ತಲವಾರು, ಖಾರದ ಪುಡಿ ಹಿಡಿದು ದರೋಡೆಗೆ ಇಳಿದಿದ್ದ ಹಿಂದೂ ಸಂಘಟನೆಯ ಇಬ್ಬರು ಸೆರೆ: ಮೂವರು ಎಸ್ಕೇಪ್

ಮೂಡಬಿದ್ರೆ : ಕಾರಿನಲ್ಲಿ ಕಬ್ಬಿಣದ ತಲವಾರ್, ಖಾರದ ಪುಡಿ ಪ್ಯಾಕೇಟ್‌ ಇರಿಸಿಕೊಂಡು ದಾರಿಹೋಕರನ್ನು ಬೆದರಿಸಿ ದರೋಡೆಗೆ ಇಳಿಸಿದ್ದ ಇಬ್ಬರು ಖದೀಮರನ್ನು ಮೂಡಬಿದ್ರೆ ಪೊಲೀಸರು ಬಡಗ ಮಿಜಾರ್ ಗ್ರಾಮದ ಬೊಳ್ಳೆಚಾರ್ ಎಂಬಲ್ಲಿ ಹೆಡೆಮುರಿಕಟ್ಟಿದ್ದಾರೆ. ಈ ಪೈಕಿ ಮೂವರು ಪರಾರಿಯಾಗಿದ್ದು, ಇವರಿಗಾಗಿ ಶೋಧ ಮುಂದುವರಿದಿದೆ. ಬಂಧಿತರು ಹಿಂದೂ  ಸಂಘಟನೆಯ ಕಾರ್ಯಕರ್ತರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೂಡಬಿದ್ರೆ ಮಾರ್ಪಾಡಿ ಗ್ರಾಮದ ಸುಭಾಷ್‌ ನಗರ ನಿವಾಸಿ ಜಗದೀಶ(29) ಹಾಗೂ ಬೆಳ್ತಂಗಡಿ ಪೆರಿಂಜೆ ಅಂಚೆ ಹೊಸಂಗಡಿ ಅಂಗರಕರಿಯ ನಿವಾಸಿ ಪ್ರಶಾಂತ್ @ ಪಾಂತು(27) ಬಂಧಿತ ಆರೋಪಿಗಳು.

ಮೂಡಬಿದಿರೆ ಠಾಣಾಧಿಕಾರಿ ಪ್ರತಿಭಾ ಅವರು ಮೇ 29ರಂದು ಠಾಣಾ ಸಿಬ್ಬಂದಿ ಜೊತೆ ಪುತ್ತಿಗೆ ಗ್ರಾಮದ ವಿದ್ಯಾಗಿರಿ ಎಂಬಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದರು. ರಾತ್ರಿ ಸುಮಾರು 10.15 ಗಂಟೆಗೆ ಬಡಗ ಮಿಜಾರ್ ಗ್ರಾಮದ ಬೊಳ್ಳೆಚಾರ್ ಎಂಬಲ್ಲಿ 5 ಜನರು ಒಂದು ಕಾರಿನಲ್ಲಿ ಬಂದು ಗುಂಪು ಸೇರಿ ಯಾವುದೋ ದರೋಡೆ ಕೃತ್ಯವನ್ನು ನಡೆಸಲು ಹೊಂಚು ಹಾಕಿ ನಿಂತುಕೊಂಡಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸ್‌ ತಂಡಕ್ಕೆ ಲಭಿಸಿದ್ದು, ಕಾರ್ಯಚರಣೆಗೆ ಇಳಿದಿದ್ದರು.
ಘಟನಾ ಸ್ಥಳಕ್ಕೆ ದಾಂಗುಡಿ ಇಟ್ಟ ಪೊಲೀಸರು ಸ್ಥಳದಲ್ಲಿ ಕೆಎ-35-ಎಮ್-9299 ನಂಬರಿನ ಒಂದು ಇನ್ನೋವಾ ಕಾರನ್ನು ಕಂಡಿದ್ದು, ಇದರ ಸುತ್ತ 5 ಜನರು ಗುಂಪು ಸೇರಿ ನಿಂತಿರುವುದನ್ನು ಕಂಡು ಬಂದಿತು. ಪೊಲೀಸರು ತಕ್ಷಣ ಕಾರನ್ನು ಸುತ್ತುವರಿಯುತ್ತಿದ್ದಂತೆ, ಸಮವಸ್ತ್ರ ಕಂಡ ಆರೋಪಿಗಳ ಪೈಕಿ ಮೂವರು ಪರಾರಿಯಾಗಿದ್ದಾರೆ.

ತಕ್ಷಣ ಜಗದೀಶ ಮತ್ತು ಪ್ರಶಾಂತ್ @ ಪಾಂತು ಎಂಬುವರನ್ನು ವಶಕ್ಕೆ ಪಡೆದುಕೊಂಡು ನೀವ್ಯಾಕೆ ಓಡಲು ಯತ್ನಿಸಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಆಗ ಆರೋಪಿಗಳು ‘ನಾವು 5 ಮಂದಿ ಜೊತೆ ಸೇರಿ ಕೆಎ-35-ಎಂ-9299 ನೇ ನಂಬ್ರದ ಇನ್ನೋವಾ ಕಾರಿನಲ್ಲಿ ಇಲ್ಲಿಗೆ ಬಂದಿದ್ದೇವೆ. ಕಾರಿನಲ್ಲಿ ಕಬ್ಬಿಣದ ತಲವಾರ್, ಖಾರದ ಪುಡಿ ಪ್ಯಾಕೇಟನ್ನು ಇರಿಸಿಕೊಂಡು ದಾರಿಯಲ್ಲಿ ಹಾದು ಹೋಗುವ ಜನರನ್ನು ದರೋಡೆ ಮಾಡುವ ಉದ್ದೇಶದಿಂದ ಹಾಗೂ ರಾತ್ರಿ ಸಮಯ ದ್ವಿ-ಚಕ್ರ ವಾಹನದಲ್ಲಿ ಓಡಾಡುವ ಜನರನ್ನು ನಿಲ್ಲಿಸಿ ಅವರಿಗೆ ಕಬ್ಬಿಣದ ತಲವಾರ್ ತೋರಿಸಿ ಹೆದರಿಸಿ, ಕಣ್ಣಿಗೆ ಖಾರದ ಪುಡಿಯನ್ನು ಹಾಕಿ ಅವರಲ್ಲಿರುವ ಹಣ ಹಾಗೂ ಸೊತ್ತುಗಳನ್ನು ಬಲವಂತವಾಗಿ ದೋಚುವ ಉದ್ದೇಶದಿಂದ ಇಲ್ಲಿಗೆ ಬಂದು ಸಮಾಲೋಚನೆ ಮಾಡುತ್ತಿದ್ದೆವು’ ಎಂಬುವುದಾಗಿ ತಿಳಿಸಿದ್ದಾರೆ.
ಆಗ ಪೊಲೀಸರು ಕಾರನ್ನು ಪರಿಶೀಲಿಸಿದಾಗ ಅದರ ಡಿಕ್ಕಿಯಲ್ಲಿ ತಲವಾರ್ ಹಾಗೂ ಖಾರದ ಪುಡಿ ಪ್ಯಾಕೇಟ್ ಇರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಶಾಂತ್‌ ಮೀನು ವ್ಯಾಪಾರಿಯ ಕೊಲೆಯತ್ನ ಆರೋಪಿ

ಬಂಧಿತರಲ್ಲಿ ಪ್ರಶಾಂತ್‌ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮೀನು ವ್ಯಾಪಾರಿಯ ಕೊಲೆಯತ್ನದ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸುಹಾಸ್‌ ಶೆಟ್ಟಿ ಹತ್ಯೆಯ ಸಂದರ್ಭ ಬಜರಂಗದಳ ಮುಖಂಡ ಶರಣ್‌ ಪಂಪ್‌ವೆಲ್‌ ದಕ್ಷಿಣ ಕನ್ನಡ ಜಿಲ್ಲಾ ಬಂದ್‌ಗೆ ಕರೆ ನೀಡಿದ್ದರು. ಈ ವೇಳೆ ಕಾವೂರು ಠಾಣಾ ವ್ಯಾಪ್ತಿಯಲ್ಲಿ ಮೀನು ವ್ಯಾಪಾರಿಯ ಕೊಲೆ ಯತ್ನ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಹಲವು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಇದರಲ್ಲಿ ಪ್ರಶಾಂತ್‌ ಕೂಡಾ ಇದ್ದ ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಮತ್ತೊಬ್ಬ ಆರೋಪಿ ಜಗದೀಶ್ ವಿರುದ್ಧ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿರುವ ಬಗ್ಗೆ ಮಾಹಿತಿ ಲಭಿಸಿದೆ.

error: Content is protected !!