
ಕೋಲ್ಕತ್ತಾ: ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರಕಾರ 1950ರ ಬಂಗಾಳ ಕಾನೂನು ಮತ್ತು 2018ರ ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ಉಲ್ಲೇಖಿಸಿ ಕಡ್ಡಾಯ ಫಿಟ್ನೆಸ್ ಪ್ರಮಾಣಪತ್ರವಿಲ್ಲದೆ ಯಾವುದೇ ದನ ಅಥವಾ ಎಮ್ಮೆಗಳ ವಧೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಸೂಚನೆಯನ್ನು ಹೊರಡಿಸಿದೆ.

ಅಧಿಸೂಚನೆಯ ಪ್ರಕಾರ, ಎಮ್ಮೆ, ಕರುಗಳು, ಹಸುಗಳು, ಹಾಗೂ ಬಂಜೆ ಎಮ್ಮೆಗಳು ಸೇರಿದಂತೆ ಯಾವುದೇ ಪ್ರಾಣಿಯನ್ನು ವಧೆ ಮಾಡಬೇಕಾದರೆ ಅರ್ಹ ಪ್ರಮಾಣಪತ್ರವಿರಬೇಕು. ಆ ಪ್ರಾಣಿ 14 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನದ್ದಾಗಿದ್ದು ಸಂತಾನೋತ್ಪತ್ತಿ ಸಾಧ್ಯವಿಲ್ಲ ಮತ್ತು ಗುಣಪಡಿಸಲಾಗದ ಕಾಯಿಲೆಯಿಂದಾಗಿ ಶಾಶ್ವತವಾಗಿ ಅಂಗವಿಕಲವಾಗಿದೆ ಎಂದು ದೃಢಪಡಿಸಬೇಕು.

ಈ ಕುರಿತು ಪುರಸಭೆಯ ಅಧ್ಯಕ್ಷರು, ಪಂಚಾಯತ್ ಸಮಿತಿಯ ಮುಖ್ಯಸ್ಥರು ಮತ್ತು ಸರಕಾರಿ ಪಶುವೈದ್ಯರು ಜಂಟಿಯಾಗಿ ಪ್ರಮಾಣ ಪತ್ರವನ್ನು ನೀಡಬೇಕು. ಪತ್ರದಲ್ಲಿ ಕಾರಣಗಳನ್ನು ಲಿಖಿತವಾಗಿ ದಾಖಲಿಸಬೇಕು. ಪ್ರಮಾಣಪತ್ರವನ್ನು ನಿರಾಕರಿಸಿದರೆ, ಈ ಕುರಿತು 15 ದಿನಗಳಲ್ಲಿ ರಾಜ್ಯ ಸರಕಾರಕ್ಕೆ ಮೇಲ್ಮನವಿ ಸಲ್ಲಿಸಬಹುದು.

ವಧೆಗಾಗಿ ಅನುಮತಿಸಿದ ಪ್ರಾಣಿಗಳನ್ನು ಪುರಸಭೆಯ ಕಸಾಯಿಖಾನೆಗಳಲ್ಲಿ ಅಥವಾ ಸ್ಥಳೀಯ ಆಡಳಿತ ಗುರುತಿಸಿದ ಸ್ಥಳಗಳಲ್ಲಿ ಮಾತ್ರ ವಧೆ ಮಾಡಬಹುದು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ಯಾವುದೇ ತೆರೆದ ಸಾರ್ವಜನಿಕ ಸ್ಥಳದಲ್ಲಿ ವಧೆಯನ್ನು ನಿಷೇಧಿಸಲಾಗಿದೆ.
ಪಶ್ಚಿಮ ಬಂಗಾಳ ಪ್ರಾಣಿ ವಧೆ ನಿಯಂತ್ರಣ ಕಾಯ್ದೆಯ ಪ್ರಕಾರ, 1950 ರ ಉಲ್ಲಂಘನೆಗೆ ಆರು ತಿಂಗಳು ಜೈಲು ಶಿಕ್ಷೆ, 1,000 ವರೆಗೆ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.