ತಾತ್ಕಾಲಿಕ ಸೇತುವೆ ನಿರ್ಮಿಸಿ ವೃದ್ಧ ದಂಪತಿಗೆ ನೆರವಾದ ಕಾಪು ತಹಶಿಲ್ದಾರ್

ಪಲಿಮಾರು :  ಕಾಪು ತಾಲ್ಲೂಕಿನ ಪಲಿಮಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅವರಾಲು ಮಟ್ಟು ಗ್ರಾಮದಲ್ಲಿ ಕಳೆದ 5 ತಿಂಗಳ ಹಿಂದೆ ವೃದ್ಧ ದಂಪತಿಗೆ ನೀಡಿದ್ದ ಭರವಸೆಯಂತೆ ಇಂದು ತಾತ್ಕಾಲಿಕ ಪರಿಹಾರವಾಗಿ ಸಿಮೆಂಟಿನ ಕಂಬಗಳನ್ನು ಹಾಕಿಸಿ ಕಿರುಸೇತುವೆ ನಿರ್ಮಾಣ ಮಾಡಿಕೊಟ್ಟು ತಹಶಿಲ್ದಾರ್ ಪ್ರತಿಭಾ ಆರ್ ರವರು ನೀಡಿದ ಭರವಸೆಯನ್ನು ಈಡೇರಿಸಿದ್ದಾರೆ.


ಈಗಾಗಲೇ ಲೋಕೋಪಯೋಗಿ ಇಲಾಖೆಯ ಗಮನಕ್ಕೆ ತರಲಾಗಿದ್ದು, ಶಾಶ್ವತ ಕಾಲುಸಂಕ ನಿರ್ಮಾಣ ಮಾಡಲು ಏರ್ಪಾಡು ಮಾಡಲಾಗಿದೆ. ಸದ್ಯದಲ್ಲಿಯೇ ಕಾಮಗಾರಿ ಪ್ರಾರಂಭಿಸಲು ಯೋಜಿಸಲಾಗಿದೆ ಎಂದು ತಹಶಿಲ್ದಾರ್ ಪ್ರತಿಭಾ ಆರ್ ತಿಳಿಸಿದ್ದಾರೆ.
ಅವರಾಲು ಮಟ್ಟು ಗ್ರಾಮದ ನಿವಾಸಿ ವಯೋವೃದ್ಧ ವಸಂತಿ ಮತ್ತು ಭೋಜ ಸಾಲ್ಯಾನ್ ಮನೆಗೆ ಸಾಗುವ ಕಾಲು ಸಂಕ ಶಿಥಿಲವಾಗಿತ್ತು. ಮರದ ಸಣ್ಣ ಹಲಗೆಯ ಮೇಲೆಯೇ ಅವರು ನಡೆದಾಡಬೇಕಾದ ಪರಿಸ್ಥಿತಿ ಇತ್ತು. ಈಗಾಗಲೇ ಅವರು ಕಾಪು ತಹಶಿಲ್ದಾರ್ ಪ್ರತಿಭಾ ಆರ್ ರವರಿಗೆ ಮನವಿ ಮಾಡಿದ್ದರು. ಅಂತೆಯೇ ಪಲಿಮಾರು ಗ್ರಾಮ ಪಂಚಾಯತಿಗೂ ಮನವಿ ಮಾಡಿದ್ದರು.


ಇಂದು ಈ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಿದ್ದರಿಂದ ವಸಂತ ಮತ್ತು ಭೋಜ ಸಾಲ್ಯಾನ್ ದಂಪತಿಗಳ ಮೊಗದಲ್ಲಿ ಸಂತೋಷದ ನಗು ಉಂಟಾಗಿದೆ. ಕಳೆದ ಡಿಸೆಂಬರ್ ನಲ್ಲಿ ಸ್ವತಃ ತಹಶಿಲ್ದಾರ್ರವರು ಸ್ವತಃ ಶಿಥಿಲ ಹಲಗೆ ಸೇತುವೆ ಮೇಲೆ ನಡೆದು ಆತಂಕ ವ್ಯಕ್ತಪಡಿಸಿ, ಶೀಘ್ರವಾಗಿ ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಅದರಂತೆ ಈಗ ತಾತ್ಕಾಲಿಕ ಸೇತುವೆ ನಿರ್ಮಾಣ ಆಗಿದೆ.
ತಹಶಿಲ್ದಾರ್ ಪ್ರತಿಭಾ ಆರ್ ರವರು ಮಾತನಾಡಿ, ವಸಂತಿ, ಭೋಜ ಸಾಲ್ಯಾನ್ ವೃದ್ಧ ದಂಪತಿಗಳ ಪರಿಸ್ಥಿತಿ ನಿಜಕ್ಕೂ ಶೋಚನೀಯವಾಗಿತ್ತು. ನಾನು ಈ ಹಿಂದೆ ಭರವಸೆ ನೀಡಿದ್ದಂತೆ ಗ್ರಾಮ ಪಂಚಾಯತಿ ವತಿಯಿಂದ ಸಿಮೆಂಟ್ ಕಂಬಗಳಿಂದ ತಾತ್ಕಾಲಿಕ ಸೇತುವೆ ನಿರ್ಮಿಸಿದ್ದೇವೆ. ಸದ್ಯದಲ್ಲೇ ಶಾಶ್ವತ ಕಾಲು ಸಂಕ ನಿರ್ಮಿಸಿಕೊಡಲು ಲೋಕೋಪಯೋಗಿ ಇಲಾಖೆಗೆ ತಿಳಿಸಿ ಒಪ್ಪಿಗೆ ಪಡೆಯಲಾಗಿದೆ. ಇಂದು ಈ ತಾತ್ಕಾಲಿಕ ಸೇತುವೆಯ ನಿರ್ಮಾಣದಿಂದ ಆ ವೃದ್ಧ ದಂಪತಿಗೆ ಉಂಟಾದ ಸಂತಸ ಕಂಡು ನಮಗೂ ಸಂತೋಷವಾಗಿದೆ ಎಂದರು.
ಪಲಿಮಾರು ಗ್ರಾಮ ಪಂಚಾಯತಿ ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಉಪಾಧ್ಯಕ್ಷರು, ಸದಸ್ಯರು, PDO ಇವರೆಲ್ಲರ ಸಹಕಾರದಿಂದ ಇಂದು ಈ ತಾತ್ಕಾಲಿಕ ಸೇತುವೆ ನಿರ್ಮಾಣಕ್ಕೆ ಸಹಕರಿಸಿದ್ದಾರೆ.

error: Content is protected !!