ರಕ್ತಸಿಕ್ತವಾಯ್ತು ಬಂಗಾಳ: ನಾಲ್ಕು ಬಲಿ, ರಾಜ್ಯಾದ್ಯಂತ ಹೈ ಅಲರ್ಟ್!

ಕೋಲ್ಕತ್ತಾ: ಬಂಗಾಳದ ಅಖಾಡದಲ್ಲಿ ರಾಜಕೀಯ ಸಮರ ಈಗ ರಣರಂಗವಾಗಿ ಮಾರ್ಪಟ್ಟಿದೆ. ವಿಧಾನಸಭಾ ಚುನಾವಣಾ ಫಲಿತಾಂಶದ ಬೆನ್ನಲ್ಲೇ ರಾಜ್ಯದ ವಿವಿಧೆಡೆ ಭುಗಿಲೆದ್ದಿರುವ ಹಿಂಸಾಚಾರಕ್ಕೆ ಈಗಾಗಲೇ ನಾಲ್ವರು ಬಲಿಯಾಗಿದ್ದು, ಇಡೀ ಪಶ್ಚಿಮ ಬಂಗಾಳ ಬೆಂಕಿಯ ಉಂಡೆಯಂತಾಗಿದೆ. ಗೆಲುವಿನ ಅಬ್ಬರದಲ್ಲಿರುವ ಬಿಜೆಪಿ ಮತ್ತು ಸೋಲಿನ ಆಘಾತದಲ್ಲಿರುವ ಟಿಎಂಸಿ ಕಾರ್ಯಕರ್ತರ ನಡುವಿನ ಬೀದಿ ಕಾಳಗ ಹತೋಟಿ ಮೀರುತ್ತಿದ್ದು, ರಾಜ್ಯಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ.

Flames billow at the TMC office following the West Bengal Assembly election result, in Asansol, Tuesday, May 5, 2026. Incidents of arson and vandalism at offices of the Trinamool Congress were reported across the state.

ಫಲಿತಾಂಶ ಪ್ರಕಟವಾದ ಕೆಲವೇ ಗಂಟೆಗಳಲ್ಲಿ ಹುಗ್ಲಿ, ಹೌರಾ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಹುಗ್ಲಿಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ನಡೆದ ಹಲ್ಲೆಯಲ್ಲಿ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದಕ್ಕೆ ಪ್ರತಿಕಾರವಾಗಿ ಬಿಜೆಪಿ ಬೆಂಬಲಿಗರು ಸ್ಥಳೀಯ ಟಿಎಂಸಿ ಕಚೇರಿಗೆ ಬೆಂಕಿ ಹಚ್ಚಿದ್ದಾರೆ ಎಂದು ವರದಿಯಾಗಿದೆ. ರಾಜಧಾನಿ ಕೋಲ್ಕತ್ತಾ ಹೃದಯಭಾಗದಲ್ಲೂ ಬಾಂಬ್ ಸದ್ದು ಕೇಳಿಬಂದಿದ್ದು, ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆದ ಹಿನ್ನೆಲೆಯಲ್ಲಿ ಇಡೀ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಮಮತಾ ಬ್ಯಾನರ್ಜಿ ಆರೋಪ: ಆಕ್ರೋಶಕ್ಕೆ ತುಪ್ಪ ಸುರಿದ ʻಅಕ್ರಮ’ದ ಮಾತು
ಚುನಾವಣಾ ಆಯೋಗವು ಸುಮಾರು 100 ಕ್ಷೇತ್ರಗಳಲ್ಲಿ ಬಿಜೆಪಿ ಪರವಾಗಿ ಅಕ್ರಮ ಎಸಗಿದೆ ಎಂದು ಮಮತಾ ಬ್ಯಾನರ್ಜಿ ಗಂಭೀರ ಆರೋಪ ಮಾಡಿದ್ದಾರೆ. “ಇದು ಪ್ರಜಾಪ್ರಭುತ್ವದ ಕೊಲೆ” ಎಂಬ ಅವರ ಹೇಳಿಕೆಯು ಕೆರಳಿದ್ದ ಟಿಎಂಸಿ ಕಾರ್ಯಕರ್ತರನ್ನು ಮತ್ತಷ್ಟು ಉದ್ರೇಕಿಸಿದೆ. ಫಲಿತಾಂಶದ ಸಿಂಧುತ್ವವನ್ನೇ ಪ್ರಶ್ನಿಸಿ ದೀದಿ ನ್ಯಾಯಾಲಯದ ಮೆಟ್ಟಿಲೇರಲು ಸಜ್ಜಾಗುತ್ತಿದ್ದಂತೆ, ಇತ್ತ ಬೀದಿಗಳಲ್ಲಿ ಉಭಯ ಪಕ್ಷಗಳ ಬೆಂಬಲಿಗರು ಮಾರಕಾಸ್ತ್ರಗಳೊಂದಿಗೆ ಪರಸ್ಪರ ಮುಖಾಮುಖಿಯಾಗುತ್ತಿದ್ದಾರೆ.

ಹಿಂಸಾಚಾರ ನಿಯಂತ್ರಿಸಲು ಕೇಂದ್ರ ಗೃಹ ಸಚಿವಾಲಯವು ಮಧ್ಯಪ್ರವೇಶಿಸಿದೆ. ಈಗಾಗಲೇ ನಿಯೋಜನೆಗೊಂಡಿರುವ ಸಶಸ್ತ್ರ ಪಡೆಗಳ ಜೊತೆಗೆ ಹೆಚ್ಚುವರಿ ತುಕಡಿಗಳನ್ನು ಸೂಕ್ಷ್ಮ ಪ್ರದೇಶಗಳಿಗೆ ರವಾನಿಸಲಾಗಿದೆ. “ಯಾರೇ ಕಾನೂನನ್ನು ಕೈಗೆತ್ತಿಕೊಂಡರೂ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ” ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಕೇಂದ್ರದಿಂದ ಕಟ್ಟುನಿಟ್ಟಿನ ಆದೇಶ ಬಂದಿದೆ.

ರಾಜ್ಯದ ಗಡಿಗಳನ್ನು ಸೀಲ್ ಮಾಡಲಾಗಿದ್ದು, ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಆದರೂ, ಒಳಗೊಳಗೆ ಹೊಗೆಯಾಡುತ್ತಿರುವ ಸೇಡಿನ ಕಿಚ್ಚು ಯಾವಾಗ ಜ್ವಾಲೆಯಾಗುತ್ತದೋ ಎಂಬ ಆತಂಕದಲ್ಲಿ ಜನಸಾಮಾನ್ಯರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ.

ಸೋಲು-ಗೆಲುವಿನ ನಡುವೆ ಬಲಿಯಾದವರು ಯಾರು?
ಮೃತಪಟ್ಟ ನಾಲ್ವರಲ್ಲಿ ಇಬ್ಬರು ಬಿಜೆಪಿ ಮತ್ತು ಇಬ್ಬರು ಟಿಎಂಸಿ ಕಾರ್ಯಕರ್ತರು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ರಾಜಕೀಯ ನಾಯಕರ ಪ್ರತಿಷ್ಠೆಯ ಹೋರಾಟದಲ್ಲಿ ಸಾಮಾನ್ಯ ಕಾರ್ಯಕರ್ತರು ಬಲಿಯಾಗುತ್ತಿರುವುದು ವಿಷಾದನೀಯ. ಈ ರಕ್ತಪಾತಕ್ಕೆ ಅಂತ್ಯ ಹಾಡಲು ರಾಜ್ಯಪಾಲರು ಇಂದು ಸಂಜೆ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿ ನಾಯಕರ ತುರ್ತು ಸಭೆ ಕರೆದಿದ್ದಾರೆ

error: Content is protected !!