ಊಹಿಸಲೂ ಸಾಧ್ಯವಿಲ್ಲದಂತೆ ಇಹಲೋಕ ತ್ಯಜಿಸಿದ ಕಂಬಳ ಹೀರೋಗಳಾಗಿದ್ದ ಅಪ್ಪು-ತೋನ್ಸೆ

ಕಾರ್ಕಳ: ಯಾರೂ ಊಹಿಸಲೂ ಸಾಧ್ಯವಿಲ್ಲದ ರೀತಿಲ್ಲಿ ಕಂಬಳದ ಕೋಣಗಳು ಇಹಲೋಕ ತ್ಯಜಿಸಿದ್ದು, ಇಡೀ ಜಿಲ್ಲೆಯಲ್ಲಿ ಶೋಕ ಮಡುಗಟ್ಟಿದೆ. ಹೌದು ಅದೆಷ್ಟೋ ಕಂಬಳಗಳಲ್ಲಿ ಓಡಿ ಪದಕಗಳನ್ನು ಗೆದ್ದು, ಎಲ್ಲರ ಪ್ರೀತಿಯ ಕಣ್ಮಣಿಗಳಾಗಿದ್ದ ಕಾರ್ಕಳ ತಾಲೂಕಿನ ಕಾಂತಾವರ ಗ್ರಾಮದ ಬೇಲಾಡಿಯಲ್ಲಿ ನಿದ್ರಿಸುತ್ತಿದ್ದ ಅಪ್ಪು ಮತ್ತು ತೋನ್ಸೆ ಎಂಬ ಹೆಸರಿನ ಕಂಬಳ ಕೋಣಗಳು ಅಗ್ನಿ ಅವಘಡಕ್ಕೆ ತುತ್ತಾಗಿ ಅಸುನೀಗಿದೆ.

ಬೇಲಾಡಿ ಬಾವ ಅಶೋಕ್‌ ಶೆಟ್ಟಿ ಅವರಿಗೆ ಸೇರಿದ ಹಟ್ಟಿಯಲ್ಲಿ ನಿನ್ನೆ ರಾತ್ರಿ ಸಂಭವಿಸಿದ್ದು, ಇಂದು ಮುಂಜಾನೆ ಕೆಲಸದಾಳು ಕೋಣಗಳ ಭೀಕರ ಸ್ಥಿತಿಯನ್ನು ನೋಡಿ ಬೆಚ್ಚಿಬಿದ್ದಿದ್ದಾರೆ. ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ನಿಂದ ಘಟನೆ ನಡೆದಿದೆ ಎನ್ನಲಾಗಿದೆ. ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದೆ.

ಅಪಾರ ಸಾಧನೆ ಮಾಡಿದ್ದ ತೋನ್ಸೆ-ಅಪ್ಪು

ಕಂಬಳ ಕ್ಷೇತ್ರದಲ್ಲಿ ಅಪ್ಪು ಹಾಗೂ ತೋನ್ಸೆ ಅಪಾರ ಸಾಧನೆ ಮಾಡಿದ್ದು, ಕಂಬಳ ಪ್ರಿಯರಿಗೆ ಇವರಿಬ್ಬರ ಹೆಸರು ತೀರಾ ಪರಿಚಿತ. 2022-23ರಲ್ಲಿ ಕಂಬಳದಲ್ಲಿ ಕನೆಹಲಗೆ ವಿಭಾಗದಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದವು. ತೋನ್ಸೆ ಕೋಣ ನೇಗಿಲು ಕಿರಿಯ, ನೇಗಿಲು ಹಿರಿಯ ಹಗ್ಗ ಹಿರಿಯ, ಅಡ್ಡ ಹಲಗೆ, ಕನೆಹಲಗೆ ವಿಭಾಗದಲ್ಲಿ ಸ್ಪರ್ಧಿಸಿ ಎಲ್ಲಾ ವಿಭಾಗದಲ್ಲಿ ಪ್ರಶಸ್ತಿ ಪಡೆದು ಸಾಧನೆ ಮಾಡಿದ್ದ.


ಅಲೆವೂರು ತೆಂಕುಮನೆ ರಾಘು ಶೆಟ್ಟಿ ಅವರು ಸುಮಾರು 14-15 ವರ್ಷಗಳಿಂದ ತೋನ್ಸೆಯಿಂದ ಕುಟ್ಟಿ ಎಂಬ ಕೋಣವನ್ನು ತಂದು, ಅದಕ್ಕೆ ತೋನ್ಸೆ ಕುಟ್ಟಿ ಎಂದು ಹೆಸರು ನೀಡಿದ್ದರು ಮುಂದೆ ತೋನ್ಸೆ ಎಂದೇ ಪರಿಚಿತನಾದ ಈತ ಅಲೆವೂರು ರಾಘು ಶೆಟ್ರ ಯಜಮಾನಿಕೆಯಲ್ಲಿ ತಡಂಬೈಲು ಕುಟ್ಟಿ ಜತೆ ಜೂನಿಯರ್‌ ವಿಭಾಗದಲ್ಲಿ ಎರಡು ಬಾರಿ ಚಾಂಪಿಯನ್ ಶಿಪ್, ಹಿರಿಯ ವಿಭಾಗದಲ್ಲಿ ಎರಡು ವರ್ಷ ಚಾಂಪಿಯನ್‌ಶಿಪ್ ಪಡೆದು ಸಾಧನೆ ಮಾಡಿದ್ದ.


ಇವರಿಬ್ಬರನ್ನು ಹಗ್ಗ ಹಿರಿಯ ವಿಭಾಗದಲ್ಲಿ ಮೂಡುಬಿದಿರೆ ಕರಿಂಜೆ ವಿನು ವಿಶ್ವನಾಥ ಶೆಟ್ಟಿ ಅವರು ಓಡಿಸಿ ಮೆಡಲ್‌ ಪಡೆದಿದ್ದರು. ಬೇಲಾಡಿಗೆ ಬಂದ ತೋನ್ಸೆ ಅಡ್ಡ ಹಲಗೆ, ಕನಹಲಗೆ ವಿಭಾಗದಲ್ಲಿ ಕಳೆದ ನಾಲ್ಕೈದು ವರ್ಷಗಳಲ್ಲಿ ಹಲವಾರು ಮೆಡಲ್‌ ಪಡೆದಿದ್ದನು. 2022-23ರಲ್ಲಿಯೂ ಚಾಂಪಿಯನ್‌ ಪಟ್ಟ ಪಡೆದ ತೋನ್ಸೆ ಕಳೆದ ಸೀಸನ್‌ ನಲ್ಲಿಯೂ ಒಂದು ಮೆಡಲ್‌ ಪಡೆದ್ದನು. ಮತ್ತೊಬ್ಬ ಹೀರೋ ಅಪ್ಪು ಕನೆಹಲಗೆ ಮತ್ತು ಅಡ್ಡಹಲಗೆ ವಿಭಾಗದಲ್ಲಿ ಅಪಾರ ಸಾಧನೆ ಮಾಡಿದ್ದನು. ಈತನನ್ನು ತಡಂಬೈಲಿನಿಂದ ತರಲಾಗಿತ್ತು. ಇವನು ನಾರಾವಿ ಯುವರಾಜ್‌ ಜೈನ್ ಮತ್ತು ಬೇಲಾಡಿ ಮನೆಯ ಹೆಸರಿನಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದು ಅಪಾರ ಸಾಧನೆ ಮಾಡಿದ್ದಾನೆ.

ಇವರಿಬ್ಬರ ಸಾವಿನಿಂದ ಕಂಬಳ ಕ್ಷೇತ್ರಕ್ಕೆ ಅಪಾರ ನಷ್ಟ ಉಂಟಾಗಿದ್ದು, ಊಹಿಸಲೂ ಸಾಧ್ಯವಿಲ್ಲದ ರೀತಿಯಲ್ಲಿ ಅಂತ್ಯಕಂಡ ಅಪ್ಪು -ತೋನ್ಸೆಗೆ ತುಳುನಾಡಿನ ಜನರು ಕಣ್ಣೀರು ಹಾಕುತ್ತಿದ್ದಾರೆ.

error: Content is protected !!