ದ.ಕ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆ : ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಭಾರತಿ ಸಂಸ್ಥೆಯ ವಿಜೇತ ಅಭ್ಯರ್ಥಿಗಳಿಗೆ ಅಭಿನಂದನೆ

ಮಂಗಳೂರು: ಇತ್ತೀಚೆಗೆ ನಡೆದ ದ ಕ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಭಾರತಿಯ ವಿಜೇತ ಅಭ್ಯರ್ಥಿಗಳನ್ನು ಮಂಗಳೂರು ಮಹಾನಗರ ಜಿಲ್ಲೆ ಮತ್ತು ಸಹಕಾರ ಭಾರತಿ ದ ಕ ಜಿಲ್ಲೆಯ ವತಿಯಿಂದ ತಾರೀಕು ಮೇ 19 ರಂದು ಕ್ಯಾಂಪ್ಕೊ ಸಭಾ ಭವನದಲ್ಲಿ ಅಭಿನಂದಿಸಲಾಯಿತು. ಹಿರಿಯ ಸಹಕಾರಿ, ಸಹಕಾರ ಭಾರತಿ ರಾಷ್ಟ್ರೀಯ ಮಾಜಿ ಉಪಾಧ್ಯಕ್ಷ ಮತ್ತು ಕ್ಯಾಂಪ್ಕೋ ಮಾಜಿ ಅಧ್ಯಕ್ಷ ಶ್ರೀ ಪದ್ಮನಾಭ ಕೊಂಕೋಡಿಯವರು ತಮ್ಮ ಅಭಿನಂದನಾ ಭಾಷಣದಲ್ಲಿ ಎಲ್ಲಾ ಅಭ್ಯರ್ಥಿಗಳನ್ನು ಹಾಗೂ ಚುನಾವಣೆಯಲ್ಲಿ ಶ್ರಮವಹಿಸಿದ ಕಾರ್ಯಕರ್ತರನ್ನು ಪ್ರಶಂಸಿಸಿದರು. ಕರ್ನಾಟಕದಲ್ಲಿ ಸಹಕಾರ ಭಾರತಿ ಬೆಳೆದು ಬಂದ ವಿವರ, ಈ ಪಥದಲ್ಲಿ ಏಳು ಬೀಳುಗಳು, ಸಾಧನೆ, ಅತ್ತು ಅದರ ಹಿಂದಿನ ಪರಿಶ್ರಮ ಎಲ್ಲವೂ ಸೇರಿ ಒಟ್ಟಾರೆ ಸಂಘಟನೆಯ ಬೆಳವಣಿಗೆಯೇ ಒಂದು ಪಾಠ ಮತ್ತು ಸಂಘಟನೆಯು ವ್ಯಕ್ತಿಯ ಯಶಸ್ಸಿಗೆ ಉತ್ತಮ ಅನುಭವದ ಸಾರವಾಗಲಿದೆ ಎಂದರು. ನಿರ್ದೇಶಕರಾಗಿ ಆಯ್ಕೆಯಾದವರು, ಗೊ ಸಾಕಾಣೆದಾರರ ಸಂಕಷ್ಟ, ಮತ್ತು ಅಹವಾಲುಗಳಿಗೆ ತುರ್ತು ಸ್ಪಂದಿಸುವ ಅವಶ್ಯಕತೆ ಇದೆ ಎಂದು ಒತ್ತಿ ಹೇಳಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಹಕಾರ ಭಾರತಿಯ ಮಾಜಿ ಸಂಘಟನಾ ಕಾರ್ಯದರ್ಶಿ ಶ್ರೀ ಸೂರ್ಯಕಾಂತ್ ಕೇಳ್ಕಾರ್ ರವರು ಸಂಘಟನೆ ಬೆಳೆಯುವ ದೃಷ್ಟಿಯಿಂದ ಕೆಲವು ಬಾರಿ ತನ್ನ ಸ್ವಹಿತವನ್ನು ಬದಿಗಿಡುವ ಸಂದರ್ಭ ಬಂದಾಗಲೂ ಸದಸ್ಯರುಗಳು ಸಂಘಟನೆಯ ಬಗ್ಗೆ ಆಸಕ್ತಿ ಕಳೆದು ಕೊಳ್ಳಬಾರದು ಎಂದರು. ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಒಕ್ಕೂಟದ ನಿಕಟ ಪೂರ್ವ ನಿರ್ದೇಶಕ ಶ್ರೀ ನರಸಿಂಹ ಕಾಮತ್ ಅವರು ಮಾತನಾಡಿ ಸಹಕಾರ ಭಾರತಿ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ರೀತಿಯಲ್ಲಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ,ಮೂಲಕ ಜವಾಬ್ದಾರಿ ನಿರ್ವಹಿಸುವ ಕುರಿತು ಹೇಳಿದರು.

ವಿಭಾಗ ಸಂಘಟನಾ ಪ್ರಮುಖ್ ಶ್ರೀ ಮೋಹನ್ ಕುಂಬ್ಲೇಕರ್ ತನ್ನ ಅಭಿಪ್ರಾಯ ಮಂಡಿಸಿದರು. ಇದೇ ಸಂದರ್ಭದಲ್ಲಿ ಸಹಕಾರ ಭಾರತಿ ದ ಕ ಜಿಲ್ಲಾ ಅಧ್ಯಕ್ಷ ಹಾಗೂ ಒಕ್ಕೂಟ ನಿರ್ದೇಶಕರಲ್ಲಿ ಒಬ್ಬರಾದ ಶ್ರೀ ಸುಧಾಕರ ರೈಯವರು,ದ.ಕ ಹಾಲು ಒಕ್ಕೂಟದ ಚುನಾವಣಾ ಸಂದರ್ಭ ಸಹಕಾರ ಮತ್ತು ಮಾರ್ಗದರ್ಶನ ನೀಡಿದ ಸಂಘ ಹಾಗೂ ಸಹಕಾರ ಭಾರತಿಯ ವರಿಷ್ಠರು ಮತ್ತು ಭಾರತೀಯ ಜನತಾ ಪಕ್ಷದ ಜನ ಪ್ರತಿನಿಧಿಗಳು, ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು. ಹಾಲು ಒಕ್ಕೂಟದ ಚುನಾವಣಾ ಅಭ್ಯರ್ಥಿ ಹಾಗೂ ನಿಕಟ ಪೂರ್ವ ನಿರ್ದೇಶಕಿ, ಸಹಕಾರ ಭಾರತಿ ದ ಕ ಜಿಲ್ಲಾ ಮಹಿಳಾ ಪ್ರಮುಖ್ ಶ್ರೀಮತಿ ಸುಭದ್ರಾ ರಾವ್ ಅವರು ತನ್ನ ಅನುಭವ ಹಂಚಿಕೊಂಡು, ವೈಯಕ್ತಿಕ ಸೋಲು ಗೆಲುವುಗಳನ್ನು ಸಮಾನ ಮನಸ್ಕರಾಗಿ ಸ್ವೀಕರಿಸುವಂತೆ ಕರೆ ನೀಡಿದರು. ಸಂಘಟನೆಯನ್ನು ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ ತೊಡಗಿಸಿ ಕೊಳ್ಳುವ ಕುರಿತು ಹೇಳಿದರು.ಮಂಗಳೂರು ಮಹಾನಗರ ಜಿಲ್ಲೆಯ ಅಧ್ಯಕ್ಷರಾದ ಶ್ರೀ ಜಿ ಆರ್ ಪ್ರಸಾದ್ ರವರು ಸ್ವಾಗತಿಸಿ ಪ್ರಸ್ತಾವನೆಗೈದರು.

ಶ್ರೀ ದಯಾನಂದ ಅಡ್ಯಾ‌ರ್ ಅವರು ವಂದಿಸಿದರು . ಶ್ರೀಮತಿ ಜಯಶ್ರೀ ಯವರು ಕಾರ್ಯಕ್ರಮ ನಿರ್ವಹಿಸಿದರು. ದ ಕ ಜಿಲ್ಲೆಯ ಮತ್ತು ನಗರ ಜಿಲ್ಲಾ ಪದಾಧಿಕಾರಿಗಳು ಕಾರ್ಯಕರ್ತರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

error: Content is protected !!