
ಸುರತ್ಕಲ್: ಒಂದು ಕಾಲದಲ್ಲಿ ಯಕ್ಷಗಾನ ಕಲಾವಿದರ ಜೀವನ ಕಷ್ಟದಲ್ಲಿ ತುಂಬಿಕೊಂಡಿತ್ತು. ರಂಗಸ್ಥಳದಲ್ಲಿ ರಾಮ, ಕೃಷ್ಣ, ದೇವೇಂದ್ರ ಪಾತ್ರ ಮಾಡುವ ಪಾತ್ರಧಾರಿಗಳು ವೇಷ ಕಳಚಿ ಬಂದಾಗ ಅವರ ಬದುಕು ಏನೆಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಒಂದು ಕಾಲದಲ್ಲಿ ಕಲಾವಿದರಿಗೆ ಕನಿಷ್ಠ ಗೌರವ ಕೊಡುವ ಸೌಜನ್ಯವೂ ಇರಲಿಲ್ಲ. ಆದರೆ ಪಟ್ಲ ಸತೀಶ್ ಶೆಟ್ಟಿ ಅವರು ಕಲ್ಲಾಡಿ ವಿಠಲ ಶೆಟ್ರ ಮೂಲಕ ಕಟೀಲು ಮೇಳಕ್ಕೆ ಯಾವಾಗ ಬಂದರೋ ಅಂದಿನಿಂದ ಕಲಾವಿದರ ಬದುಕಿನ ಚಿತ್ರಣವೇ ಬದಲಾಯಿತು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಸ್ಥಾಪನೆಯಾದ ಬಳಿಕ ಕಲಾವಿದರ ಜೀವನವೇ ಬದಲಾಯಿತು ಎಂದು ಡಿವೈಎಸ್ ಪಿ, ಪಡ್ರೆ ಧೂಮಾವತಿ ದೈವಸ್ಥಾನದ ಅಧ್ಯಕ್ಷರಾದ ದಿನಕರ ಶೆಟ್ಟಿ ಪಡ್ರೆ ತಿಳಿಸಿದರು.
ಸುರತ್ಕಲ್ ಬಂಟರ ಸಂಘದ ಆವರಣದಲ್ಲಿ ನಡೆದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸುರತ್ಕಲ್ ಘಟಕದ ಷಷ್ಟಮ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಪಟ್ಲ ಫೌಂಡೇಶನ್ ಟ್ರಸ್ಟ್ ಕಲಾ ಸೇವೆ ಮಾಡುವುದರ ಜೊತೆಗೆ ಯಕ್ಷಗಾನ, ನಾಟಕ, ದೈವರಾಧನೆ ಸಹಿತ ಬೇರೆ ಬೇರೆ ಕ್ಷೇತ್ರಗಳಲ್ಲಿರುವ ಮಕ್ಕಳಿಗೂ ವಿದ್ಯಾರ್ಥಿ ವೇತನ ನೀಡುತ್ತಿರುವುದು ಶ್ಲಾಘನೀಯ ಕೆಲಸ. ಪಟ್ಲ ಸತೀಶ್ ಶೆಟ್ಟಿ ಅವರ ಕೆಲಸ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ. ಟ್ರಸ್ಟ್ ಬಹಳಷ್ಟು ಉತ್ತಮ ಕೆಲಸ ಮಾಡುತ್ತಿದೆ. ಫೌಂಡೇಶನ್ ಟ್ರಸ್ಟ್ ಇನ್ನೂ ಎತ್ತರಕ್ಕೆ ಬೆಳಯಲಿ ಎಂದು ಅವರು ತಿಳಿಸಿದರು.

ಸಮಾರಂಭವನ್ನು ಇಡ್ಯಾ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಶಕುಂತಳಾ ರಮಾನಂದ ಭಟ್ ಉದ್ಘಾಟಿಸಿ ಶುಭ ಹಾರೈಸಿದರು.

ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ ಕಲಾವಿದರ ಕಷ್ಟ ನೋಡಲಾರದೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ರಚಿಸಿ ವಿಶ್ವ ಮಾನ್ಯತೆ ಪಡೆಯುವಂತಾಯಿತು. ಯಕ್ಷಧ್ರುವ ಪಟ್ಲ ಫೌಂಡೇಶನ್ ತನ್ನ ಅವಿರತ ಪ್ರಯತ್ನದ ಮೂಲಕ ಯಕ್ಷಗಾನದ ಕೀರ್ತಿಯನ್ನು ವಿಶ್ವದ ನಾನಾ ಮೂಲಗಳಿಗೆ ಹರಡುತ್ತಿದೆ. ಸುರತ್ಕಲ್ ಘಟಕ ಪಟ್ಲ ಫೌಂಡೇಶನ್ ಟ್ರಸ್ಟ್ ನ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿ ಕೈಜೋಡಿಸಿ ಅಚ್ಚು ಕಟ್ಟಾಗಿ ಕೆಲಸ ಮಾಡುತ್ತಿದೆ ಎಂದರು.

ಸಮಾರಂಭದಲ್ಲಿ ಯಕ್ಷಗಾನ ಮದ್ದಳೆಗಾರ ಜಯರಾಮ ಆಚಾರ್ಯ ಚೇಳಾರ್, ಗಿರೀಶ್ ನಾವಡ, ಪೂರ್ಣಿಮಾ ಯತೀಶ್ ರೈ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಉದ್ಯಮಿ ಸಿ ಎ ಸುನೀಲ್ ಭಂಡಾರಿ, ಸುರತ್ಕಲ್ ಯಕ್ಷಮಿತ್ರರು ಸಂಸ್ಥೆಯ ಅಧ್ಯಕ್ಷ ಕೆ ರಾಜೇಶ್ ಕುಮಾರ್ ಮುಂಚೂರು, ಮನಪಾ ಮಾಜಿ ಸದಸ್ಯ ಪ್ರಶಾಂತ್ ಮೂಡಾಯಿಕೊಡಿ, ಕೇಸರಿ ಮನೋಹರ್ ಶೆಟ್ಟಿ ಸೂರಿಂಜೆ, ಮುಕ್ಕ ಸತ್ಯಧರ್ಮ ದೇವಿ ದೇವಸ್ಥಾನದ ಅಧ್ಯಕ್ಷ ರವಿರಾಜ್ ಸುವರ್ಣ, ಕೇಂದ್ರೀಯ ಘಟಕದ ಸಂಘಟನಾ ಕಾರ್ಯದರ್ಶಿ ಪ್ರದೀಪ್ ಆಳ್ವ ಕದ್ರಿ, ಮುಂಬೈ ಸಂಚಾಲಕ ಕರ್ನೂರು ಮೋಹನ್ ರೈ, ಬಾಳ ಜಗನ್ನಾಥ ಶೆಟ್ಟಿ, ಸುರತ್ಕಲ್ ಘಟಕದ ಗೌರವಾಧ್ಯಕ್ಷ ಸುಧಾಕರ ಎಸ್ ಪೂಂಜ, ಅಧ್ಯಕ್ಷ ಲೀಲಾಧರ ಶೆಟ್ಟಿ, ಉಪಾಧ್ಯಕ್ಷರಾದ ರಮೇಶ್ ಭಟ್ ಎಸ್ ಜಿ, ಸಹನಾ ರಾಜೇಶ್ ರೈ, ಪ್ರಧಾನ ಕಾರ್ಯದರ್ಶಿ ಬಾಳ ಗಂಗಾಧರ ಪೂಜಾರಿ ಚೇಳಾರ್ ಕೋಶಾಧಿಕಾರಿ ರಾಕೇಶ್ ಹೊಸಬೆಟ್ಟು, ಸಂಚಾಲಕ ನಾಗರಾಜ ಕಡಂಬೋಡಿ, ಸಹ ಸಂಚಾಲಕಿ ಡಾ ಸುಧಾ ಚಂದ್ರಶೇಖರ ಶೆಟ್ಟಿ ಹಾಗೂ ಟ್ರಸ್ಟಿಗಳು ಉಪಸ್ಥಿತರಿದ್ದರು.

ಯಕ್ಷಾಶ್ರಯ ಯೋಜನೆಗೆ ಸುರತ್ಕಲ್ ಘಟಕದಿಂದ ಮನೆ ನಿರ್ಮಾಣಕ್ಕೆ ಐದು ಲಕ್ಷ ರೂಪಾಯಿ ನೆರವು ನೀಡಿದ ಉದ್ಯಮಿ ಸಿ ಎ ಸುನೀಲ್ ಭಂಡಾರಿ ಅವರನ್ನು ಪಟ್ಲ ಸತೀಶ್ ಶೆಟ್ಟಿ ಸನ್ಮಾನಿಸಿದರು. ಫೌಂಡೇಶನ್ ಗೆ ಹೊಸದಾಗಿ ಸೇರ್ಪಡೆಗೊಂಡ ಟ್ರಸ್ಟಿಗಳನ್ನು ಗೌರವಿಸಲಾಯಿತು.
ಲಾವಣ್ಯ ಶೆಟ್ಟಿ ಚೇಳಾರ್ ಪ್ರಾರ್ಥಿಸಿದರು. ಲೀಲಾಧರ ಶೆಟ್ಟಿ ಸ್ವಾಗತಿಸಿದರು. ಗಂಗಾಧರ ಪೂಜಾರಿ ವಂದಿಸಿದರು. ಡಾ ಸುಧಾ ಚಂದ್ರಶೇಖರ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಪಾವಂಜೆ ಮೇಳದಿಂದ ಅಂಬಾ ಶಪಥ-ಗದಾಯುದ್ದ ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.