಲದಲ್ಲಿ ಮನೆ ಮನೆ ಯಕ್ಷಗಾನ 5 ಜನರ ತಂಡ ಪ್ರತಿ ಮನೆಗಳಿಗೂ ಭೇಟಿ ನೀಡಿ ಸುಮಾರು 20 ನಿಮಿಷ ದಿವ್ಯ ಸಂದೇಶ ಇರುವ ಒಂದು ಯಕ್ಷಗಾನದ ತುಣುಕನ್ನು ಪ್ರದರ್ಶಿಸುತ್ತಾರೆ. ಆ ಮನೆಯವರು ನೀಡುವ ದೇಣಿಗೆಯನ್ನು ಸ್ವೀಕರಿಸಿ, ಮುಂದಿನ ಮನೆಗೆ ಹೀಗೇ ಪ್ರತಿ ದಿನಾ ರಾತ್ರಿ 10-30ರ ತನಕ ಸಂಚರಿಸುತ್ತದೆ. ನಂತರ ಆ ದಿನ ಮುಕ್ತಾಯಗೊಂಡು ಮತ್ತೆ ಮರುದಿನ ಸಂಜೆ 5-30ರಿಂದ 10-30ರ ತನಕ ನಿತ್ಯ ಹೀಗೆ ಕಲೆಯನ್ನು ಪ್ರದರ್ಶಿಸುತ್ತಾ ಸಮಾಜಕ್ಕೆ ದಿವ್ಯ ಸಂದೇಶ ಸಾರುತ್ತಾ 2025ರ ತಿರುಗಾಟವನ್ನು ಜೂನ್ 5 ತಾರೀಕಿಗೆ ತಳಕಳ ಕಾಶೀ ಶ್ರೀ ವಿಶ್ವನಾಥ ದೇವಸ್ಥಾನದಲ್ಲಿ ಯಕ್ಷ ಪ್ರದರ್ಶನ ಮಾಡಿ ಗೆಜ್ಜೆ ಮುಹೂರ್ತದೊಂದಿಗೆ ಗಣ್ಯರ ಉಪಸ್ಥಿತಿಯಲ್ಲಿ ಚಾಲನೆ ನೀಡಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಪ್ರಸ್ತುತ ನೋಂದಾಯಿತ ಸಂಸ್ಥೆಯೊಂದಿಗೆ ತಮ್ಮ ತಮ್ಮ ತಂಡವನ್ನು ನೋಂದಾಯಿಸಿಕೊಂಡು ದ.ಕ. ಜಿಲ್ಲಾದ್ಯಂತ ಸಂಚರಿಸುವ ಬಡ ಕಲಾವಿದರ “ಚಿಕ್ಕಮೇಳದ ಕಲಾ ತಂಡದಲ್ಲಿರುವ ಕಲಾವಿದರಿಗೆ ಕಾನೂನಿನಡಿಯಲ್ಲಿ ರಕ್ಷಣೆ ನೀಡಬೇಕು. ಅಲ್ಲದೆ ನಮ್ಮೊಂದಿಗೆ ನೋಂದಾಯಿಸದೆ ಅಶಿಸ್ತು, ಅಸಭ್ಯತೆಯ ಮೂಲಕ ನೋಂದಾಯಿತ ನಮ್ಮಿ ಚಿಕ್ಕಮೇಳದ ಒಕ್ಕೂಟದ ವ್ಯವಸ್ಥೆಗೆ ಭಂಗ ತರುವ ಅನಧಿಕೃತ “ಚಿಕ್ಕ ಮೇಳ”ದ ಹೆಸರಿನಲ್ಲಿ ತಿರುಗಾಟ ಮಾಡಿದರೆ ಅವರ ಮೇಲೆ ಶಿಸ್ತು ಕ್ರಮ ಕೈಗೊಂಡು ನೈಜ ಕಲಾವಿದರ ಬದುಕಿಗೆ ಸಹಕರಿಸಬೇಕು. ಕಳೆದ ವರುಷ ಅನಧಿಕೃತ ಚಿಕ್ಕಮೇಳದ ಹೆಸರಿನಲ್ಲಿ ಕೆಲವು ಭಾಗಗಳಲ್ಲಿ ಅನಪೇಕ್ಷಿತ ಘಟನೆಗಳು ನಡೆದಿರುತ್ತದೆ. ಈ ಎಲ್ಲಾ ಕಾರಣಕ್ಕಾಗಿ ಚಿಕ್ಕಮೇಳಗಳ ಒಕ್ಕೂಟದ ನಿಯಮಾವಳಿಗೆ ವಿರುದ್ಧವಾಗಿ ತಿರುಗಾಟ ಮಾಡಬಾರದು ಎಂದು ಮಾನ್ಯ ಜಿಲ್ಲಾಧಿಕಾರಿಗಳಿಗೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೂ ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ತೆಂಕುತಿಟ್ಟು ಚಿಕ್ಕ ಮೇಳಗಳ ಒಕ್ಕೂಟ್ ಪ್ರಧಾನ ಕಾರ್ಯದರ್ಶಿ ಕುಮಾರ್ ಮಾಲೆಮಾರ್, ಜತೆ ಕಾರ್ಯದರ್ಶಿ ಕಡಬ ದಿನೇಶ ರೈ, ಉಪಾಧ್ಯಕ್ಷ ರಮೇಶ್ ಕುಲಶೇಖರ, ದಿವಾಕರ ದಾಸ್, ಮೋಹನ ಕಲಂಬಾಡಿ ಹಾಗೂ ಸಂತೋಷ್ ಸುದರ್ಶನ್ ಹಾಗೂ ಇನ್ನಿತರು ಉಪಸ್ಥಿತರಿದ್ದರು.