ಮೈಸೂರು: ತಮಿಳುನಾಡಿನಲ್ಲಿ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ʻಸನಾತನ ಧರ್ಮ’ವನ್ನು ನಾಶ ಮಾಡಬೇಕು ಎಂದು ಹೇಳಿದ ಬೆನ್ನಲ್ಲೇ, ಅವರ ಹೆತ್ತ ತಾಯಿ ಕರ್ನಾಟಕದ ಶಕ್ತಿಪೀಠಗಳಿಗೆ ಓಡೋಡಿ ಬಂದು ವಿಶೇಷ ಪೂಜೆ ಸಲ್ಲಿಸಿರುವುದು ಈಗ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ!

ಹೌದು, ತಮಿಳುನಾಡಿನಲ್ಲಿ ನೂತನವಾಗಿ ನಟ ವಿಜಯ್ ಸರ್ಕಾರ ಆಡಳಿತಕ್ಕೆ ಬಂದ ಕೇವಲ ಎರಡೇ ದಿನದಲ್ಲಿ ಮಾಜಿ ಸಿಎಂ ಪುತ್ರ ಉದಯನಿಧಿ ಸ್ಟಾಲಿನ್, “ಸನಾತನ ಧರ್ಮವು ಜನರನ್ನು ವಿಭಜಿಸುತ್ತದೆ, ಇದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು” ಎಂದು ಗುಡುಗಿದ್ದರು. ಇದಕ್ಕೂ ಮುನ್ನ ನಡೆದ ಸಮಾವೇಶವೊಂದರಲ್ಲೂ ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ, ಸೊಳ್ಳೆ ಮತ್ತು ಕೊರೊನಾಗೆ ಹೋಲಿಸಿ, ಸಮಾಜದಿಂದ ಇದನ್ನು ಕಿತ್ತೊಗೆಯಬೇಕು ಎಂದು ವಿಷ ಕಾರಿದ್ದರು. ಉದಯನಿಧಿ ಅವರ ಈ ವಿವಾದಾತ್ಮಕ ಹಾಗೂ ನಾಸ್ತಿಕ ನಿಲುವಿಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ


ಮಗನ ಪಾಪ ತೊಳೆದರೇ ತಾಯಿ?
ಒಂದೆಡೆ ಮಗ ಸನಾತನ ಧರ್ಮದ ವಿರುದ್ಧ ಯುದ್ಧ ಸಾರಿದ್ದರೆ, ಇತ್ತ ತಮಿಳುನಾಡು ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ಪತ್ನಿ ಹಾಗೂ ಅಪಾರ ದೈವಭಕ್ತೆಯಾಗಿರುವ ದುರ್ಗಾ ಸ್ಟಾಲಿನ್ ಅವರು ಕರ್ನಾಟಕದ ಪ್ರಸಿದ್ಧ ದೇವಾಲಯಗಳತ್ತ ಮುಖ ಮಾಡಿದ್ದಾರೆ. ಮೈಸೂರಿನ ಸಾಂಸ್ಕೃತಿಕ ಪರಂಪರೆಯ ಶಕ್ತಿ ದೇವತೆ ಚಾಮುಂಡಿಬೆಟ್ಟ ಹಾಗೂ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಪ್ರಸಿದ್ಧ ನಿಮಿಷಾಂಬಾ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದ್ದಾರೆ.
ಕೇವಲ ದರ್ಶನ ಪಡೆಯುವುದಷ್ಟೇ ಅಲ್ಲದೆ, ದೇವಿಗೆ ಮಡಿಲು ತುಂಬಿಸುವ ʻಉಡಿಸೇವೆ’ ನಡೆಸಿ, ಬಳೆ ಹಾಗೂ ದುಬಾರಿ ರೇಷ್ಮೆ ಸೀರೆಯ ಉಡಿಯನ್ನು ದೇವಿಗೆ ಅರ್ಪಿಸಿದ್ದಾರೆ. ಮಗ ಹಿಂದೂ ಧರ್ಮದ ವಿರುದ್ಧ ತೀಕ್ಷ್ಣ ಹೇಳಿಕೆ ನೀಡಿದ ಕೆಲವೇ ದಿನಗಳಲ್ಲಿ ತಾಯಿ ಹೀಗೆ ಹಿಂದೂ ದೇವತೆಗಳ ಪಾದಕ್ಕೆ ಶರಣಾಗಿರುವುದು, “ಮಗ ಮಾಡಿದ ಪಾಪಕ್ಕೆ ತಾಯಿ ಪ್ರಾಯಶ್ಚಿತ್ತ ಮಾಡಿಕೊಳ್ಳುತ್ತಿದ್ದಾರೆಯೇ?” ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಖಾರವಾಗಿ ಪ್ರಶ್ನಿಸುವಂತೆ ಮಾಡಿದೆ.
ಜೆಡಿಎಸ್ ಶಾಸಕ ಜಿಟಿಡಿ ಮನೆಗೆ ಅಚ್ಚರಿ ಭೇಟಿ!
ಧಾರ್ಮಿಕ ಕಾರ್ಯಕ್ರಮಗಳನ್ನು ಮುಗಿಸಿದ ದುರ್ಗಾ ಸ್ಟಾಲಿನ್ ಅವರು ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ (ಜಿಟಿಡಿ) ಅವರ ನಿವಾಸಕ್ಕೆ ಅಚ್ಚರಿಯ ಭೇಟಿ ನೀಡಿದ್ದಾರೆ. ಈ ವೇಳೆ ಜಿ.ಟಿ. ದೇವೇಗೌಡ ದಂಪತಿಯ ಆಶೀರ್ವಾದವನ್ನು ದುರ್ಗಾ ಸ್ಟಾಲಿನ್ ಪಡೆದಿದ್ದು, ಈ ಭೇಟಿಯ ವಿಡಿಯೋ ಮತ್ತು ಫೋಟೋಗಳು ಸದ್ಯ ಇಂಟರ್ನೆಟ್ನಲ್ಲಿ ಭಾರಿ ವೈರಲ್ ಆಗುತ್ತಿವೆ.