ಬೆಂಗಳೂರು: ʻಜೀ ಕನ್ನಡʼ ವಾಹಿನಿಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ʻಸರಿಗಮಪʼ ಮೂಲಕ ಫೇಮಸ್ ಆಗಿದ್ದ ಗಾಯಕಿ ಪೃಥ್ವಿ ಭಟ್ ತಮ್ಮ ಮನೆಯವರ ವಿರೋಧದ ನಡುವೆ ಓಡಿ ಹೋಗಿ ಮಾರ್ಚ್ 27ರಂದು ʻಜೀ ಕನ್ನಡʼ ವಾಹಿನಿಯಲ್ಲಿಯೇ ಪ್ರೊಡಕ್ಷನ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಅಭಿಷೇಕ್ ಅನ್ನುವವರ ಜೊತೆ ಪ್ರೇಮ ವಿವಾಹ ಆಗಿದ್ದಾರೆ. ಈ ಬಗ್ಗೆ ಪೃಥ್ವಿ ಅವರ ತಂದೆ ಶಿವಪ್ರಸಾದ್ ಅವರು ಸುಧೀರ್ಘವಾದ ಆಡಿಯೋ ರೆಕಾರ್ಡ್ ಮಾಡಿ ಆಕ್ರೋಶ ಹೊರ ಹಾಕಿದ್ದರು. ಈ ಬೆನ್ನಲ್ಲೇ ಈ ಮದುವೆ ವಿವಾದಕ್ಕೆ ಪೃಥ್ವಿ ಭಟ್ ಸ್ಪಷ್ಟನೆ ನೀಡಿದ್ದಾರೆ.
“ಈ ವಿಚಾರದಲ್ಲಿ ದೀಕ್ಷಿತ್ ಸರ್ ಅವರದ್ದು ಯಾವುದೇ ತಪ್ಪು ಇಲ್ಲ. ನನಗೆ ಅಭಿ ಇಷ್ಟ ಅಂತಲೇ ನಾನು ನಿಮ್ಮ ಮುಂದೆ ಹೇಳಿದ್ದೆ, ನೀವು ಬೈದಿದ್ದಕ್ಕೆ ನಿಮ್ಮ ಮೇಲಿರುವ ಭಯಕ್ಕೆ ನಾನು ಸುಮ್ಮನಿದ್ದೆ ಬಿಟ್ರೆ ನನ್ನ ಮನಸ್ಸಲ್ಲಿ ಅಭಿ ಇದ್ದರು. ಶೋಗಳಿಗೂ ಬೇಡ ಅಂತ ಹೇಳುತ್ತಿದ್ರಿ, ನನಗೆ ಹೆದರಿಕೆ ಶುರುವಾಯ್ತು ಹಾಗಾಗಿ ಮನೆ ಬಿಟ್ಟು ಬಂದೆ. ನಮ್ಮ ಮದುವೆಗೂ ನರಹರಿ ದೀಕ್ಷಿತ್ ಸರ್ಗೂ ಯಾವುದೇ ಸಂಬಂಧವಿಲ್ಲ. ಸಾಧ್ಯವಾದರೆ ನನ್ನನ್ನು ಕ್ಷಮಿಸಿ ನನ್ನಿಂದ ತಪ್ಪಾಗಿದೆ” ಎಂದು ಪೃಥ್ವಿ ಭಟ್ ಆಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಇದಕ್ಕಿಂದ ಮುಂಚೆ ಪೃಥ್ವಿ ಭಟ್ ಅವರ ತಂದೆ ಶಿವಪ್ರಸಾದ್ ಅವರು, “ನನ್ನ ಮಗಳು ಪೃಥ್ವಿ ಮಾರ್ಚ್ 27ರಂದು ʻಜೀ ಕನ್ನಡʼ ವಾಹಿನಿಯಲ್ಲಿ ಕೆಲಸ ಮಾಡುತ್ತಿರುವ ಅಭಿಷೇಕ್ ಎಂಬಾತನ ಜೊತೆ ಪೃಥ್ವಿ ಮದುವೆಯಾಗಿದ್ದಾಳೆ. ಅವನು ಹವ್ಯಕನೂ ಅಲ್ಲ ಬ್ರಾಹ್ಮಣನೂ ಅಲ್ಲ. ಜಾತಿ ಯಾವುದಾದರೇನು ಈಗಾಗಲೇ ಅವಳು ನಮ್ಮನ್ನು ಬಿಟ್ಟು ಹೋಗಿದ್ದು ಆಗಿದೆ. ಆಕೆ ನಮ್ಮನ್ನು ಬಿಟ್ಟು ಹೋಗಿ 20 ದಿಗಳು ಆಯ್ತು, ನಮ್ಮ ನೆನಪು ಕೂಡ ಆಕೆಗೆ ಬಂದಿಲ್ಲ” ಎಂದು ಅವರ ತಂದೆ ಶಿವಪ್ರಸಾದ್ ಆಡಿಯೋ ಮೂಲಕ ಅಳಲು ತೋಡಿಕೊಂಡಿದ್ದರು.
ಅಲ್ಲದೆ ನನ್ನ ಮಗಳ ಮೇಲೆ ವಶೀಕರಣ ವಿದ್ಯೆ ಪ್ರಯೋಗಿಸಿ ಈ ರೀತಿ ಮಾಡಿದ್ದಾರೆ. ಇದರ ಹಿಂದೆ ಮತ್ತು ನನ್ನ ಮಗಳು ಓಡಿ ಹೋಗಲು ಜೀ ಕನ್ನಡದ ಸರಿಗಮಪ ಕಾರ್ಯಕ್ರಮದ ಜ್ಯೂರಿ ನರಹರಿ ದೀಕ್ಷಿತ್ ಅವರೇ ಕಾರಣ. ಪೃಥ್ವಿ ಭಟ್ ಮತ್ತು ಅಭಿಷೇಕ್ ಪ್ರೀತಿ ವಿಚಾರ ಅವರೇ ನನಗೆ ಹೇಳಿದ್ದರು. ನಾನು ಪೃಥ್ವಿಯನ್ನು ಕೇಳಿದಾಗ, ನೀವು ತೋರಿಸಿದ ಹುಡುಗನನ್ನೇ ಮದುವೆ ಆಗುತ್ತೇನೆ ಅಂತ ದೇವರ ಮೇಲೆ ಪ್ರಮಾಣ ಮಾಡಿದ್ದಳು. ನರಹರಿ ದೀಕ್ಷಿತ್ ಒಮ್ಮೆ ನಮ್ಮ ಮನೆಗೆ ಬಂದು ಹೋದ ಮೇಲೆ ಅವಳ ವರ್ತನೆಯಲ್ಲಿ ತುಂಬಾ ಬದಲಾವಣೆ ಆಗಿತ್ತು. ವಶೀಕರಣಕ್ಕೆ ಒಳಗಾದಂತೆ ಆಗಿದ್ದಳು” ಎಂದಿದ್ದರು.
“27ನೇ ತಾರೀಖು ಒಂದು ರೆಕಾರ್ಡಿಂಗ್ ಇದೆ ಅಂತ ನಾನೇ ಅವಳನ್ನು ಸ್ಟುಡಿಯೋಗೆ ಡ್ರಾಪ್ ಮಾಡಿ ಬಂದಿದ್ದೆ. ಮಧ್ಯಾಹ್ನದ ಹೊತ್ತಿಗೆ ಸ್ಟೇಷನ್ನಿಂದ, ʻನಿಮ್ಮ ಮಗಳು ಅಭಿಷೇಕ್ ಎಂಬುವವರ ಜೊತೆಗೆ ಮದುವೆಯಾಗಿ ಇಲ್ಲಿಗೆ ಬಂದಿದ್ದಾಳೆ ನಿಮ್ಮ ಮನೆಗೆ ಬರುತ್ತಾರಂತೆʼ ಎಂದರು. ನಮಗೆ ಮೋಸ ಮಾಡಿ ಹೋಗಿದ್ದಾಳೆ ಮನೆಗೆ ಬರೋದು ಬೇಡ ಅಂತ ನಾನು ಹೇಳಿದ್ದೆ. ಒಂದೆರಡು ಬಾರಿ ಸಾರಿ ಎಂದು ಪೃಥ್ವಿ ಫೋನ್ ಮಾಡಿದ್ದಳು. ಆ ನಂತರ ಇವರಿಗೆ ಧಾರೆ ಎರೆದಿದ್ದು ನರಹರಿ ದೀಕ್ಷಿತ್ ಅನ್ನೋ ವಿಚಾರ ಗೊತ್ತಾಯ್ತು. ನಮ್ಮ ಮಗಳಿಗೆ ಧಾರೆ ಎರೆದು ಕೊಡುವ ಅವಕಾಶವನ್ನೇ ಕಿತ್ತುಕೊಂಡರು” ಎಂದು ಆಡಿಯೋ ಮೂಲಕ ಪೃಥ್ವಿ ಭಟ್ ತಂದೆ ಶಿವಪ್ರಸಾದ್ ಅವರು ಆರೋಪಿಸಿದ್ದರು.
ಇದರ ಬೆನ್ನಲ್ಲೇ ಪೃಥ್ವಿ ಭಟ್ ಸ್ಪಷ್ಟನೆ ಕೊಟ್ಟಿದ್ದಾರೆ.