ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರತಿಮೆ ಮೇಲೆ ಕೂತು ಬಾಯಿಗೆ ಬೀಡಿ ಇಟ್ಟ ಕಿಡಿಗೇಡಿ

ಮೈಸೂರು: ಮೈಸೂರಿನ ಕೆಆರ್‌ ವೃತ್ತದಲ್ಲಿರುವ ಆಧುನಿಕ ಮೈಸೂರಿನ ಹರಿಕಾರ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಪ್ರತಿಮೆ ಮೇಲೆ ಕಿಡಿಗೇಡಿಯೊಬ್ಬ ಏರಿ ಕುಳಿತು ಬಾಯಿಗೆ ಬೀಡಿ ಇಟ್ಟು ಅವಮಾನ ಮಾಡಿದ ಘಟನೆ ನಡೆದಿದ್ದು, ಅದರ ವಿಡಿಯೋ ವೈರಲ್‌ ಆಗಿದೆ. ನಗರದ ಹೃದಯಭಾಗದಲ್ಲಿರುವ ಪ್ರತಿಮೆಯ ಬಳಿಯೇ ಈ ಘಟನೆ ನಡೆದಿದ್ದೂ, ಕರ್ತವ್ಯ ನಿರತ ಪೊಲೀಸರು ಇದನ್ನು ತಡೆಯಲು ಪ್ರಯತ್ನಿಸಿಲ್ಲ ಎಂದು ಆರೋಪಿಸಲಾಗಿದೆ.

ಕಿಡಿಗೇಡಿ ಪ್ರತಿಮೆಯ ಮೇಲೆ ಬೆಂಕಿ ಕಡ್ಡಿ ಗೀರುತ್ತಿದ್ದ. ನಾಲ್ವಡಿಯವರ ಬಾಯಿಗೆ ಬೀಡಿ ಇಡುವ ಪ್ರಯತ್ನ ಮಾಡುತ್ತಿದ್ದ. ಎಷ್ಟೇ ಹೇಳಿದರೂ ಪ್ರತಿಮೆಯ ಆವರಣದಿಂದ ಹೊರಬಂದಿರಲಿಲ್ಲ .ಶುಕ್ರವಾರ ಮಧ್ಯಾಹ್ನ 3.30ರ ಸುಮಾರಿಗೆ ಈ ಘಟನೆ ನಡೆದಿದೆ. ಪೊಲೀಸರಿಗೆ ಮಾಹಿತಿ ನೀಡಲು ಕರೆ ಮಾಡಿದರೂ ಕೂಡ ಸುಮಾರು ಅರ್ಧಗಂಟೆ ಕಾಲ ಪೊಲೀಸ್‌ ಲೈನ್‌ ಸಿಗಲಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕೊನೆಗೆ ಪೊಲೀಸ್‌ ಬರುವ ಸೂಚನೆಯ ಬೆನ್ನಲ್ಲೇ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈ ನಡುವೆ ಅರಸು ಮಂಡಳಿ ಸಂಘದ ಅಧ್ಯಕ್ಷರು ಸೂಕ್ತ ಭದ್ರತೆಯನ್ನು ಕಲ್ಪಿಸುವವರೆಗೂ ಸ್ಥಳ ಬಿಟ್ಟು ಹೋಗೋದಿಲ್ಲ ಎಂದು ಪ್ರತಿಭಟನೆ ನಡೆಸಿದರು. ಪೊಲೀಸರ ಭರವಸೆ ಸಿಕ್ಕ ಬಳಿಕ ಅಲ್ಲಿಂದ ಹೊರನಡೆದಿದ್ದಾರೆ.
ಕೃತ್ಯ ಎಸಗಿದ ಅಪರಿಚಿತ ವ್ಯಕ್ತಿಯು ಮಾನಸಿಕ ಅಸ್ವಸ್ಥನಾಗಿರುವ ಸಾಧ್ಯತೆ ಇದೆ ಎಂದು ದೇವರಾಜ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ರಘು ಹೇಳಿದ್ದಾರೆ. ಸ್ಥಳಕ್ಕೆ ಹೋದಾಗ ಆತ ಅಲ್ಲಿಂದ ಪರಾರಿಯಾಗಿದ್ದು ಆತನನ್ನು ಪತ್ತೆ ಮಾಡಿ, ಕ್ರಮ ಕೈಗೊಳ್ಳಲಿದ್ದೇವೆ ಎಂದಿದ್ದಾರೆ.

ಈ ಘಟನೆಯ ಬೆನ್ನಲ್ಲಿಯೇ ನಗರ ನಿರ್ಮಾಣಕ್ಕೆ ಕಾರಣರಾದ ಮಹನೀಯರ ಪ್ರತಿಮೆಗೆ ರಕ್ಷಣೆ ಇಲ್ಲವೇ ಎನ್ನುವ ಪ್ರಶ್ನೆ ಉದ್ಭವಿಸುವಂತೆ ಮಾಡಿದೆ.

error: Content is protected !!