
ಕೆ.ಆರ್.ನಗರ: ಜವರೇಗೌಡನ ಕೊಪ್ಪಲು ಗ್ರಾಮದಲ್ಲಿ ಎಳೆಯ ಕಂದಮ್ಮಗಳನ್ನು ಕೊಂದ ಬಳಿಕ ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದು ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅನಿಲ್ ಮತ್ತು ಪ್ರಿಯಾಂಕ ದಂಪತಿಯ ಪುತ್ರಿಯರಾದ ಧೃತಿ (3) ಮತ್ತು ದಿಶಾ (1.6) ಮೃತರು. ಪ್ರಿಯಾಂಕ(26) ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಕ್ಕಳನ್ನು ಕೊಲೆಗೈದ ಬಳಿಕ ಪ್ರಿಯಾಂಕ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅದೇ ವೇಳೆಗೆ ಮನೆಗೆ ಬಂದ ಪತಿ ಅನಿಲ್ ನೇಣಿನ ಕುಣಿಕೆಯಲ್ಲಿದ್ದ ಪತ್ನಿಯನ್ನು ರಕ್ಷಿಸಿ ಕೆ.ಆರ್.ನಗರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೆ.ಆರ್.ನಗರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಶವಗಳ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದೆ. ಪಿರಿಯಾಪಟ್ಟಣ ತಾಲ್ಲೂಕಿನ ವಡ್ಡರಹಳ್ಳಿ ಗ್ರಾಮದವರಾದ ಪ್ರಿಯಾಂಕ ಅವರನ್ನು 8 ವರ್ಷಗಳ ಹಿಂದೆ ಅನಿಲ್ ವಿವಾಹವಾಗಿದ್ದರು. ಈ ಅಮಾನುಷ ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ.
