
ನವದೆಹಲಿ: ಮೇ 3ರಂದು ನಡೆದಿದ್ದ ನೀಟ್ ಪರೀಕ್ಷೆ ರದ್ದುಗೊಂಡ ಹಿನ್ನೆಲೆ ಆಘಾತಕ್ಕೊಳಗಾಗಿ ನಾಲ್ವರು ನೀಟ್ ಆಕಾಂಕ್ಷಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.

ರಾಜಸ್ಥಾನ ಮೂಲದ ಪ್ರದೀಪ್ ಮೇಘವಾಲ್, ಉತ್ತರ ಪ್ರದೇಶ ರಿತಿಕ್ ಮಿಶ್ರಾ, ದೆಹಲಿಯ ಆಜಾದ್ಪುರದ ಅನಿಷ್ಕಾ ಪಾಂಡೆ ಹಾಗೂ ದಕ್ಷಿಣ ಗೋವಾದ 17 ವರ್ಷದ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೃತ ಪ್ರದೀಪ್ ಕಳೆದ ಮೂರು ವರ್ಷಗಳಿಂದ ತನ್ನ ಇಬ್ಬರು ಸಹೋದರಿಯರೊಂದಿಗೆ ಸೀಕರ್ನಲ್ಲಿ ವಾಸಿಸುತ್ತಿದ್ದು, ಖಾಸಗಿ ಕೋಚಿಂಗ್ ಸಂಸ್ಥೆಯೊಂದರಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ. ಈ ಬಾರಿ ಪರೀಕ್ಷೆಯನ್ನು ಉತ್ತಮವಾಗಿ ಬರೆದಿದ್ದು, ಸರ್ಕಾರಿ ವೈದ್ಯಕೀಯ ಸೀಟು ಸಿಗುವುದು ಖಚಿತ ಎಂಬ ಭರವಸೆಯಲ್ಲಿ ಇದ್ದಿದ್ದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ಆದರೆ ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಪರೀಕ್ಷೆ ರದ್ದಾಗಿದ್ದಕ್ಕೆ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.
