ನವದೆಹಲಿ: ವಕ್ಫ್ ತಿದ್ದುಪಡಿ ಕಾಯ್ದೆ 2025ಕ್ಕೆ ಸಂಪೂರ್ಣ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಆದರೆ ಕೆಲವು ಸೆಕ್ಷನ್ಗಳಿಗೆ ಮಾತ್ರ ತಡೆ ನೀಡಿ ಕೇಂದ್ರ ಸರ್ಕಾರ, ಅರ್ಜಿದಾರರು, ವಕ್ಫ್ ಬೋರ್ಡ್ಗೆ ಏಳು ದಿನಗಳಲ್ಲಿ ಅಭಿಪ್ರಾಯ ತಿಳಿಸಲು ಸೂಚನೆ ನೀಡಿದೆ. ಅಲ್ಲದೆ ತನ್ನ ಪ್ರಕ್ರಿಯೆಗಳನ್ನು ತಿಳಿಸಲು ಸುಪ್ರೀಂ ವಕ್ಫ್ ಬೋರ್ಡ್ಗಳು, ಕೇಂದ್ರ ಸರ್ಕಾರ ಹಾಗು ಅರ್ಜಿದಾರರಿಗೆ ಏಳು ದಿನಗಳಲ್ಲಿ ತಿಳಿಸುವಂತೆ ಸೂಚನೆ ನೀಡಿ ಮುಂದಿನ ವಿಚಾರಣೆಯನ್ನು ಮೇ 5, ಮಧ್ಯಾಹ್ನ 2 ಗಂಟೆಗೆ ನಿಗದಿಪಡಿಸಿದೆ.
ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸುವ ಅರ್ಜಿಗಳ ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್ , ವಕ್ಫ್ ತಿದ್ದುಪಡಿ ಕಾಯ್ದೆಗೆ ಸಂಪೂರ್ಣ ತಡೆ ನೀಡಲು ನಕಾರ ಮಾಡಿದ್ದು,ವಕ್ಫ್ ಆಸ್ತಿಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಅಥವಾ ಸ್ವರೂಪ ಬದಲಾವಣೆ ಮಾಡುವಂತಿಲ್ಲ ಮತ್ತು ವಕ್ಫ್ ಬೋರ್ಡ್ ಹೊಸ ನೇಮಕಾತಿ ಮಾಡುವಂತಿಲ್ಲ ಎಂದು ಹೇಳಿದೆ.
ಇದೇ ವೇಳೆ ಮುಸ್ಲಿಮರನ್ನು ಹಿಂದೂ ಧಾರ್ಮಿಕ ಟ್ರಸ್ಟ್ಗಳ ಭಾಗವಾಗಲು ಅನುಮತಿಸಲಾಗುತ್ತದೆಯೇ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಕೇಳಿದೆ. ಜೊತೆಗೆ ಕಾನೂನು ಜಾರಿಗೆ ಬಂದ ನಂತರದ ಸಂಭಾವ್ಯ ಹಿಂಸಾಚಾರದ ಬಗ್ಗೆಯೂ ಸುಪ್ರೀಂ ಕಳವಳ ವ್ಯಕ್ತಪಡಿಸಿತು ಮತ್ತು ಈ ರೀತಿಯ ಸೂಕ್ಷ್ಮ ವಿಷಯಗಳನ್ನು ಕೈಗೆತ್ತಿಕೊಂಡಾಗ ತೊಂದರೆಯಾಗುತ್ತದೆ ಎಂದು ಹೇಳಿತು. ಮುಂದಿನ ವಿಚಾರಣೆಯಲ್ಲಿ ಐದು ಅರ್ಜಿದಾರರ ವಾದ ಆಲಿಸಲಿದ್ದೇವೆ. ಐದು ಅರ್ಜಿದಾರರು ಯಾರು ನೀವೆ ಆಯ್ಕೆ ಮಾಡಿ ಎಂದ ಸುಪ್ರೀಂ ಕೋರ್ಟ್ ಅರ್ಜಿದಾರರಿಗೆ ಆಯ್ಕೆಯನ್ನು ಬಿಟ್ಟಿದೆ.
ಈ ಮಸೂದೆಯನ್ನು ಏಪ್ರಿಲ್ 3, 2025 ರಂದು ಲೋಕಸಭೆಯಲ್ಲಿ ಅಂಗೀಕರಿಸಲಾಯಿತು. 288 ಸದಸ್ಯರು ಇದಕ್ಕೆ ಬೆಂಬಲ ಸೂಚಿಸಿದ್ದರು. ಮತ್ತು 232 ಸದಸ್ಯರು ಇದಕ್ಕೆ ವಿರೋಧ ವ್ಯಕ್ತಪಡಿಸಿ ಮತ ಚಲಾಯಿಸಿದರು. ಹಾಗೂ ಏಪ್ರಿಲ್ 4, 2025 ರಂದು ರಾಜ್ಯಸಭೆಯಲ್ಲಿ 128 ಸದಸ್ಯರು ಪರವಾಗಿ ಮತ್ತು 95 ಸದಸ್ಯರು ವಿರುದ್ಧವಾಗಿ ಮತ ಚಲಾಯಿಸಿದರು.