ಹರಿಯಾಣ: ನಾದಿನಿಗೆ ಮದುವೆ ಮಾಡಿಸಿದ್ದಕ್ಕೆ ಕೋಪಗೊಂಡು ಬಾವ ಅಮೆರಿಕದಿಂದಲೇ ಬೆದರಿಕೆ ಹಾಕಿರುವುದರಿಂದ ಬೇಸತ್ತು ಮೂರು ಮಂದಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹರಿಯಾಣದ ಕೈಥಾಲ್ನಲ್ಲಿ ನಡೆದಿದೆ. ಅಳಿಯನ ಕಾಟದಿಂದ ಬೇಸತ್ತು ಇಬ್ಬರು ವಿವಾಹಿತ ಹೆಣ್ಣುಮಕ್ಕಳೊಂದಿಗೆ ಅತ್ತೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಗುಡ್ಡಿ ದೇವಿಯ ಶವ ಶೌಚಾಲಯದಲ್ಲಿ ಪತ್ತೆಯಾಗಿದ್ದರೆ, ಇಬ್ಬರು ಹೆಣ್ಣುಮಕ್ಕಳಾದ ನಿಶಾ ಹಾಗೂ ಪೂಜಾ ಶವ ಮಲಗುವ ಕೋಣೆಯಲ್ಲಿ ಪತ್ತೆಯಾಗಿದೆ. ಮೂವರನ್ನು ಆತ್ಮಹತ್ಯೆಗೆ ಪ್ರಚೋದಿಸಿರುವ ಆರೋಪ ಈಗ ಅಮೆರಿಕದಲ್ಲಿರುವ ಅಳಿಯನ ಮೇಲೆ ಬಂದಿದೆ.
ಪೂಜಾಳ ಪತಿ ಅನಿಲ್ ಪೂಜಾಳ ಬಾವ, ನಿಶಾಳ ಪತಿ ಜಿತೇಂದ್ರನೇ ಇವರ ಸಾವಿಗೆ ಕಾರಣ ಎಂದು ಆರೋಪಿಸಿದ್ದಾರೆ. ಪೂಜಾ 2025ರ ಫೆಬ್ರವರಿಯಲ್ಲಿ ಅನಿಲ್ ಅವರನ್ನು ಮದುವೆಯಾಗಿದ್ದಳು. ಆದರೆ ಆಕೆಯ ಬಾವ ಜಿತೇಂದ್ರನಿಗೆ ಈ ಮದುವೆ ಇಷ್ಟವಿರಲಿಲ್ಲ. ಅಂದಿನಿಂದ ಪೂಜಾ, ಆಕೆಯ ಪತಿ ಹಾಗೂ ಆಕೆಯ ಕುಟುಂಬಕ್ಕೆ ನಿರಂತರ ಬೆದರಿಕೆ ಹಾಕುತ್ತಲೇ ಇದ್ದ.
ಇಷ್ಟೇ ಅಲ್ಲ ಜಿತೇಂದ್ರನಿಗೆ ತನ್ನ ಪತ್ನಿಗೆ ನಿಶಾ ಜತೆ ಹೊಂದಿಕೆಯಾಗಲಿಲ್ಲ, ಅದಕ್ಕಾಗಿ ನಿಶಾ ತನ್ನ ಹೆತ್ತವರ ಮನೆಯಲ್ಲಿ ವಾಸಿಸುತ್ತಿದ್ದಳು. ಅನಿಲ್ ಪ್ರಕಾರ, ಜಿತೇಂದ್ರ ನಿತ್ಯ ಹಲವು ಬಾರಿ ಪೂಜಾಗೆ ಕರೆ ಮಾಡಿ ಚಿತ್ರಹಿಂಸೆ ನೀಡುತ್ತಿದ್ದ. ಈ ಒತ್ತಡದಿಂದಾಗಿ ಆಕೆ ಎರಡು ದಿನಗಳ ಹಿಂದೆ ತನ್ನ ಪೋಷಕರ ಮನೆಗೆ ಬಂದಿದ್ದಳು. ಆದರೆ ಜಿತೇಂದ್ರನ ಕಾಲ್ ಮತ್ತು ಮೆಸೇಜ್ಗಳು ಬರುತ್ತಲೇ ಇದ್ದವು.ಆತ್ಮಹತ್ಯೆ ಮಾಡಿಕೊಳ್ಳುವ ಸ್ವಲ್ಪ ಮೊದಲು ಕೂಡ ಆತನ ಮೆಸೇಜ್ ಬಂದಿತ್ತು.
ಪೂಜಾ ಅವರ ಪತಿ ಅನಿಲ್ ಜಿತೇಂದ್ರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಜಿತೇಂದ್ರ ಡಾಂಕಿ ರೂಟ್ ಮೂಲಕ ಅಮೆರಿಕಕ್ಕೆ ಹೋಗಿದ್ದ. ಆರೋಪಿ ಜಿತೇಂದ್ರ ಅಮೆರಿಕದಲ್ಲಿ ನೆಲೆಸಿದ್ದು, ಅಲ್ಲಿಂದ ಬೇರೆ ಬೇರೆ ಸಂಖ್ಯೆಗಳಿಂದ ಕರೆ ಮಾಡಿ ಬೆದರಿಕೆ ಮತ್ತು ಸಂದೇಶಗಳನ್ನು ಕಳುಹಿಸುತ್ತಿದ್ದ ಎಂದು ಅನಿಲ್ ಹೇಳಿದ್ದಾರೆ.ಜಿತೇಂದ್ರ ಆಕೆಯನ್ನು ನಿಂದಿಸಿದ್ದಲ್ಲದೆ, ಆಕೆಯ ಸಂಬಂಧಿಕರಿಗೂ ಅದೇ ರೀತಿ ಬೆದರಿಕೆ ಹಾಕಿದ್ದಾನೆ.
ಒಂದು ಸಂಖ್ಯೆ ಬ್ಲಾಕ್ ಮಾಡಿದರೆ ಮತ್ತೊಂದು ಸಂಖ್ಯೆಯಿಂದ ಕಾಲ್ ಮಾಡಿ ಹಿಂಸೆ ಕೊಡುತ್ತಿದ್ದ.ಪೂಜಾಳ ಅಕ್ಕ ನಿಶಾ ಈಗಾಗಲೇ ಕರ್ನಾಲ್ನ ಮಜ್ರಾ ರೋಡನ್ ಗ್ರಾಮದಲ್ಲಿರುವ ತನ್ನ ಅತ್ತೆಯ ಮನೆಯಿಂದ ತನ್ನ ಹೆತ್ತವರ ಮನೆಗೆ ಬಂದಿದ್ದಳು. ಜಿತೇಂದ್ರನ ಕಾಟದಿಂದ ಬೇಸತ್ತು ಮೂವರು ಕೂಡ ತಮ್ಮ ಜೀವನ ಅಂತ್ಯಗೊಳಿಸುವ ತಪ್ಪು ನಿರ್ಧಾರ ಮಾಡಿದ್ದರು.