15ರ ಬಾಲಕನಿಗೆ 26 ವರ್ಷದ ಮಹಿಳೆಯೊಂದಿಗೆ ಪ್ರೀತಿ; ಮನೆಯವರು ಅಡ್ಡಿಪಡಿಸಿದ್ದಕ್ಕೆ ಬಾಲಕ ಆತ್ಮಹತ್ಯೆ

ರಾಮನಗರ: 15 ವರ್ಷದ ಬಾಲಕ ಹಾಗೂ 26 ವರ್ಷದ ಮಹಿಳೆಯ ಪ್ರೀತಿಗೆ ಮನೆಯವರು ಅಡ್ಡಿಪಡಿಸಿದ್ದಕ್ಕೆ ಬಾಲಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚನ್ನಪಟ್ಟಣ ನಗರದ ರಾಜಾಕೆಂಪೇಗೌಡ ಬಡಾವಣೆಯಲ್ಲಿ ನಡೆದಿದೆ.

ಬಿಡದಿ ಮೂಲದ ಬಾಲಕ ಮೃತ ದುರ್ದೈವಿ.

ಬಿಡದಿ ಮೂಲದ ಶೋಭಾ ಎಂಬ ಯುವತಿ ಜೊತೆ ಬಾಲಕ ಪ್ರೀತಿಯಲ್ಲಿ ಬಿದ್ದಿದ್ದ. ಈ ಬಗ್ಗೆ ಪೋಷಕರಿಗೆ ವಿಚಾರ ಗೊತ್ತಾಗಿದ್ದು, ಬಾಲಕನಿಗೆ ಬೈದು ಬುದ್ಧಿ ಹೇಳಿದ್ದರು. ನಿಮ್ಮಿಬ್ಬರಿಗೂ ವಯಸ್ಸಿನ ಅಂತರ ಇದೆ, ಇದನ್ನ ಇಲ್ಲಿಗೆ ನಿಲ್ಲಿಸುವಂತೆ ತಾಕೀತು ಮಾಡಿದ್ದರು. ಆದರೂ ಬಾಲಕ ಹಾಗೂ ಯುವತಿ ವಾಟ್ಸಪ್, ಇನ್‌ಸ್ಟಾಗ್ರಾಂ ಮೂಲಕ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಇದಾದ ಬಳಿಕ ಮನೆ ಬಿಟ್ಟು ಬಂದಿದ್ದ ಬಾಲಕ ಚನ್ನಪಟ್ಟಣದ ತನ್ನ ಸ್ನೇಹಿತನ ಮನೆಯಲ್ಲಿದ್ದ.

ಇದೇ ವಿಚಾರಕ್ಕೆ ಶೋಭಾ ಜೊತೆ ಗಲಾಟೆ ಮಾಡಿಕೊಂಡು ಏ.29ರಂದು ವಿಷ ಸೇವಿಸಿ ಬಾಲಕ ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ ಸ್ನೇಹಿತರು ಚನ್ನಪಟ್ಟಣ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೇ.4ರಂದು ಬಾಲಕ ಸಾವನ್ನಪ್ಪಿದ್ದಾನೆ.

ಈ ಹಿನ್ನೆಲೆ ಮಗನ ಸಾವಿಗೆ ಯುವತಿಯೇ ಕಾರಣ ಎಂದು ಬಾಲಕನ ಪೋಷಕರು ದೂರು ನೀಡಿದ್ದು, ಈ ಸಂಬಂಧ ಶೋಭಾ ಎಂಬ ಯುವತಿ ವಿರುದ್ಧ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

error: Content is protected !!