12000 ರೂ. ಮೌಲ್ಯದ ಮೊಬೈಲ್‌ ಕದ್ದ ಅಪರಾಧಿಗೆ ಒಟ್ಟು 5 ವರ್ಷ ಶಿಕ್ಷೆ, ಒಟ್ಟು 10000 ರೂ. ದಂಡ

ಪುತ್ತೂರು: ಮೂರು ವರ್ಷಗಳ ಹಿಂದೆ ಕೆಯ್ಯೂರಿನಲ್ಲಿ ನಡೆದಿದ್ದ ಮೊಬೈಲ್ ಕಳವು ಆರೋಪ ಸಾಬೀತಾದ ಹಿನ್ನೆಲೆ ಅಪರಾಧಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ. ಕಾಸರಗೋಡು ಎಣ್ಮಕಜೆ ಗ್ರಾಮದ ಅಡ್ಯನಡ್ಕ ನಿವಾಸಿ ಉಮೈದ್(24ವ)ಶಿಕ್ಷೆಗೊಳಗಾದ ಅಪರಾಧಿ.
ಈತ ಕಲಂ 454 ಐಪಿಸಿಯಡಿಯ ಅಪರಾಧಕ್ಕಾಗಿ 3 ವರ್ಷ ಶಿಕ್ಷೆ ಮತ್ತು 5000 ರೂ.ದಂಡ. ದಂಡ ತೆರಲು ತಪ್ಪಿದಲ್ಲಿ ಮತ್ತೆ 3 ತಿಂಗಳ ಸಾದಾ ಶಿಕ್ಷೆ. ಕಲಂ 380 ಐಪಿಸಿಯಡಿಯ ಅಪರಾಧಕ್ಕಾಗಿ 2 ವರ್ಷ ಶಿಕ್ಷೆ ಮತ್ತು 5000 ರೂ.ದಂಡ.ದಂಡ ಪಾವತಿಸಲು ವಿಫಲನಾದರೆ 3 ತಿಂಗಳ ಸಾದಾ ಶಿಕ್ಷೆ ಅನುಭವಿಸುವಂತೆ ಆದೇಶಿಸಲಾಗಿದೆ.


2022ರ ಏ.24ರಂದು ಸಂಜೆ ಕೆಯ್ಯೂರು ಗ್ರಾಮದ ಎಸ್.ಎಂ.ಮೊಹಮ್ಮದ್ ಎಂಬವರ ಮನೆಯೊಳಗಿನ ಶೋಕೇಸ್‌ನಲ್ಲಿದ್ದ, ಅಂದಾಜು 12 ಸಾವಿರ ರೂ.ಮೌಲ್ಯದ ರೆಡ್ಮಿ ಮೊಬೈಲ್ ಫೋನ್ ಕಳವಾಗಿತ್ತು. ಸಂಪ್ಯ ಪೊಲೀಸ್ ಠಾಣೆಯ ಎ.ಎಸ್.ಐ ನಾರಾಯಣ ಗೌಡರು ರಸ್ತೆ ಗಸ್ತು ನಿರತರಾಗಿದ್ದ ಸಂದರ್ಭದಲ್ಲಿ ಆರ್ಯಾಪು ಗ್ರಾಮದ ಸಂಟ್ಯಾರು ಎಂಬಲ್ಲಿ ಹೆದ್ದಾರಿ ಬದಿಯಲ್ಲಿ ಸ್ಕೂಟರ್ ಬಳಿ ನಿಂತು ಅನುಮಾನಾಸ್ದವಾಗಿ ವರ್ತಿಸುತ್ತಿದ್ದ ಯುವಕನನ್ನು ವಿಚಾರಿಸಿದ್ದರು. ಆಗ ಆತನ ಕಿಸೆಯಲ್ಲಿ ಐದು ಟಚ್ ಸ್ಕ್ರೀನ್ ಮೊಬೈಲ್ ಫೋನ್‌ಗಳಿದ್ದವು. ಮೊಬೈಲ್ ಫೋನ್‌ಗಳನ್ನು ಕಳವು ಮಾಡಿರುವುದಾಗಿ ಆತ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದ. ಆತನ ಬಳಿಯಿದ್ದ ಸ್ಕೂಟರ್‌ನ ದಾಖಲೆ ಪತ್ರವೂ ಇರಲಿಲ್ಲ.
ಮೊಬೈಲ್ ಫೋನ್‌ಗಳನ್ನು ಮಾಡಾವು ಮತ್ತು ಬೆಳ್ಳಾರೆ ಕಡೆಯಿಂದ ಮನೆಗಳಿಂದ ಕಳವು ಮಾಡಿರುವುದಾಗಿ ಆತ ತಿಳಿಸಿದ್ದ. ಸ್ಕೂಟರ್ ಹಾಗೂ ಮೊಬೈಲ್ ಫೋನ್‌ಗಳ ಸಹಿತ ರೂ. 85 ಸಾವಿರ ಮೌಲ್ಯದ ಸೊತ್ತುಗಳನ್ನು ಆತನಿಂದ ವಶಕ್ಕೆ ಪಡೆದ ಪೊಲೀಸರು ಕೆಯ್ಯೂರಿನ ಎಸ್.ಎಂ.ಮೊಹಮ್ಮದ್ ಅವರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣದ ದೂರು ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದರು

.ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಆಗಿನ ಎಸ್.ಐ.ಆಗಿದ್ದ, ಪ್ರಸ್ತುತ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಎಸ್.ಐ.ಆಗಿರುವ ಉದಯರವಿ ಎಂ.ವೈ. ಉಮೈದ್‌ ವಿರುದ್ಧ ಕಲಂ 454,980 ಐಪಿಸಿಯಡಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಸಿವಿಲ್ ನ್ಯಾಯಾಧಿಶರು ಮತ್ತು ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಽಶ ದೇವರಾಜ್ ವೈ.ಎಚ್.ಅವರು ಆರೋಪಿ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿದ್ದಾರೆ .ಪ್ರಕರಣದಲ್ಲಿ ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕಿ ಚೇತನಾದೇವಿ ಬೋಳೂರು ವಾದಿಸಿದ್ದರು.

error: Content is protected !!